ರಾಜಕೀಯಕ್ಕೆ 'ಸಿದ್ದರಾಮೋತ್ಸವ' ನೀಡಿದ ಮೂರು ಸಂದೇಶಗಳು!
ಬೆಂಗಳೂರು, ಆ.3: ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ರಾಜಕೀಯ ಸಮಾವೇಶಗಳು ರೂಪುಗೊಳ್ಳುವುದು ಸಹಜ. ಆದರೆ, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ನೆಪದಲ್ಲಿ ಲಕ್ಷೋಪಲಕ್ಷ ಜನಗಳ ಮಧ್ಯೆ ನಡೆದ 'ಸಿದ್ದರಾಮೋತ್ಸವ' ಕಾಂಗ್ರೆಸ್ ಪಕ್ಷಕ್ಕೊಂದು ಬೂಸ್ಟರ್ ಡೋಸ್ ನೀಡಿದಂತಾಗಿದೆ. ಈ ಮೂಲಕ ರಾಜ್ಯ ರಾಜಕೀಯಕ್ಕೆ ಪ್ರಮುಖವಾಗಿ ಮೂರು ಸಂದೇಶಗಳನ್ನು ನೀಡಿದೆ.
ಈ ಹಿಂದೆ ನಾನು ಹುಟ್ಟುಹಬ್ಬಗಳನ್ನು ಆಚರಣೆ ಮಾಡಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಅವರು ಹಲವು ಬಾರಿ ಹೇಳಿದ್ದರೂ ಸಹ ಮುಂದಿನ ಚುನಾವಣೆಗೆ ತಮ್ಮನ್ನು ಮತ್ತೊಮ್ಮೆ ಪ್ರಸ್ತುತಪಡಿಸಿಕೊಳ್ಳಲು ಅವರಿಗೆ ಇಂತಹದ್ದೊಂದು ಕಾರ್ಯಕ್ರಮದ ಅಗತ್ಯತೆ ಇತ್ತು. ಅಲ್ಲದೆ, ಪಕ್ಷದ ಹೊರತಾಗಿಯೂ ಸಹ ತಮ್ಮ ವೈಯಕ್ತಿಕ ವರ್ಚಸ್ಸು ಏನು? ನಾಲ್ಕು ದಶಕಗಳ ರಾಜಕೀಯದಲ್ಲಿ ಜನಮಾನಸದಲ್ಲಿ ತಾವು ಉಳಿದಿದ್ದು ಹೇಗೆ ಎಂಬುದನ್ನು ಕಾಂಗ್ರೆಸ್ ದೆಹಲಿ ನಾಯಕರ ಮುಂದೆ ಪ್ರಸ್ತುತಪಡಿಸುವ ಅಗತ್ಯವೂ ಇತ್ತು. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಮುಂದೆ ಸಿದ್ದರಾಮಯ್ಯ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ ಎಂದರೂ ಸಹ ಈ ಸಂದರ್ಭದಲ್ಲಿ ತಪ್ಪಾಗಲಾರದು.
ಸಿದ್ದರಾಮೋತ್ಸವ ಒಂದು ಹುಟ್ಟುಹಬ್ಬದ ಕಾರ್ಯಕ್ರಮವಾಗಿ ಯಶಸ್ವಿಯಾಗಿರುವುದು ಬೇರೆ. ಆದರೆ, ಅದರ ಜೊತೆಗೆ ಕಾಂಗ್ರೆಸ್ ಮತ್ತು ರಾಜ್ಯ ರಾಜಕೀಯಕ್ಕೂ ಸಹ ಕೆಲವು ಸಂದೇಶಗಳನ್ನು ಈ ಮೂಲಕ ರವಾನಿಸಿದೆ.
