'ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ'
ಬೆಂಗಳೂರು, ಜನವರಿ 02: ಗುತ್ತಿಗೆದಾರ ಸಚಿನ್ ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ 2-3 ಬಾರಿ ಪ್ರಿಯಾಂಕ್ ಖರ್ಗೆಯವರ ಹೆಸರು ಪ್ರಸ್ತಾಪವಾಗಿದೆ. ಜೊತೆಗೆ ಎಫ್ಎಸ್ಎಲ್ ವರದಿಯಲ್ಲೂ ಡೆತ್ ನೋಟ್ ಅಸಲಿ ಎಂದು ದೃಢಪಟ್ಟಿದೆ. ದಾಖಲೆ ಕೊಡಿ ಎಂದರೆ ಇನ್ನೇನು ದಾಖಲೆ ಬೇಕು ನಿಮಗೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಾಖಲೆ ಇಲ್ಲದ ಕಾರಣ ಸಚಿವ ಸ್ಥಾನದಿಂದ ಕೈಬಿಡುವ ವಿಚಾರ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದು ನಮಗೆ ಮೊದಲೇ ಗೊತ್ತಿದೆ. ನಿಮಗೆ ಧೈರ್ಯ ಇಲ್ಲ ಎಂಬುದು ನಮಗೆ ಗೊತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಆ ಸಚಿವರ ತಂದೆಯವರು ಎಐಸಿಸಿ ಅಧ್ಯಕ್ಷರು. ನೀವು ಇದಕ್ಕೆ ಕೈ ಹಾಕಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುವ ಭಯ ನಿಮಗಿದೆ ಎಂದು ವಿಶ್ಲೇಷಿಸಿದರು. ನೀವು ಕುರ್ಚಿಗೆ ಅಂಟಿ ಕುಳಿತವರು. ಇಷ್ಟೊತ್ತಿಗೆ ನೀವು ಅವರನ್ನು ವಜಾ ಮಾಡಬೇಕಿತ್ತು. ರಾಜೀನಾಮೆ ಪಡೆಯಬೇಕಾಗಿತ್ತು. ಬೇರೆ ಸರಕಾರವಿದ್ದಾಗ ಸ್ವಲ್ಪ ಬಂದರೂ ಬೀದಿಗಿಳಿದು ಬೆಂಕಿ ಹಚ್ಚುತ್ತೀರಲ್ಲವೇ? ಈಗ ನಿಮ್ಮನ್ನು ತಡೆದೋರ್ಯಾರು ಎಂದು ಕೇಳಿದರು.
ಬೇರೆಯವರಿಗೆ ಒಂದು ನ್ಯಾಯ, ನಿಮಗೆ ಒಂದು ನ್ಯಾಯ ಇದೆಯೇ? ಇಷ್ಟೊತ್ತಿಗೆ ನೀವು ಅವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ನಿಮಗೆ ತಾಕತ್ತಿಲ್ಲವೆಂದು ನೇರವಾಗಿ ಒಪ್ಪಿಕೊಳ್ಳಿ ಎಂದು ಆಗ್ರಹವನ್ನು ಮುಂದಿಟ್ಟರು. ಗೋಡೆ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ನಾವು ಯಾವುದೇ ಕಾರಣಕ್ಕೆ ಈ ಹೋರಾಟವನ್ನು ಕೈಬಿಡುವುದಿಲ್ಲ. ಅದು ಬೀದರ್, ಗುಲ್ಬರ್ಗಕ್ಕೆ ಸೀಮಿತವಾಗಿತ್ತು. ನಿಮ್ಮ ಉದ್ಧಟತನದಿಂದ ನೀವು ಮಾಡುತ್ತಿರುವ ಈ ಕಾರ್ಯದಿಂದ ಇಡೀ ರಾಜ್ಯ, ದೇಶಕ್ಕೆ ಈ ಸಮಸ್ಯೆ ದೊಡ್ಡದಾಗಿ ಉದ್ಭವಿಸಿದೆ ಎಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ನಾವು ನಮ್ಮ ಬಟ್ಟೆ ಹರಿದುಕೊಳ್ಳುವುದಿಲ್ಲ. ಅವರವರ ಬಟ್ಟೆ ಹರಿದುಕೊಳ್ಳುವವರನ್ನು ಹುಚ್ಚರು ಎನ್ನುತ್ತಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಇನ್ನೂ ಈ ಕುರಿತು ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆಯವರೇ, ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಬ್ಬ ಸಾಯ್ತಾನೆ, ಸಾಯುವ ನಿರ್ಧಾರ ತೆಗೆದುಕೊಳ್ತಾನೆ ಎಂದಾದರೆ ಮನಸ್ಸನ್ನು ಎಷ್ಟು ಕಟುವಾಗಿ ಮಾಡಿ ಆ ನಿರ್ಧಾರ ತೆಗೆದುಕೊಳ್ತಾನೆ. ಈ ಸಾವಿಗೆ ಈಶ್ವರಪ್ಪನವರೇ ಹೊಣೆ. ಅವರನ್ನು ವಜಾ ಮಾಡಬೇಕೆಂದು ಪ್ರಿಯಾಂಕ್ ಖರ್ಗೆಯವರು ಹಿಂದೆ ಹೇಳಿದ್ದರು ಎಂದು ಗಮನ ಸೆಳೆದರು. ನಿಮ್ಮ ಮಾತುಗಳು ಈಗಲೂ ಯೂ ಟ್ಯೂಬಿನಲ್ಲಿ ಲಭ್ಯವಿದೆ. ತೆಗೆದು ನೋಡಿ ಎಂದು ಒತ್ತಾಯಿಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ತಾನು ಉಳಿದವರಿಗೆ ಕೇಳುವುದು ತನಗೆ ಅನ್ವಯವಾಗುವುದಿಲ್ಲ ಎಂಬ ನೀತಿ ಹೊಂದಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ, ನೀವು ಈಶ್ವರಪ್ಪನವರ ಮೇಲೆ ಆಪಾದನೆ ಬಂದಾಗ ಏನು ಮಾತನಾಡಿದ್ದೀರೆಂದು ನೆನಪಿಸಿಕೊಳ್ಳಿ ಎಂದು ಸಿ ಟಿ ರವಿ ಅವರು ಮನವಿ ಮಾಡಿದರು.












Click it and Unblock the Notifications