ಮಹಿಳಾ ಕಾರ್ಯಕರ್ತೆ ಜತೆ ಜಟಾಪಟಿ: ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜನವರಿ 28: ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರ ಮೇಲೆ ಸಿಟ್ಟಾಗಿ ಏರು ದನಿಯಲ್ಲಿ ವಾಗ್ವಾದ ಮಾಡಿ, ಮೈಕು ಕಿತ್ತುಕೊಂಡ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಮಗ ಶಾಸಕರಾಗಿರುವ ವರುಣಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತೆಯರ ಸಭೆ ಇತ್ತು. ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಮಲಾರ್ ಅವರು ಶಾಸಕರು ನಮ್ಮ ಕೈಗೆ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಅವರ ಬಳಿ ದೂರು ಹೇಳಿ ವಾಗ್ವಾದಕ್ಕೆ ಇಳಿದರು.
ವಾಗ್ವಾದ ದೀರ್ಘವಾದ ಸಿಟ್ಟಿಗೆದ್ದ ಸಿದ್ದರಾಮಯ್ಯ ಮಹಿಳೆಯ ಕೈಯಿಂದ ಮೈಕು ಕಸಿದುಕೊಂಡು, ಅವರನ್ನು ಕೂರುವಂತೆ ಹೇಳಿದರು. ಜೋರು ದನಿಯಲ್ಲಿ ಮಹಿಳೆಯೊಂದಿಗೆ ಮಾತನಾಡಿದರು. ಈ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಿಜೆಪಿ ಇದನ್ನು ತೀವ್ರವಾಗಿ ಟೀಕಿಸಿತ್ತು. ಆದರೆ ಘಟನೆಗೆ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಿದ್ದಾರೆ.
|
ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ
ಘಟನೆ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ ನಾನು ಬಲ್ಲ ಆ ಕಾರ್ಯಕರ್ತೆ ನನ್ನಸೋದರಿ ಸಮಾನ. ಎಂದು ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
|
'ಆ ಹೆಣ್ಣಿಗೆ ಅವಮಾನ ಮಾಡುತ್ತಿದೆ ಬಿಜೆಪಿ'
ಮತ್ತೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಕಾರ್ಯಕರ್ತೆ ಜಮಲಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣುಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಇರುವ ಗೌರವ ಲೋಕಕ್ಕೆ ಗೊತ್ತು. ಇವರಿಂದ ನಾನು ಕಲಿಯುವುದೇನಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
|
ಮಹಿಳೆ ಜಮಲಾರ್ ಪ್ರತಿಕ್ರಿಯೆ
ಘಟನೆ ಬಗ್ಗೆ ಮಹಿಳೆ ಜಮಾಲಾರ್ ಸಹ ಪ್ರತಿಕ್ರಿಯೆ ನೀಡಿದ್ದು, ನಾನು ಟೇಬಲ್ ಮೇಲೆ ಕುಟ್ಟಿ ಸಿಟ್ಟಿನಿಂದ ಮಾತನಾಡಿದ್ದಕ್ಕೆ ಅವರು ಸಿಟ್ಟಾದರು. ಸಿದ್ದರಾಮಯ್ಯ ಬಹಳ ಒಳ್ಳೆಯವರು. ಯತೀಂದ್ರ ಅವರು ಸಹ ಎಲ್ಲರ ಕೈಗೂ ಸಿಗುತ್ತಾರೆ ಆದರೆ ನನಗೆ ಸ್ಥಳೀಯರೇ ಅದರ ಬಗ್ಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ ಎಂದಿದ್ದಾರೆ.
|
ಸಿದ್ದರಾಮಯ್ಯರ ದುಶ್ಯಾಸನ ಎಂದ ಬಿಜೆಪಿ
ಬಿಜೆಪಿ ಈಗಾಗಲೇ ಘಟನೆ ಬಗ್ಗೆ ಸರಣಿ ಟ್ವೀಟ್ ಪ್ರಾರಂಭಿಸಿದ್ದು, ಸಿದ್ದರಾಮಯ್ಯ ಅವರು ಮಹಿಳೆಯಿಂದ ಮೈಕ್ ಕಸಿದುಕೊಳ್ಳುತ್ತಿರುವ ವಿಡಿಯೋವನ್ನು ಟ್ವಿಟ್ಟರ್ಗೆ ಹಾಕಿ, ಕೌರವ ರಾಜ್ಯದಲ್ಲೊಬ್ಬ ದುಶ್ಯಾಸನ ಎಂದು ಬರೆದಿದ್ದಾರೆ. ಸಿದ್ದರಾಮಯ್ಯ ಮೈಕ್ ಕಸಿಯುವ ವೇಳೆಯಲ್ಲಿ ಮಹಿಳೆಯ ದುಪಟ್ಟಾ ಸಹ ಸಿದ್ದರಾಮಯ್ಯ ಕೈಗೆ ಬಂದುಬಿಡುತ್ತದೆ. ಇದನ್ನೇ ಗುರಿಯಾಗಿಸಿ ಸಿದ್ದರಾಮಯ್ಯ ಅವರನ್ನು ದುಶ್ಯಾಸನನಿಗೆ ಬಿಜೆಪಿ ಹೋಲಿಸಿದೆ.












Click it and Unblock the Notifications