ಬಣ ಬಿಟ್ಟು ಒಂದಾದ ನಾಯಕರು:
ಕಾಂಗ್ರೆಸ್ ಎಂದರೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೀಗೆ ಎರಡು ಬಣಗಳಿವೆ ಎಂಬುದು ಜಗಜ್ಜಾಹೀರಾಗಿತ್ತು. ಪಕ್ಷದ ನಾಯಕರಿಗೆ ತಾವು ಒಂದೋ ಇಲ್ಲಿರಬೇಕು ಅಥವಾ ಅಲ್ಲಿರಬೇಕು ಎಂಬುದು ಸ್ಪಷ್ಟವಾಗಿದ್ದರೆ ಇತ್ತ ಕಾರ್ಯಕರ್ತರಲ್ಲಿಯೂ ಸಹ ಇದು ಗೊಂದಲ ಉಂಟುಮಾಡಿತ್ತು. ಈ ಗಾಯ ಚುನಾವಣೆ ವೇಳೆಗೆ ಹುಣ್ಣಾಗಬಹುದು ಎಂದು ಆರಿತಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಸ್ವತಃ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಬಂದು ಬಣ ರಾಜಕೀಯಕ್ಕೆ ಅಂತ್ಯವಾಡುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಪರಸ್ಪರ ಆಲಿಂಗಿಸುವ ಮೂಲಕ ಕಾಂಗ್ರೆಸ್ ಒಂದೇ, ಮುಂದೆ ಅಧಿಕಾರ ಹಿಡಿಯುವುದೇ ಗುರಿ ಎಂಬ ಸ್ಪಷ್ಟ ಸಂದೇಶ ರವಾನಿಸಿದರು. ಹೀಗೆ ಒಂದಾಗಿರುವುದರ ಹಿಂದೆ ಏನಾದರೂ ಒಪ್ಪಂದಗಳಿವೆಯೇ ಎಂಬುದು ಮುಂದಿನ ದಿನಗಳಲ್ಲಿ ತೆರೆದುಕೊಳ್ಳಬಹುದು.
ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗಲು ಬೂಸ್ಟರ್ ಡೋಸ್:
ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಈಗಲೇ ಹರಿಬಿಟ್ಟಿರುವುದರ ಉದ್ದೇಶವೂ ಸಹ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ತುಂಬುವುದಕ್ಕೂ ಆಗಿರಬಹುದು. ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಯಕರೂ ಸಹ ಮಾತನಾಡುತ್ತಾ ಯಾವುದೇ ಸಂದರ್ಭದಲ್ಲಿ ಚುನಾವನೆ ಬಂದರೂ ನಾವು ಸಿದ್ಧ ಎಂದು ರಣಕಲಿಗಳಂತೆ ಮಾತನಾಡಿದರು. ಪರ್ಸೆಂಟೇಜ್ ಹಗರಣದಲ್ಲಿ ಮಗ್ನವಾಗಿರುವ ಬಿಜೆಪಿ ಸರ್ಕಾರವನ್ನು ತೊಲಗಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂಬ ಸಂದೇಶವನ್ನು ಈಗಲೇ ಘೋಷಣೆ ಮಾಡಿದರು.
ಕಾಂಗ್ರೆಸ್ನ ಎಲ್ಲ ನಾಯಕರು ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ಚುನಾವಣೆಗೆ ಸಿದ್ದವಾಗಲು ಕಾಂಗ್ರೆಸ್ಗೆ ಇದು ಬೂಸ್ಟರ್ ಡೋಸ್ ನೀಡಿದಂತಾಗಿದೆ.
ಕೋಮುವಾದ ಬಿಟ್ಟು, ಅಭಿವೃದ್ಧಿ ಹೆಸರಲ್ಲಿ ರಾಜಕಾರಣ:
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದಾಗ ಮುಂದಿನ ಚುನಾವಣೆ ಅಭಿವೃದ್ಧಿ ವಿಷಯಗಳಿಗಿಂತ ಕೋಮು ವಿಷಯಗಳೇ ಪಾಧಾನ್ಯತೆ ಪಡೆದುಕೊಳ್ಳಬಹುದು ಎಂದು ಆಲೋಚಿಸಲಾಗಿತ್ತು. ಆದರೆ, ಸಿದ್ದರಾಮೋತ್ಸವ ಇಂತಹ ಆಲೋಚನೆಯನ್ನು ದೂರ ಮಾಡಿದೆ. ಯಾವುದೇ ಒಂದು ವರ್ಗದ ಪರವಾದ ಮಾತುಗಳು ಕೇಳದೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೇ ಇಡೀ ಸಮಾವೇಶ ಕೇಂದ್ರೀಕರಿಸಿದಂತಿತ್ತು. ಅಲ್ಲದೆ, ಬಿಜೆಪಿ ಕೋಮುವಾದದ ಮೂಲಕ ರಾಜ್ಯವನ್ನು ಪಡೆಯುವ ಪ್ರಯತ್ನ ಮಾಡುತ್ತಿದೆ ಎಂಬುದನ್ನೂ ಸಹ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಆ ಮೂಲಕ ಒಂದು ವರ್ಗ, ಕೋಮುಗಳನ್ನು ಓಲೈಸದೆ ಸಾಮುದಾಯಿಕವಾಗಿ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯಕತೆ ಇದೆ ಎಂಬ ಸಂದೇಶ ರವಾನಿಸಿದೆ.