'ಭಾವೀ ಸಿಎಂ ಸಿದ್ದರಾಮಯ್ಯ' ಕೂಗು: ಕಾಂಗ್ರೆಸ್ ಬಣದ ಪಲ್ಸ್ ಟೆಸ್ಟಿಂಗ್ ತಂತ್ರಗಾರಿಕೆ?
ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದ ಪೈಕಿ, ಒಂದು ಬಣ ಸಿದ್ದರಾಮಯ್ಯನವರೇ ಭಾವೀ ಮುಖ್ಯಮಂತ್ರಿ ಎಂದು ಹೇಳುವ ಮೂಲಕ, ಇತರ ಬಣದ ನಾಡಿಮಿಡಿತ ಪರೀಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರಾ?
ಸಿದ್ರಾಮಣ್ಣನೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎನ್ನುವುದು ಹೇಳಿಕೆ ನೀಡಿದವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ, ಅದನ್ನು ಹೇಳಲು ಸಾರ್ವಜನಿಕ ವೇದಿಕೆ ಯಾಕೆಬೇಕು, ಪಕ್ಷದೊಳಗೆ ಈ ವಿಚಾರ ಯಾಕೆ ಪ್ರಸ್ತಾವನೆಯಾಗುತ್ತಿಲ್ಲ ಎನ್ನುವುದಿಲ್ಲಿ ಪ್ರಶ್ನೆ.
ಸಿದ್ದರಾಮಯ್ಯನವರ ಪರಮಾಪ್ತ ಜಮೀರ್ ಅಹ್ಮದ್ ಖಾನ್ ಅವರು ಕೆಪಿಸಿಸಿ ಅಧ್ಯಕ್ಷರ ಎಚ್ಚರಿಕೆಗೂ ತಲೆಕೆಡಿಸಿಕೊಳ್ಳದೇ ಸಿದ್ದರಾಮಯ್ಯನವರು ಸಿಎಂ ಆಗಬೇಕೆಂದು ಜನ ಬಯಸುತ್ತಿದ್ದಾರೆ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಾರೆ.
ಜಮೀರ್ ಹೇಳಿಕೆಗೆ ಇನ್ನೂ ಮೂವರು ಕಾಂಗ್ರೆಸ್ ಮುಖಂಡರು ಧ್ವನಿಗೂಡಿಸುವ ಮೂಲಕ, ಆ ವಿಚಾರವನ್ನು ಮುನ್ನಲೆಯಿಂದ ಜಾರದಂತೆ ಚಾಲ್ತಿಯಲ್ಲಿಟ್ಟಿದ್ದಾರೆ. ಆ ಮೂಲಕ, ಮುಂದೆ ನಡೆಯಬೇಕಾಗಿರುವ ರಾಜ್ಯ ಅಸೆಂಬ್ಲಿ ಚುನಾವಣೆಗೆ ಯಾರ ನೇತೃತ್ವದಲ್ಲಿ ಜನರ ಮುಂದೆ ಹೋಗಬೇಕು ಎನ್ನುವುದಕ್ಕೆ ಈಗಲೇ ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದಾರಾ?

ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಎಂದು ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ
"ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಎಂದು ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಜನರು ಕೂಡಾ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಇದು ನನ್ನ ಅಭಿಪ್ರಾಯ" ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದರು. "ಜಮೀರ್ ಔದಾರ್ಯದ ರಾಜಕಾರಣಿ, ನನ್ನ ಮೇಲಿನ ಅಭಿಮಾನದಿಂದ ಆ ಮಾತನ್ನು ಹೇಳುತ್ತಿದ್ದಾರೆ"ಎಂದು ಸಿದ್ದರಾಮಯ್ಯ ಕೂಡಾ ಹೇಳುವ ಮೂಲಕ ಜಮೀರ್ ಹೇಳಿಕೆಗೆ ವಿರೋಧವನ್ನು ವ್ಯಕ್ತ ಪಡಿಸಿರಲಿಲ್ಲ.

ಜಮೀರ್ ಹೇಳಿಕೆಗೆ ಧ್ವನಿಗೂಡಿಸಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್
"ಸಿದ್ದರಾಮಯ್ಯನವರು ಸಿಎಂ ಆಗಬೇಕೆಂದು ಜನ ಹೇಳುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ, ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯ ಸರಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ. ಈ ವೇಳೆ ಜನರು ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಮಾಡಿದ ಕೆಲಸವನ್ನು ನೆನಪಿಸಿಕೊಳ್ಳುತ್ತಿದ್ದಾರೆ" ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳುವ ಮೂಲಕ, ಜಮೀರ್ ಧ್ವನಿಗೆ ಧ್ವನಿಗೂಡಿಸಿದ್ದಾರೆ.

ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಮತ್ತು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್
ಇನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕರಾದ ಜೆ.ಎನ್.ಗಣೇಶ್ ಮತ್ತು ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮಾ ನಾಯ್ಕ್ ಕೂಡಾ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದಾರೆ. "ನಮ್ಮ ಪಕ್ಷದ ಹೈಕಮಾಂಡಿನ ತೀರ್ಪಿಗೆ ನಾವು ಬದ್ದರಿರುತ್ತೇವೆ. ಆದರೆ, ಇಡೀ ರಾಜ್ಯದ ದೊಡ್ಡ ಕೂಗು ಏನಿದೆಯೋ, ಅದು ಸಿದ್ದರಾಮಯ್ಯನವರು ಸಿಎಂ ಆಗಬೇಕು"ಎನ್ನುವುದು ಎಂದು ಈ ಇಬ್ಬರು ಶಾಸಕರು ಹೇಳಿದ್ದಾರೆ.
Recommended Video

ಕೆಪಿಸಿಸಿ ಅಧ್ಯಕ್ಷರು ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಆದೇಶ
ಕೆಪಿಸಿಸಿ ಅಧ್ಯಕ್ಷರು ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಆದೇಶವನ್ನು ಹೊರಡಿಸಿದ್ದರೂ, ಕಾಂಗ್ರೆಸ್ ಶಾಸಕರಿಂದ ಈ ರೀತಿಯ ಹೇಳಿಕೆಗಳು ಬರುತ್ತಿವೆ. "ನಮ್ಮ ಪಕ್ಷದಲ್ಲಿ ನಾನು, ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ ಹೀಗೆ ಸಿಎಂ ಆಗಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡವರೇ. ಆದರೆ, ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಿರಬೇಕಾಗುತ್ತದೆ"ಎಂದು ಡಿಕೆಶಿ ಹೇಳಿದ್ದರು. ಆದರೂ, ಕಾಂಗ್ರೆಸ್ ಶಾಸಕರಿಂದ ಈ ರೀತಿಯ ಹೇಳಿಕೆಯ ಹಿಂದೆ, ಪಲ್ಸ್ ಟೆಸ್ಟ್ ಮಾಡುವ ಕೆಲಸ ಇನ್ನೊಂದು ಬಣದಿಂದ ನಡೆಯುತ್ತಿದೆಯಾ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications