ಕರ್ನಾಟಕ ಹೂಡಿಕೆಗೆ ಪ್ರಶಸ್ತ ತಾಣ: ಚೀನಾ-ಇಂಡಿಯಾ ವೇದಿಕೆಯಲ್ಲಿ ಸಿಎಂ
ಬೆಂಗಳೂರು, ನವೆಂಬರ್ 10: 'ಕರ್ನಾಟಕವು ಸಮೃದ್ಧ ಭೂಮಿಯಾಗಿದ್ದು ಅತ್ಯುನ್ನತ ತಂತ್ರಜ್ಞಾನ ಮತ್ತು ಅತಿದೊಡ್ಡ ಮಾನವ ಸಂಪನ್ಮೂಲವನ್ನು ಹೊಂದಿದೆ. ಹೀಗಾಗಿ ಕಂಪೆನಿಗಳಿಗೆ ಕರ್ನಾಟಕ ಅತ್ಯಂತ ಸೂಕ್ತ ಸ್ಥಳ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿರುವ 'ಚೀನಾ-ಭಾರತ ಫೋರಂ'ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚೀನಾದ ಸಿಚುವಾನ್ ರಾಜ್ಯದ ಜತೆ ಕರ್ನಾಟಕ ಸಿಸ್ಟರ್-ಸ್ಟೇಟ್ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ಸಂಭ್ರಮದ ವಿಚಾರ ಎಂದರು.
"ಕರ್ನಾಟಕದ 2014-19ರವರೆಗೆ ಕೈಗಾರಿಕಾ ನೀತಿಗಳು ಉತ್ಪಾದನೆಯನ್ನು ಕೇಂದ್ರೀಕರಿಸಿವೆ. ಭವಿಷ್ಯದಲ್ಲಿ ಕರ್ನಾಟಕವನ್ನು ಅತ್ಯುನ್ನತ ಅನ್ವೇಷಣೆ ಮತ್ತು ಹೈಟೆಕ್ ಉತ್ಪಾದನೆಯ ಕೇಂದ್ರವನ್ನಾಗಿಸುವುದೇ ನಮ್ಮ ಗುರಿ," ಎಂದು ಸಿದ್ದರಾಮಯ್ಯ ಹೇಳಿದರು.
'ಕರ್ನಾಟಕದಲ್ಲಿ ಬಂಡವಾಳ ಹೂಡಲು ಅಗಾಧವಾದ ಆಸಕ್ತಿ ಮತ್ತು ಉತ್ಸಾಹ ತೋರುತ್ತಿರುವುದು ನಮ್ಮ ಮೇಲೆ ಭಾರೀ ಜವಾಬ್ದಾರಿಯನ್ನು ಹೊರಿಸಿದೆ. ಕರ್ನಾಟಕ ಈ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧವಾಗಿದೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ," ಎಂಬುದಾಗಿ ಅವರು ಹೂಡಿಕೆದಾರರಿಗೆ ಭರವಸೆ ನೀಡದರು.
'ಕರ್ನಾಟಕ ನಿಮ್ಮನ್ನು ತೆರೆದ ಕೈಗಳಿಂದ ಸ್ವಾಗತಿಸುತ್ತದೆ. ಕರ್ನಾಟಕದಲ್ಲಿ ಉದ್ಯಮ ನಡೆಸಲು ನಾವು ಸಂಪೂರ್ಣ ಪಾರದರ್ಶಕತೆ ಹೊಂದಿರುವ ನೀತಿಯನ್ನು ಜಾರಿಗೊಳಿಸುತ್ತೇವೆ ಮತ್ತು ನಿಮ್ಮ ಯೋಜನೆಗಳನ್ನು ವೇಗವಾಗಿ ಕಾರ್ಯಗತಗೊಳಿಸಲಾಗುವುದು ಎಂಬ ಭರವಸೆ ನೀಡುತ್ತೇನೆ,' ಎಂದು ಅವರು ಹೇಳಿದರು.
ಚೀನಾದ ಜತೆ ಕರ್ನಾಟಕವು ನಿರಂತರ ಸಂಪರ್ಕದಲ್ಲಿದ್ದು ಪ್ರಬಲ ಮತ್ತು ಶ್ರೀಮಂತ ಕರ್ನಾಟಕ ನಿರ್ಮಾಣಕ್ಕೆ ಇರುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.