‘ಬಿಟ್ ಕಾಯಿನ್’ ಕುಳಗಳಿಗೆ ಮಾರಿಹಬ್ಬ: ಸಿದ್ದು ಸರ್ಕಾರ ಮಾಡಿದ್ದೇನು?
ಬೆಂಗಳೂರು: ರಾಜ್ಯದಲ್ಲಿ ಕೆಲವು ವರ್ಷಗಳ ಹಿಂದೆ ಬಿರುಗಾಳಿ ಎಬ್ಬಿಸಿದ್ದ ಬಿಟ್ ಕಾಯಿನ್ ಹಗರಣ ಈಗ ಮತ್ತೆ ಸದ್ದು ಮಾಡ್ತಿದೆ. ದೇಶಾದ್ಯಂತ ಸುದ್ದಿಯಾಗಿ ರಾಜ್ಯಕ್ಕೆ ಕೆಟ್ಟ ಹೆಸರು ತರಿಸಿದ್ದ ಹಗರಣಕ್ಕೆ ಮೋಕ್ಷ ಕೊಡಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬಿಟ್ ಕಾಯಿನ್ ಹಗರಣದ ತನಿಖೆಗಾಗಿ ಡಿಜಿಪಿ ನೇತೃತ್ವದಲ್ಲಿ ಎಸ್ಐಟಿ ತಂಡ ರಚಿಸಿದೆ.
ಈ ಕೇಸ್ ಶುರುವಾಗುವುದೆ ಇಂಟರ್ನ್ಯಾಷನಲ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹೆಸರಿನಿಂದ. ಶ್ರೀಕಿ ಸೇರಿದಂತೆ ಹಲವರ ವಿರುದ್ಧ ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ 2020ರಲ್ಲಿ ಕೇಸ್ ದಾಖಲಾಗಿತ್ತು. ಇನ್ನೇನು ಈ ಪ್ರಕರಣ ಮರೆಯಾಗಿದೆ ಎನ್ನುವಷ್ಟರಲ್ಲೇ ಈಗ ಮತ್ತೆ ಬಿಟ್ ಕಾಯಿನ್ ಅಕ್ರಮ ಪ್ರಕರಣವನ್ನು ಎಸ್ಐಟಿ ಕೈಗೆತ್ತಿಕೊಂಡಿದೆ. ಹಾಗೇ ಪ್ರಕರಣದ ಬಗ್ಗೆ ಹಿಂದೆ ತನಿಖೆ ನಡೆಸಿದ್ದ ಸಿಸಿಬಿಯ ಇನ್ಸ್ಪೆಕ್ಟರ್ ಶ್ರೀಧರ್ ಪೂಜಾರ್ ನೇತೃತ್ವದ ತಂಡ, ಶ್ರೀಕಿ ಹಾಗೂ ಇತರರ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 2021ರ ಫೆಬ್ರುವರಿ 22ರಂದು 757 ಪುಟಗಳ ದೋಷಾರೋಪ ಪಟ್ಟಿ ಕೂಡ ಸಲ್ಲಿಕೆ ಮಾಡಿತ್ತು. ಹಾಗಾದರೆ ಶ್ರೀಕಿ ವಿರುದ್ಧದ ದೋಷಾರೋಪ ಪಟ್ಟಿಯಲ್ಲಿ ಇರೋದು ಏನು? ಬನ್ನಿ ತಿಳಿಯೋಣ.

ಶ್ರೀಕೃಷ್ಣ ಅಲಿಯಾಸ್ ಶ್ರೀಕಿ 'ಹ್ಯಾಕಿಂಗ್' ಚರಿತ್ರೆ!
1) ಚಿಕ್ಕ ವಯಸ್ಸಿನಲ್ಲೇ ಹ್ಯಾಕಿಂಗ್ ಮತ್ತು ಸ್ಕಾಮ್ನಲ್ಲಿ ಪಳಗಿದ್ದನಂತೆ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
2) ಕಾಲೇಜಿನಲ್ಲಿದ್ದಾಗಲೇ 'ರೂನೆಸ್ಕೆಪ್ ಡಾಟ್ ಕಾಮ್' ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಸುಮಾರು ₹7 ಕೋಟಿ ಸಂಪಾದನೆ ಮಾಡಿದ್ದ ಎನ್ನಲಾಗಿದೆ.
3) ಕಾಲೇಜಿನ ದಿನಗಳ ಬಳಿಕ 'ಜಿಜಿ ಪೋಕರ್' ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿ 90 ಬಿಟಿಸಿ ಅಂದರೆ ಸುಮಾರು ₹41 ಕೋಟಿ ಸಂಪಾದಿಸಿದ್ದ.
4) ನಂತರ 2013ರಲ್ಲಿ 'ಬಿಟ್ ಕಾಯಿನ್ ಟಾಲ್ಕ್ ಡಾಟ್ ಒಆರ್ಜಿ' ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ.
5) 'ಸ್ಲಸ್ ಪೂಲ್' ಸರ್ವರ್ ಹ್ಯಾಕ್ ಮಾಡಿದ್ದ ಶ್ರೀಕೃಷ್ಣ ಅದರಿಂದ ₹37 ಲಕ್ಷ ರೂಪಾಯಿ ದೋಚಿದ್ದ ಆರೋಪವಿದೆ.
