ಲೋಕಸಭೆ ಚುನಾವಣೆ 2019: ಸಿದ್ದರಾಮಯ್ಯ ಹೆಗಲಿಗೆ ರಾಜ್ಯ ಉಸ್ತುವಾರಿ
Recommended Video

ಬೆಂಗಳೂರು, ಜುಲೈ 24: ಲೋಕಸಭೆ ಚುನಾವಣೆಯ ರಾಜ್ಯದ ಸಂಪೂರ್ಣ ಉಸ್ತುವಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಹೆಗಲಿಗೆ ನೀಡಿದೆ.
ಈಗಾಗಲೇ ಸಮನ್ವಯ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ಸಭೆ ನಾಯಕ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವ ಸಿದ್ದರಾಮಯ್ಯ ಅವರ ಹೆಗಲಿಗೆ ಪಕ್ಷವು ಮತ್ತೊಂದು ಪ್ರಮುಖವಾದ ಜವಾಬ್ದಾರಿಯನ್ನು ನೀಡಿದೆ.
ನಿನ್ನೆ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಈ ಸಮಯದಲ್ಲಿ ಲೋಕಸಭೆ ಚುನಾವಣೆಗೆ ರಾಜ್ಯದ ಉಸ್ತುವಾರಿಯನ್ನು ಸಿದ್ದರಾಮಯ್ಯ ಅವರಿಗೆ ರಾಹುಲ್ ನೀಡಿದ್ದಾರೆ.

ಸಿದ್ದರಾಮಯ್ಯಗೆ ಏಕೆ ಹೊಣೆ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಉಸ್ತುವಾರಿಯಲ್ಲೇ 9 ಸೀಟುಗಳನ್ನು ಕಾಂಗ್ರೆಸ್ ಗೆದ್ದಿತ್ತು. ಮೋದಿ ಹವ ಹೆಚ್ಚಿಗಿದ್ದರೂ ಸಿದ್ದರಾಮಯ್ಯ ನೇತೃತ್ವದಲ್ಲಿ 9 ಸೀಟು ಗೆದ್ದಿದ್ದು ಕಡಿಮೆ ಸಾಧನೆಯಲ್ಲ ಎಂದೇ ಪರಿಗಣಿತವಾಗಿತ್ತು. ಹಾಗಾಗಿ ಈ ಬಾರಿಯೂ ಅವರಿಗೇ ಹೊಣೆ ಹೊರಿಸಲಾಗಿದೆ.

ಮೋದಿ ಎದುರಿಸುವ ಸಾಮರ್ಥ್ಯ
ಕಳೆದ ಚುನಾವಣೆಯಲ್ಲಿ ಅಂತಿಮ ಹಂತದ ವರೆಗೆ ಸಿದ್ದರಾಮಯ್ಯ ಅವರು ಮೋದಿ ಅಲೆಯನ್ನು ತಡೆಯಲು ಯಶಸ್ವಿಯಾಗಿದ್ದರು. ಈಗಲೂ ರಾಜ್ಯ ಕಾಂಗ್ರೆಸ್ನಲ್ಲಿ ಅಲ್ಪ ಮಟ್ಟಿಗಾದರೂ ಮೋದಿಯನ್ನು ಎದುರಿಸವ ಸಾಮರ್ಥ್ಯ ಇರುವುದು ಸಿದ್ದರಾಮಯ್ಯ ಅವರಿಗೆ ಮಾತ್ರವೇ ಎಂದು ಕಾಂಗ್ರೆಸ್ನ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ ಹಾಗಾಗಿ ಸಿದ್ದರಾಮಯ್ಯಗೆ ಲೋಕಸಭೆ ಚುನಾವಣೆ ಜವಾಬ್ದಾರಿ ಹೊರಿಸಲಾಗಿದೆ.

ಜೆಡಿಎಸ್ ಮುಖಂಡರೊಂದಿಗೆ ಉತ್ತಮ ಸಂಬಂಧ
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದು, ಜೆಡಿಎಸ್ನಿಂದಲೇ ಕಾಂಗ್ರೆಸ್ಗೆ ಬಂದಿರುವ ಸಿದ್ದರಾಮಯ್ಯಗೆ ಜೆಡಿಎಸ್ನ ಹಲವು ಮುಖಂಡರು ಶಾಸಕರೊಂದಿಗೆ ಉತ್ತಮ ಸಂಬಂಧವಿದೆ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆ ಸಹ ಇರುವ ಕಾರಣ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಷ್ಟೆ ಅಲ್ಲದೆ, ಮೈತ್ರಿಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಲಾಭವಾಗುವಂತೆ ಮಾಡಬಲ್ಲ ಛಾತಿ ಸಹ ಸಿದ್ದರಾಮಯ್ಯರಿಗೆ ಇದೆ ಎಂಬುದು ಹೈಕಮಾಂಡ್ ನಂಬಿಕೆ.

