ಸಿದ್ದರಾಮಯ್ಯ ಮುಂದಿರುವ 4 ಸವಾಲುಗಳು: ವಾಪಸ್ ಬಂದಮೇಲೆ ಏನೇನಾಗುತ್ತೆ?

Recommended Video

      ಭಾನುವಾರ ರಾಜ್ಯಕ್ಕೆ ಮರಳಲಿದ್ದಾರೆ ಸಿದ್ದರಾಮಯ್ಯ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 15: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ಭಾನುವಾರದ ವೇಳೆಗೆ ನಗರಕ್ಕೆ ವಾಪಸ್ ಆಗಲಿದ್ದು ಅವರು ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ತರ ಬೆಳವಣಿಗೆಗಳು ನಡೆಯಲಿದೆ.

      ಎಲ್ಲರೂ ಭಾವಿಸಿದಂತೆ ಕೇವಲ ಜಾರಕಿಹೊಳಿ ಸಹೋದರರ ಇನ್ನಿತರೆ ಕಾಂಗ್ರೆಸ್ ಶಾಸಕರ ಭಿನ್ನಮತ ಶಮನ ಜವಾಬ್ದಾರಿ ಮಾತ್ರ ಸಿದ್ದರಾಮಯ್ಯ ಹೆಗಲಿಗಿಲ್ಲ, ಅದರ ಬದಲಾಗಿ ಇನ್ನೂ ಮಹತ್ವದ ತೀರ್ಮಾನಗಳನ್ನು ಸಿದ್ದರಾಮಯ್ಯ ಬಂದ ಮೇಲೆ ಕೈಗೊಳ್ಳಬೇಕಿದೆ.

      ಜಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುತ್ತಾ?, ಉರುಳುತ್ತಾ? ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ಮರಳಿದ ಬಳಿಕ ಉತ್ತರ ಸಿಗಲಿದೆ, ಈ ಮಾತು ಮೂರು ರಾಜಕೀಯ ಪಕ್ಷಗಳ ಮೊಗಸಾಲೆಯಿಂದ ಹೊರ ಬೀಳುತ್ತಿದೆ.

      ಸಿದ್ದರಾಮಯ್ಯ ಪ್ರವಾಸದ ಬೆನ್ನಲ್ಲೇ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂಬ ಮಾಹಿತಿ ಸಿಎಂ ಕುಮಾರಸ್ವಾಮಿಗೂ ಇತ್ತು ಎಂಬುದೀಗ ಗುಟ್ಟಾಗಿ ಉಳಿದಿಲ್ಲ, ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಭಿನ್ನಾಭಿಪ್ರಾಯ ನೆನಪಿಟ್ಟುಕೊಂಡು ಬಂಡೆದ್ದಿರುವ ಜಾರಕಿಹೊಳಿ ಸಹೋದರರು, ಚಿಕ್ಕಬಳ್ಳಾಪುರ ಜಿಲ್ಲಾ ಆಂತರಿಕ ರಾಜಕಾರಣದ ವಿಚಾರ ಮುಂದಿಟ್ಟುಕೊಂಡು ಅಸಮಾಧಾನ ಕಾರುತ್ತಿರುವ ಡಾ. ಸುಧಾಕರ್ ನೇತೃತ್ವದ ತಂಡ, ಬಳ್ಳಾರಿಯ ಬಿ.ನಾಗೇಂದ್ರ ಹಾಗೂ ಆನಂದ್ ಸಿಂಗ್ ತಂಡ ಹೀಗೆ ಬಿಡಿಬಿಡಿಯಾಗಿ ಅತೃಪ್ತಿ ಹೊರಹಾಕುತ್ತಿರುವ ಎಲ್ಲಾ ಶಾಸಕರು ಸಿದ್ದರಾಮಯ್ಯ ಬಂದಮೇಲೆ ಮುಂದಿನ ನಡೆ ಪ್ರಕಟಿಸುತ್ತೇವೆ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.ಹಾಗಾದರೆ ಸಿದ್ದರಾಮಯ್ಯ ಮುಂದಿರುವ ನಾಲ್ಕು ಸವಾಲುಗಳು ಏನು ಎಂಬುದನ್ನು ನೋಡೋಣ.