6) 'ಪೋಕರ್ ದಂಗಲ್' & 'ಪೋಕರ್ ಬಾಜಿ' ಗೇಮಿಂಗ್ ವೆಬ್ಸೈಟ್ನ 2015ರ ಏಪ್ರಿಲ್ನಲ್ಲಿ ಹ್ಯಾಕ್ ಮಾಡಿದ್ದ ಶ್ರೀಕಿ ₹1.50 ಕೋಟಿ ರೂಪಾಯಿ ದೋಚಿದ್ದ ಆರೋಪವಿದೆ.
7) ಹಾಗೇ 2017ರಲ್ಲಿ 'ಬಿಟ್ ಕ್ಲಬ್ ನೆಟ್ವರ್ಕ್' ಸರ್ವರ್ ಹ್ಯಾಕ್ ಮಾಡಿ ಶ್ರೀಕಿ 100 ಬಿಟಿಸಿ ಅಂದರೆ ಸುಮಾರು ₹45 ಕೋಟಿ ರೂಪಾಯಿ ಗಳಿಸಿದ್ದ.
8) 'ಪಿಪಿ ಪೋಕರ್' ಗೇಮಿಂಗ್ ಸರ್ವರ್ನ 2017-18ರಲ್ಲಿ ಹ್ಯಾಕ್ ಮಾಡಿ ₹12 ಕೋಟಿ ರೂಪಾಯಿ ದೋಚಿದ್ದ ಎಂಬ ಆರೋಪವಿದೆ.
9) ಇಷ್ಟೆಲ್ಲಾ ಹ್ಯಾಕಿಂಗ್ ನಡುವೆ 'ಪೋಕರ್ ಬಾಜಿ' ಗೇಮಿಂಗ್ ಸರ್ವರ್ ಹ್ಯಾಕ್ ಮಾಡಿದ್ದ. ಆಟಗಾರರಿಗೆ ಅಕ್ರಮವಾಗಿ ಗೋಲ್ಡ್ ಕಾಯಿನ್ ಮಾರಾಟ ಮಾಡಿ ₹70 ಲಕ್ಷವನ್ನು ತನ್ನ ಖಾತೆಗೆ ಟ್ರಾನ್ಸ್ಫರ್ ಮಾಡಿದ್ದ ಆರೋಪವಿದೆ. ಈ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಹಣ ಕೂಡ ವಾಪಸ್ ಹೋಗಿತ್ತು.
10) ಈ ಎಲ್ಲಾ ಪ್ರಕರಣಗಳು ತಕ್ಕಡಿಯ ಒಂದು ಭಾಗವಾದರೆ, 2018ರ ನವೆಂಬರ್ನಲ್ಲಿ ನಡೆದಿದ್ದ ಒಂದೇ ಒಂದು ಘಟನೆ ತಕ್ಕಡಿಯ ಇನ್ನೊಂದು ಭಾಗ. ಅಂದಹಾಗೆ ಶ್ರೀಕೃಷ್ಣ ಆಗ 'ಹೆಲಿಕ್ಸ್ ಮಿಕ್ಸರ್' ಹ್ಯಾಕ್ ಮಾಡಿ 510 ಬಿಟಿಸಿ ಅಂದರೆ ಬರೋಬ್ಬರಿ ₹232 ಕೋಟಿ ರೂಪಾಯಿ ದೋಚಿದ್ದ ಆರೋಪವಿದೆ.
ಒಟ್ನಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಕರ್ನಾಟಕದ ಬಿಟ್ ಕಾಯಿನ್ ಹಗರಣಕ್ಕೆ ಇದೀಗ ಮತ್ತೆ ಜೀವ ಬಂದಿದೆ. ಶ್ರೀಕಿ ಸ್ನೇಹಿತರು, ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇತರರು ಬಿಟ್ ಕಾಯಿನ್ ಹಣವನ್ನು ತಮ್ಮದಾಗಿಸಿಕೊಂಡಿರುವ ಅನುಮಾನ ಹೆಚ್ಚಿದೆ. ಇದೇ ಕಾರಣಕ್ಕೆ ಎಸ್ಐಟಿ ರಚನೆ ಮಾಡಲಾಗಿದ್ದು, ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ರಾಜ್ಯದ ಪ್ರಭಾವಿ ವ್ಯಕ್ತಿಗಳಿಗೂ ಮುಂದೆ ಕಂಟಕ ಎದುರಾಗುವ ಸಾಧ್ಯತೆ ಇದ್ದೇ ಇದೆ. ಆದ್ರೆ ಮೊಬೈಲ್ ಬಳಸದ ಶ್ರೀಕೃಷ್ಣ ಮಾತ್ರ ಎಲ್ಲಿದ್ದಾನೆ ಅನ್ನೋದೆ ಈಗ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ಇದೀಗ ಎಸ್ಐಟಿ ರಚಿಸಿದ್ದು, ತನಿಖೆ ಚುರುಕು ಪಡೆಯುವ ನಿರೀಕ್ಷೆ ಇದೆ.












Click it and Unblock the Notifications