ಸಿದ್ದರಾಮಯ್ಯ ಬೆಂಬಲಿಗರು ಹೆಚ್ಚು
ಸರ್ಕಾರದಲ್ಲಿ ನೇರವಾಗಿ ಸಿದ್ದರಾಮಯ್ಯ ಅವರು ಭಾಗಿಯಾಗಿಲ್ಲವಾದರೂ ಪ್ರಸ್ತುತ ಹಲವು ಕಾಂಗ್ರೆಸ್ ಸಚಿವರು, ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಿಗರೇ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದರೆ ಚುನಾವಣೆ ಸಮಯದಲ್ಲಿ ಕಷ್ಟವಾಗುವ ಸಾಧ್ಯತೆ ಇರುವ ಕಾರಣ ಹೈಕಮಾಂಡ್ ಚತುರ ಹೆಜ್ಜೆ ಇಟ್ಟಿದೆ.

ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿ
ಕಾಂಗ್ರೆಸ್ನ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಅವರಿಗೆ ಮಹಾರಾಷ್ಟ್ರದ ಕಾಂಗ್ರೆಸ್ ಉಸ್ತುವಾರಿ ವಹಿಸಲಾಗಿದೆ ಹಾಗಾಗಿ ಖರ್ಗೆ ಅವರ ಬದಲಿಗೆ ರಾಜ್ಯ ಉಸ್ತುವಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಿದೆ ಹೈಕಮಾಂಡ್.

ಸಿದ್ದರಾಮಯ್ಯ ಅವರ ಅಸಮಾಧಾನ ದೂರ
ಸರ್ಕಾರಕ್ಕೆ ಪತ್ರಗಳನ್ನು ಬರೆಯುತ್ತಾ ತಮ್ಮ ಅಸಹನೆ ಹೊರಹಾಕುತ್ತಿರುವ ಸಿದ್ದರಾಮಯ್ಯ ಅವರಿಗೆ ಪ್ರಮುಖ ಜವಾಬ್ದಾರಿಯನ್ನು ಹೊರಿಸುವ ಮೂಲಕ ಅವರ ಅಸಮಾಧಾನವನ್ನು ಹೈಕಮಾಂಡ್ ಶಮನ ಮಾಡಿದೆ. ಜೊತೆಗೆ ಸರ್ಕಾರದ ಮೇಲಿದ್ದ ಸಿದ್ದರಾಮಯ್ಯ ನೆರಳನ್ನು ಬದಿಗೆ ಸರಿಸಿದೆ. ಕುಮಾರಸ್ವಾಮಿ ಅವರು ಈ ಬಗ್ಗೆ ರಾಹುಲ್ ಅವರಿಗೆ ದೂರು ನೀಡಿದ್ದರು ಎನ್ನಲಾಗಿತ್ತು. ಹೈಕಮಾಂಡ್ ಈ ನಿರ್ಧಾರದಿಂದ ಕುಮಾರಸ್ವಾಮಿ ಸಹ ನಿರಾಳ ಆಗಲಿದ್ದಾರೆ.

ದಿನೇಶ್ ಗುಂಡೂರಾವ್ ಇನ್ನೂ ಹೊಸಬರು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇನ್ನೂ ಹೊಸಬರಾಗಿದ್ದು, ಪೂರ್ಣವಾಗಿ ಪಾರ್ಟಿಯ ಮೇಲೆ ಅವರಿಗೆ ಹಿಡಿತ ದೊರೆತಿಲ್ಲ ಹಾಗಾಗಿ ಅವರ ಬದಲಿಗೆ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಪಕ್ಷವನ್ನು ಬೇರು ಮಟ್ಟದಿಂದ ಬಲ ಪಡಿಸುವ ಕಾರ್ಯ ದಿನೇಶ್ ಹೆಗಲಿಗೆ ನೀಡಲಾಗಿದೆ.












Click it and Unblock the Notifications