      ಭಿನ್ನಮತ ಶಮನಗೊಳಿಸುತ್ತಾರಾ ಸಿದ್ದರಾಮಯ್ಯ?

      ಭಿನ್ನಮತ ಶಮನಗೊಳಿಸುತ್ತಾರಾ ಸಿದ್ದರಾಮಯ್ಯ?

      ಮೊಟ್ಟ ಮೊದಲನೆಯದಾಗಿ ಸಿದ್ದರಾಮಯ್ಯ ಎದುರಿಗಿರುವ ಸವಾಲೆಂದರೆ ಜಾರಕಿಹೊಳಿ ಸಹೋದರರು ಹಾಗೂ ಬಳ್ಳಾರಿ ಶಾಕರಲ್ಲಿರುವ ಭಿನ್ನಮತವನ್ನು ಶಮನಗೊಳಿಸುವುದು, ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಪತನದ ಭೀತಿಯನ್ನು ದೂರ ಮಾಡಲು ಸಿದ್ದರಾಮಯ್ಯ ಕಾಂಗ್ರೆಸ್ನ ಭಿನ್ನಮತೀಯ ಶಾಸಕರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರೀಕ್ಷಿಸುತ್ತಿವೆ.

      ಬಿಬಿಎಂಪಿ ಮೇಯರ್ ಆಯ್ಕೆಯಲ್ಲೂ ಸಿದ್ದರಾಮಯ್ಯ ನಿರ್ಣಾಯಕ

      ಬಿಬಿಎಂಪಿ ಮೇಯರ್ ಆಯ್ಕೆಯಲ್ಲೂ ಸಿದ್ದರಾಮಯ್ಯ ನಿರ್ಣಾಯಕ

      ಮತ್ತೊಂದೆಡೆ ಬಿಬಿಎಂಪಿಗೆ ನೂತನ ಮೇಯರ್ ಆಯ್ಕೆ ಮಾಡಲು ವೇದಿಕೆ ಸಜ್ಜಾಗುತ್ತಿದ್ದು, ಹೊಸ ಮೇಯರ್ ಯಾರಾಗಬೇಕೆಂಬ ಕುರಿತಂತೆಯೂ ಸಿದ್ದರಾಮಯ್ಯ ನಿರ್ಧಾರವೇ ಮಹತ್ವ ಪಡೆದುಕೊಂಡಿದೆ.

      ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಮತ್ತೊಬ್ಬ ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರು ಗಂಗಾಬಿಕೆಯವರನ್ನು ನೂತನ ಮೇಯರ್ ಆಗಿ ಮಾಡಬೇಕೆಂದು ಪಟ್ಟು ಹಿಡಿದಿದ್ದು, ಡಿಕೆ ಶಿವಕುಮಾರ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ ಬಣವು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಬಣಗಳ ನಡುವಿನ ಒಮ್ಮತದ ಅಭ್ಯರ್ಥಿ ಯಾರಾಗಬಹುದು ಎಂಬುದನ್ನು ಕೂಡ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆ.

      ಪರಿಷತ್ ಚುನಾವಣೆಗೆ ಯಾರನ್ನು ಆಯ್ಕೆ ಮಾಡಬೇಕು?

      ಪರಿಷತ್ ಚುನಾವಣೆಗೆ ಯಾರನ್ನು ಆಯ್ಕೆ ಮಾಡಬೇಕು?

      ಸಿದ್ದರಾಮಯ್ಯ ಎದುರಿರುವ ಮೂರನೇ ಸವಾಲೆಂದರೆ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಮೂರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ.

      ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಪಕ್ಷದಿಂದ ತಲಾ ಒಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆ ಅಥವಾ ಕಾಂಗ್ರೆಸ್ ನಿಂದ ಇಬ್ಬರನ್ನು ಆಯ್ಕೆ ಮಾಡಬೇಕೆ ಎಂಬ ಬಗ್ಗೆಯೂ ತೀರ್ಮಾನ ಕೈಗೊಳ್ಳಬೇಕಿದೆ. ಈ ತೀರ್ಮಾನಕ್ಕೂ ಸಿದ್ದರಾಮಯ್ಯ ಅಭಿಪ್ರಾಯವೇ ಮುಖ್ಯ ಎನ್ನಲಾಗುತ್ತಿದೆ.

