ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಏಪ್ರಿಲ್ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ಟೆಂಡರ್ ಕುರಿತು ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ದೂರು ನೀಡಿದೆ.
ಸರ್ಕಾರದಿಂದ ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿಯ ಆಸ್ಪತ್ರೆಗಳಲ್ಲಿ ಖಾಸಗಿ ಲ್ಯಾಬ್ ನಿರ್ಮಾಣಕ್ಕಾಗಿ ಮ್ಯಾಟ್ರಿಕ್ಸ್ ಕಂಪನಿಗೆ ನೀಡಲಾಗಿರುವ ಗುತ್ತಿಗೆಯಲ್ಲಿ ಆಗಿರುವ ಅವ್ಯವಹಾರ ಮತ್ತು ನಿಯಮಗಳ ಉಲ್ಲಂಘನೆಯ ಬಗ್ಗೆ ತನಿಖೆಯಾಗಬೇಕೆಂದು ಮನವಿ ಮಾಡಿ ದೂರು ನೀಡಲಾಗಿದೆ. [ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?]

ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ನಿರ್ದೇಶಕರಾದ ಬಳಿಕ ಮೂರು ಟೆಂಡರ್ ಸಿಕ್ಕಿತ್ತು. ಈ ಟೆಂಡರ್ ನಿಯಮಾವಳಿಯ ಉಲ್ಲಂಘನೆ, ಅವ್ಯವಹಾರ, ಅಧಿಕಾರದ ದುರ್ಬಳಕೆ, ಮುಂತಾದವು ಎದ್ದು ಕಾಣುತ್ತಿದ್ದು, ಈ ಬಗ್ಗೆ ತನಿಖೆ ನಡೆಬೇಕೆಂದು ಕೋರಲಾಗಿದೆ. [ಸಿದ್ದರಾಮಯ್ಯ ಮಗನಿಗೆ ಸಿಕ್ಕಿದ್ದು ಇದೊಂದೇ ಪ್ರಾಜೆಕ್ಟಾ?]
ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಅವರು ಯಡಿಯೂರಪ್ಪನವರ ದಾಖಲೆ ಮುರಿಯುತ್ತಿದ್ದಾರೆ. ಇದರಲ್ಲಿ ಟೆಂಡರಿಂಗ್ ಪ್ರಕ್ರಿಯೆಯೇ ಒಂದು ಚೆಲ್ಲಾಟವಾಗಿದ್ದು ಕೇವಲ ಒಂದೇ ಕಂಪನಿ ಭಾಗವಹಿಸಿ ಗುತ್ತಿಗೆ ಪಡೆದಿರುವುದನ್ನು ವಿಶೇಷಾಧಿಕಾರಿ ಖಚಿತಪಡಿಸಿರುತ್ತಾರೆ. ಆದ್ದರಿಂದ, ಈ ಬಗ್ಗೆ ತನಿಖೆಯಾಗಬೇಕು ಎಂದು ಮನವಿ ಮಾಡಲಾಗಿದೆ. [ವಜ್ರ ಖಚಿತ ಉಬ್ಲೋ ವಾಚ್ ಬಗ್ಗೆ ಎಸಿಬಿಗೆ ಮೊದಲ ದೂರು!]
ದುಬಾರಿ ವಾಚ್ ಪ್ರಕರಣ ಮರೆತಿಲ್ಲ : ರಾಜ್ಯದ ಜನರು ಮುಖ್ಯಮಂತ್ರಿಗಳ ದುಬಾರಿ ವಾಚ್ ಪ್ರಕರಣವನ್ನು ಇನ್ನೂ ಮರೆತಿಲ್ಲ. ಒರ್ವ ಕಳ್ಳಸಿಕ್ಕಿಬಿದ್ದ ನಂತರ ಕದ್ದ ಮಾಲನ್ನು ಹಿಂತಿರುಗಿಸುವಂತೆ ಆಡುವ ನಾಟಕವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ.
ಮಾಡಿರುವ ಅಪರಾಧಕ್ಕೆ ಅವರಿಗೆ ಶಿಕ್ಷೆ ಮಾತ್ರ ಇನ್ನು ಆಗಿಲ್ಲ. ಅದೇ ರೀತಿ ಡಾ.ಯತೀಂದ್ರರ ಖಾಸಗಿ ಕಂಪನಿಯ ನಿರ್ದೇಶಕರ ಹುದ್ದೆಯಿಂದ ರಾಜೀನಾಮೆ ಸಹ ಒಂದು ನಾಟಕ ಅಷ್ಟೇ. ಇಲ್ಲಿ ಮುಖ್ಯವಾಗಿರುವುದು ಓರ್ವ ಮುಖ್ಯಮಂತ್ರಿಯಿಂದ ತನ್ನ ಕುಟುಂಬದ ಸದಸ್ಯರ ಹಿತಕ್ಕಾಗಿ ಅಧಿಕಾರದ ದುರ್ಬಳಕೆ ಮತ್ತು ಸರಕಾರಿ ನಿಯಮಗಳ ಉಲ್ಲಂಘನೆ ಮಾಡಿರುವುದು.
ಆದ್ದರಿಂದ ಈ ಬಗ್ಗೆ ತನಿಖೆ ಕೂಡಲೇ ಪ್ರಾರಂಭವಾಗಬೇಕು. ಭ್ರಷ್ಟಾಚಾರ ನಿಗ್ರಹದಳ ಸ್ವತಃ ಮುಖ್ಯಮಂತ್ರಿಗಳ ಆಧೀನದಲ್ಲಿರುವುದರಿಂದ ಅದು ಕೂಡಲೇ ಕಾರ್ಯಪ್ರವೃತ್ತವಾಗುವ ಸಾಧ್ಯತೆ ಇಲ್ಲ. ಆದ್ದರಿಂದ, ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ.












Click it and Unblock the Notifications