ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಮೇ 31: ಅಮೇರಿಕಾ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕೋವಿಡ್-19 ರಿಂದ ಸಂಕಷ್ಟಕ್ಕೊಳಗಾಗಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
Recommended Video
ತಾವು ಅನಿವಾಸಿ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಂತಹ ಸಂದರ್ಭದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಅನಿವಾಸಿ ಕನ್ನಡಿಗರಲ್ಲಿ ಬಹುಪಾಲು ಜನರು ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್ಗಳು, ತಂತ್ರಜ್ಞರುಗಳು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಇದ್ದಾರೆ. ಅನಿವಾಸಿ ಕನ್ನಡಿಗರಲ್ಲಿ ಬಹುತೇಕರು ಕರ್ನಾಟಕಕ್ಕೆ ವಾಪಸ್ಸಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ವಾಪಸ್ಸಾಗುವ ಪ್ರಕ್ರಿಯೆಯಲ್ಲಿ ಹಲವು ರೀತಿಯ ತೊಡಕುಗಳನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಸಿದ್ಧರಾಮಯ್ಯ ಉಲ್ಲೇಖಿಸಿದ್ದಾರೆ.
ನೆದರ್ ಲ್ಯಾಂಡ್ ಮುಂತಾದ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಆಮ್ಸ್ಟರ್ಡ್ಯಾಂ ನಿಂದ ಬೆಂಗಳೂರಿಗೆ ನೇರವಾಗಿ ಬರಲಾಗುತ್ತಿಲ್ಲ. ಆಮ್ಸ್ಟರ್ಡ್ಯಾಂ ನಿಂದ ದೆಹಲಿಗೆ ಮಾತ್ರ ವಿಮಾನ ಸಂಚರಿಸುತ್ತಿವೆ. ಹಾಗಾಗಿ ಈ ಪ್ರಯಾಣಿಕರು ದೆಹಲಿಗೆ ಬಂದು ಅಲ್ಲಿ ಕ್ವಾರಂಟೈನ್ ನಲ್ಲಿದ್ದು ಆ ನಂತರ ಬೆಂಗಳೂರಿಗೆ ಪ್ರಯಾಣ ಮಾಡಿ ಬೆಂಗಳೂರಿನಲ್ಲಿಯೂ ಸಹ ಕ್ವಾರಂಟೈನ್ ನಲ್ಲಿ ಇರಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಆದ್ದರಿಂದ ಈ ಪ್ರಯಾಣಿಕರು ನೇರವಾಗಿ ಬೆಂಗಳೂರಿಗೆ ಬರಲು ಅಗತ್ಯ ಕ್ರಮ ಕಲ್ಪಿಸಬೇಕು. ವಾಪಸ್ಸಾಗಲು ಉದ್ದೇಶಿಸಿರುವವರನ್ನು ಮರಳಿ ತಾಯ್ನಾಡಿಗೆ ಕರೆತರಲು ವಿಮಾನಗಳ ಸೌಲಭ್ಯ ಸಂಬಂಧ ವಿದೇಶಾಂಗ ಸಚಿವಾಲಯದೊಂದಿಗೆ ವ್ಯವಹರಿಸಿ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ವಿಮಾನಗಳು ಹೊರದೇಶಗಳಿಂದ ಬಂದ ಕನ್ನಡಿಗರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ, ಅವರಲ್ಲಿ ಸೊಂಕಿತರಿದ್ದರೆ ಸೂಕ್ತ ರೀತಿಯ ಚಿಕಿತ್ಸೆ ನೀಡಿ, ಉಳಿದವರನ್ನು ಕ್ವಾರಂಟೈನ್ ನಲ್ಲಿ ಇರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರದಲ್ಲಿ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.












Click it and Unblock the Notifications