      ಸಿದ್ದರಾಮಯ್ಯ ಬಯಸಿದವರು ಸಚಿವರಾಗ್ತಾರಾ?

      ಸಿದ್ದರಾಮಯ್ಯ ಬಯಸಿದವರು ಸಚಿವರಾಗ್ತಾರಾ?

      ಹೀಗೆ ಎಲ್ಲಾ ದೃಷ್ಟಿಯಿಂದಲೂ ರಾಜ್ಯ ಕಾಂಗ್ರೆಸ್ ನ ಎಲ್ಲಾ ಬೆಳವಣಿಗೆಗಳೂ ಸಿದ್ದರಾಮಯ್ಯ ಅವರ ಮೇಲೆಯೇ ನಿಂತಿದೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಿದ್ದರಾಮಯ್ಯ ಬಂದ ಮೇಲೆಯೇ ತೀರ್ಮಾನ ತೆಗೆದುಕೊಳ್ಳುವುದಾಗಿ ಈಗಾಲೇ ಡಿಸಿಎಂ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಖಾಲಿ ಇರುವ ಆರು ಸ್ಥಾನಗಳಿಗೂ ಜೆಡಿಎಸ್ ನ 1 ಸ್ಥಾನಕ್ಕೂ ಸೇರಿದಂತೆ ಒಟ್ಟು ಏಳು ಹೊಸ ಸಚಿವರನ್ನು ಆಯ್ಕೆ ಮಾಡಬೇಕಿದೆ.

      ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಆರು ಜನರ ಪೈಕಿ ಎಷ್ಟು ಮಂದಿಯನ್ನು ಹೊಸ ಸಚಿವರನ್ನಾಗಿ ಮಾಡಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳಬೇಕಿದೆ.

      ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ತುಂಬಿದರೆ ಭಿನ್ನಮತೀಯ ಶಾಸಕರು ತಣ್ಣಗಾಗುತ್ತಾರಾ ಎನ್ನುವ ವಿಶ್ವಾಸ ಸ್ವತಃ ಕಾಂಗ್ರೆಸ್ ಗೆ ಇಲ್ಲ ಹೀಗಾಗಿ ಖಾಲಿ ಇರುವ ಆರು ಸ್ಥಾನಗಳ ಪೈಕಿ ಕೇವಲ ನಾಲ್ಕನ್ನು ಭರಿಸಿ ಇನ್ನೆರಡು ಸ್ಥಾನಗಳನ್ನು ಖಾಲಿ ಇರಿಸಿ ಓಡುವ ಕುದುರೆಗೆ ಹಸಿ ಹುಲ್ಲನ್ನು ಎದುರಿಗಿಟ್ಟಂತೆ ಮತ್ತೆರೆಡು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಕಾಂಗ್ರೆಸ್ ನ ತಂತ್ರವಾಗಿರಬಹುದು. ಹೀಗಾಗಿ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಜವಾಬ್ದಾರಿಯೂ ಕೂಡ ಸಿದ್ದರಾಮಯ್ಯ ಅವರ ಹೆಗಲ ಮೇಲಿದೆ.

      ಈ ಎಲ್ಲಾ ಕುತೂಹಲಗಳಿಗೆ ಸಿದ್ದರಾಮಯ್ಯ ಭಾನುವಾರ ವಿದೇಶದಿಂದ ವಾಪಸಾದ ಬಳಿಕ ಉತ್ತರ ಸಿಗುವ ನಿರೀಕ್ಷೆ ಇದೆ. ಆದರೆ ಸತತ ಒಂದೂವರೆ ದಿನಗಳ ಕಾಲ ವಿಮಾನಯಾನ ಮಾಡಿ ಬರುವ ಸಿದ್ದರಾಮಯ್ಯ ಹಠಾತ್ ಆಗಿ ಸೋಮವಾರವೇ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ. ಬದಲಾಗಿ ಎರಡು ಮೂರು ದಿನಗಳ ವಿಶ್ರಾಂತಿ ಬಳಿಕ ಬುಧವಾರ ನಂತರ ರಾಜ್ಯ ರಾಜಕಾರದ ಭಿನ್ನಮತ ಶಮನಕ್ಕೆ ಸಿದ್ದರಾಮಯ್ಯ ಅಣಿಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+