ಕರ್ನಾಟಕ ಸರ್ಕಾರದಲ್ಲಿ ಮಹತ್ವದ ಬದಲಾವಣೆ: ಡಿಕೆಶಿ ಮುಂದೆ ಗುಟ್ಟು ರಟ್ಟು ಮಾಡಿದ ಸಚಿವ ಕೆಎಸ್ ಮುನಿಯಪ್ಪ
ಬೆಂಗಳೂರು, ಆಗಸ್ಟ್ 15: ಮೊದಲ ಬಾರಿ ಸಚಿವರಾದವರನ್ನು ಬಿಟ್ಟು ಉಳಿದ ಎಲ್ಲ ಹಿರಿಯರೂ ಎರಡೂವರೆ ವರ್ಷ ಮುಗಿಯುತ್ತಿದ್ದಂತೆ ಅಧಿಕಾರ ಬಿಟ್ಟು ಕೊಡಬೇಕು. ಬೇರೆಯವರಿಗೂ ಅವಕಾಶ ಮಾಡಿಕೊಡೋಣ. ಈ ಮೂಲಕ ಪಕ್ಷದಲ್ಲಿ ಹೊಸ ಮಾದರಿಗೆ ನಾಂದಿ ಹಾಡೋಣ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಟಿಕೆಟ್ ಹಂಚಿಕೆ ಒಳಗೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಮಾತು ಕೊಟ್ಟಂತೆ ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿಗೆ ಆದೇಶ ಹೊರಡಿಸಿದ್ದು ಎಲ್ಲದಕ್ಕೂ ಮಾದರಿಯಾಗಿದ್ದೇವೆ. ಅದೇ ರೀತಿ ಅಧಿಕಾರ ತ್ಯಾಗ ಹಾಗೂ ಬೇರೆಯವರಿಗೂ ಅಧಿಕಾರ ಹಂಚಿಕೆ ಮೂಲಕ ಮತ್ತೊಂದು ಮಾಡೆಲ್ ನೀಡಬೇಕಿದೆ ಎಂದರು.

ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಮರೆಯಬಾರದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನಾನಾ ನಿಗಮ, ಮಂಡಳಿಗಳಿಗೆ ಅಧ್ಯಕ್ಷ ಹುದ್ದೆಗೇ ನೇಮಕ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳೂ ಚುನಾವಣೆ ಜವಾಬ್ದಾರಿಗೆ ದೊಡ್ಡ ಮಟ್ಟದಲ್ಲಿ ಹೆಗಲು ಕೊಟ್ಟು ಕೆಲಸ ಮಾಡಿದ್ದು, ಅವರಿಗೂ ಮುಖ್ಯ ಸಮಿತಿಗಳಲ್ಲಿಅಧಿಕಾರ ಮತ್ತು ಸ್ಥಾನಮಾನ ಕೊಡಬೇಕು. ಪಕ್ಷದ ಸರಕಾರದಲ್ಲಿ ಎರಡೂವರೆ ವರ್ಷಗಳಂತೆ ಅಧಿಕಾರವನ್ನು ಭಾಗ ಮಾಡಿ ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ಮುನಿಯಪ್ಪ ಸಲಹೆ ನೀಡಿದರು.
ತಾವು ಮಾತನಾಡುವಾಗ ವೇದಿಕೆಯಲ್ಲಿದ್ದವರು ನಿರ್ಲಕ್ಷ್ಯ ಮಾಡಿದ್ದಕ್ಕೆ ಸಚಿವ ಮುನಿಯಪ್ಪ ಗರಂ ಆದ ಪ್ರಸಂಗವೂ ನಡೆಯಿತು. ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವೇದಿಕೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದನ್ನು ಕಂಡ ಅವರು, ''ಸಲೀಂ ಅಹ್ಮದ್ ನನಗೆ ತೊಂದರೆ ಕೊಡುತ್ತಿದ್ದೀರಿ. ನೀವು ಅಲ್ಲಿ ಚರ್ಚೆ ಮಾಡುವುದಾದರೆ ನಾನೇಕೆ ಮಾತನಾಡಬೇಕು. ಸಿಎಂ ನನ್ನ ಮಾತು ಕೇಳಿಸಿಕೊಳ್ಳುವುದು ಬೇಡವೇ? ನನಗೆ ಡಿಸ್ಟರ್ಬ್ ಆಗುತ್ತಿದೆ ಎಂದು ಹೇಳಿದರು.
ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಇಡೀ ಸಂಪುಟ ಬದಲಾಗಲಿದೆ ಎಂಬ ತಣ್ಣಗಾಗಿದ್ದ ಚರ್ಚೆಯನ್ನು ಮಂತ್ರಿಮಂಡಲದ ಹಿರಿಯ ಸದಸ್ಯರೇ ಆಗಿರುವ ಕೆ.ಎಚ್.ಮುನಿಯಪ್ಪ ಮತ್ತೆ ಹುಟ್ಟುಹಾಕಿದ್ದಾರೆ. ಈಗ ಮುನಿಯಪ್ಪ ಅವರ ಹೇಳಿಕೆ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಸಂಚಲನ ಉಂಟು ಮಾಡಿದೆ.
ಕಾಂಗ್ರೆಸ್ ಸರ್ಕಾದ ಆರಂಭದ ದಿನಗಳಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು. ಬಳಿಕ ಗ್ಯಾರಂಟಿಗಳ ಜಾರಿ ಸಂಬಂಧದಲ್ಲಿ ಸರ್ಕಾರ ವ್ಯಸ್ತವಾಗುವುದರೊಂದಿಗೆ ಸಮುದ್ರದ ಅಲೆ ಇಳಿದು ಎಲ್ಲವೂ ತಣ್ಣಗಾದಂತಾಗಿತ್ತು. ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲೇ ಮುನಿಯಪ್ಪ ಇಂಥದೊಂದು ಹೇಳಿಕೆ ನೀಡಿದ್ದಾರೆ.
ಮುನಿಯಪ್ಪ ಕಾಂಗ್ರೆಸ್ನಲ್ಲಿ ಹಿರಿಯರು. ಯುಪಿಎ ಸರಕಾರದಲ್ಲಿ 10 ವರ್ಷ ಸಚಿವರಾಗಿದ್ದವರು. ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಸಂಪರ್ಕವನ್ನೂ ಹೊಂದಿದ್ದಾರೆ. ಕಾಂಗ್ರೆಸ್ನ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಯಾದ ಸಿಡಬ್ಲ್ಯೂಸಿ ಸದಸ್ಯರೂ ಹೌದು. ಹಾಗಾಗಿ ಮುನಿಯಪ್ಪ ಅವರಂತಹ ಹಿರಿಯ ಸಚಿವರ ಹೇಳಿಕೆಯಿಂದಾಗಿ ಎರಡೂವರೆ ವರ್ಷದ ಬಳಿಕ ರಾಜ್ಯ ಸರ್ಕಾದ ಚುಕ್ಕಾಣಿಯನ್ನು ಹೊಸ ನಾಯಕ ವಹಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಕುತೂಹಲ ಮೂಡುವಂತಾಗಿದೆ.












Click it and Unblock the Notifications