ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ; ಯತೀಂದ್ರ ಕೊಟ್ಟರು ಸುಳಿವು!
ಬೆಂಗಳೂರು, ಅಕ್ಟೋಬರ್ 17; "ವರುಣಾ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅಪ್ಪ ತೀರ್ಮಾನ ಮಾಡಿದರೆ ನಾನು ಪಕ್ಷದ ಶಾಸಕ, ಆ ಕ್ಷೇತ್ರದ ಹಿಂದಿನ ಶಾಸಕನಾಗಿ ಅವರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ನಾನು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ" ಎಂದು ವರುಣಾ ಕ್ಷೇತ್ರದ ಶಾಸಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, "ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುತ್ತಾರಾ? ಎಂದು ಸಾಕಷ್ಟು ಜನರು ಕೇಳಿದ್ದಾರೆ. ನಾನು ಸಹ ಸಾಕಷ್ಟು ಬಾರಿ ಉತ್ತರ ನೀಡಿದ್ದೇನೆ" ಎಂದರು.
"ತಂದೆಯವರು ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ. ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿದರೆ ನಾವು ಬದ್ಧರಾಗಿದ್ದೇವೆ. ವರುಣಾದಲ್ಲಿಯಾದರೂ ನಿಲ್ಲಬಹುದು. ಬೇರೆ ಕಡೆಯಾದರೂ ನಿಲ್ಲಬಹುದು" ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಸದ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕರು. ಮುಂದಿನ ಚುನಾವಣೆಗೆ ಅವರು ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರು ಚಾಮರಾಜಪೇಟೆ, ಕೋಲಾರ, ಚಿಕ್ಕನಾಯಕನಹಳ್ಳಿ, ವರುಣಾ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಣಕ್ಕಿಳಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಇನ್ನೂ ಅಂತಿಮ ತೀರ್ಮಾನ ಪ್ರಕಟಿಸಿಲ್ಲ.

ಪ್ರಚಾರ ಮಾಡುತ್ತೇನೆ ಕ್ಷೇತ್ರ ತ್ಯಾಗವಲ್ಲ
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, "ಬೇರೆ ಕಡೆಯಲ್ಲೂ ಅವರನ್ನು ಕರೆಯುತ್ತಿದ್ದಾರೆ. ವರುಣಾದಲ್ಲಿ ನಿಲ್ಲಬೇಕು ಎಂದು ಅಪ್ಪ ತೀರ್ಮಾನ ಮಾಡಿದರೆ ನಾನು ಕ್ಷೇತ್ರದ ಹಿಂದಿನ ಶಾಸಕನಾಗಿ ಅವರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಅಪ್ಪ ನಿಂತರೆ ನಾನು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಕ್ಷೇತ್ರ ತ್ಯಾಗ ಏನೂ ಅಲ್ಲ, ತಂದೆ ನಿಲ್ಲುತ್ತಾರೆ ಎಂದರೆ ಬೇರೆಯವರು ಬಿಟ್ಟುಕೊಡುತ್ತಾರೆ. ನಾನು ಕೂಡಾ ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರ ಬಿಟ್ಟು ಕೊಡುತ್ತೇನೆ" ಎಂದರು.

ಅದು ಅವರ ಅಭಿಪ್ರಾಯ ಎಂದ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಅದು ಅವರ ಅಭಿಪ್ರಾಯ, ನನ್ನ ಅಭಿಪ್ರಾಯ ಬೇರೆ, ಅವರ ಅಭಿಪ್ರಾಯ ಬೇರೆ" ಎಂದು ಹೇಳಿದ್ದಾರೆ.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆಲುವು ಕಂಡಿದ್ದರು.

ಇಂದು ನಿನ್ನೆಯ ಚರ್ಚೆಯಲ್ಲ
2023ರ ಚುನಾವಣೆಗೆ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ? ಎಂಬ ಸುದ್ದಿ ಇಂದು ನಿನ್ನೆಯದಲ್ಲ. ಕಳೆದ ಒಂದು ವರ್ಷದಿಂದ ಈ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಹಲವು ಬಾರಿ ಸಿದ್ದರಾಮಯ್ಯ ಸಹ ಈ ಕುರಿತು ಮಾತನಾಡಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ? ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಬಿ. ಬಿ. ಚಿಮ್ಮನಕಟ್ಟಿ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟಿದ್ದರು. ಸಿದ್ದರಾಮಯ್ಯ ಚುನಾವಣೆಯಲ್ಲಿ 67,599 ಮತಗಳನ್ನು ಪಡೆದು ಗೆದ್ದಿದ್ದರು. ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದಲೇ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರು ಬಿ. ಬಿ. ಚಿಮ್ಮನಕಟ್ಟಿಗೆ ಕ್ಷೇತ್ರ ಕೊಟ್ಟು ಬೇರೆ ಕ್ಷೇತ್ರದಿಂದ ಕಣಕ್ಕಿಳಿಯುವ ಸುದ್ದಿಗಳು ಹಬ್ಬಿವೆ.

ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ
ಕ್ಷೇತ್ರ ಬದಲಾವಣೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದಾರೆ. "ನನಗೆ ಜನರು ಎಲ್ಲಿ ಪ್ರೀತಿಯಿಂದ ಕರೆಯುತ್ತಾರೋ ಅಲ್ಲಿ ಚುನಾವಣೆಗೆ ನಿಲ್ಲುವೆ. ಬಾದಾಮಿಯಲ್ಲಿ ಕರೆಯುತ್ತಾರೆ, ಮುಂದಿನ ಬಾರಿ ಅಲ್ಲಿಯೇ ನಿಲ್ಲುತ್ತೇನೆ" ಎಂದು ಹೇಳಿದ್ದಾರೆ.
ಕೋಲಾರ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಬೆಂಗಳೂರಿನ ಹೆಬ್ಬಾಳ ಹೀಗೆ ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯಗೆ ಆಹ್ವಾನವಿದೆ. ಕುರಿತು ಮಾತನಾಡಿದ್ದ ಸಿದ್ದರಾಮಯ್ಯ, "ಹೈಕಮಾಂಡ್ ಹೇಳಿದ ಕಡೆ ಚುನಾವಣೆಗೆ ನಿಲ್ಲುತ್ತೇನೆ" ಎಂದು ತಿಳಿಸಿದ್ದರು.












Click it and Unblock the Notifications