ಆಪರೇಷನ್ ಕಮಲಕ್ಕೆ ಇದ್ದ ಉತ್ಸಾಹ, ಸಂತ್ರಸ್ತರ ನೆರವಿಗೆ ಇಲ್ಲ: ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 29: ಹಿಂಬಾಗಿನಿಂದ ಸಿಎಂ ಆದ ಯಡಿಯೂರಪ್ಪ ದೆಹಲಿ-ಬೆಂಗಳೂರಿಗೆ ಓಡಾಡಿದ್ದು ಬಿಟ್ಟರೆ ಕೇಂದ್ರದಿಂದ ಒಂದು ರೂಪಾಯಿ ಅನುದಾನವನ್ನೂ ತರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ದೂರಿದರು.
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ನಗರದ ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ, ಇಲ್ಲಿ ಬಿಜೆಪಿಯದೇ ಸರ್ಕಾರವಿದೆ, ಪ್ರವಾಹ ಬಂದು ತಿಂಗಳಾಗುತ್ತಾ ಬಂತು ಆದರೂ ಕೇಂದ್ರ ಸರ್ಕಾರ ನಯಾಪೈಸೆ ಹಣವನ್ನು ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪನವರು ಪದೇ ಪದೇ ದೆಹಲಿಗೆ ಹೋಗಿ ಬಂದರೂ ಒಂದು ಪೈಸೆ ಅನುದಾನ ತರಲು ಅವರಿಂದ ಆಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ರೂ.10 ಲಕ್ಷ, ಒಂದು ಎಕರೆ ಕಬ್ಬು ಬೆಳೆ ನಾಶಕ್ಕೆ ರೂ.50 ಸಾವಿರ ಪರಿಹಾರ ನೀಡಲಿ ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಮುಳುಗಡೆಯಾದ ಇಡೀ ಊರನ್ನೆ ಸ್ಥಳಾಂತರಿಸುವ ಕೆಲಸ ಆಗಬೇಕು ಎಂದರು.

'ಆಪರೇಷನ್ ಕಮಲಕ್ಕೆ ಇದ್ದ ಉತ್ಸಾಹ ಸಂತ್ರಸ್ತರ ರಕ್ಷಣೆಗೆ ಇಲ್ಲ'
ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ತೋರುತ್ತಿದ್ದ ಉತ್ಸಾಹವನ್ನು ಪ್ರವಾಹ ಪೀಡಿತರ ಕಷ್ಟಕ್ಕೆ ನೆರವಾಗುವುದರಲ್ಲಿ ತೋರಲಿ. ಅಧಿಕಾರ ಸಿಗುವವರೆಗೂ ಇದ್ದ ಜನಪರ ಕಾಳಜಿ ಈಗೇಕೆ ಇಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಸರ್ಕಾರ ಕೂಡಲೇ ವಿಶೇಷ ಅಧಿವೇಷನವನ್ನು ಕರೆಯಲಿ: ಸಿದ್ದರಾಮಯ್ಯ
ಪ್ರವಾಹ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಕೂಡಲೇ ವಿಶೇಷ ಅಧಿವೇಶನ ಕರೆದು, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಿ ಎಂದು ಒತ್ತಾಯಿಸಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಕೇಂದ್ರಕ್ಕೆ ನಾವು ಮನವರಿಕೆ ಮಾಡಿಕೊಟ್ಟು, ಪರಿಹಾರದ ಹಣ ಕೇಳುತ್ತೇವೆ. ಆಗಲೂ ಕೊಡದಿದ್ದರೆ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

'ಆಗ ಮನಮೋಹನ್ ಸಿಂಗ್ ದೊಡ್ಡ ಮಟ್ಟದ ಸಹಾಯ ಮಾಡಿದ್ರು'
2009 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದ್ದಾಗ ಯಡಿಯೂರಪ್ಪ ಸಿಎಂ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರು. ನಾವು ಮನವಿ ಮಾಡಿದ ಕೂಡಲೇ ಮನಮೋಹನ್ ಸಿಂಗ್ ಬಂದು ಸಮೀಕ್ಷೆ ಮಾಡಿ ಕೂಡಲೇ 1900 ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಹೋಗಿ ಕೇಳಿಕೊಂಡರೂ ಸಹ ಮೋದಿ ಒಂದು ರೂಪಾಯಿ ಹಣ ಕೊಟ್ಟಿಲ್ಲ ಎಂದರು.

ಹಲವು ಮುಖಂಡರು ಭಾಗವಹಿಸಿದ್ದರು
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಡಿ.ಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ, ಕಿಮ್ಮನೆ ರತ್ನಾಕರ್, ಹೆಚ್.ಕೆ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.












Click it and Unblock the Notifications