ಮುಷ್ಕರ ಕೈ ಬಿಡಲು ನೌಕರರಿಗೆ ಸಿದ್ದರಾಮಯ್ಯ ಮನವಿ
ಬೆಂಗಳೂರು, ಜುಲೈ 25 : ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರವನ್ನು ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.[ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]
ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. [ಸಾರಿಗೆ ಮುಷ್ಕರ : ಕ್ಷಣ-ಕ್ಷಣದ ಮಾಹಿತಿ]
'ರಾಜ್ಯದ ಜನರ ಜೀವನಾಡಿಯಾಗಿರುವ ಬಸ್ಸುಗಳನ್ನು ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಬಸ್ಸುಗಳನ್ನೇ ಅವಲಂಭಿಸಿರುವ ಬಡವರು, ಕಡು ಬಡವರು, ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗಕ್ಕೆ ಸಂಕಷ್ಟ ಎದುರಾಗುತ್ತದೆ' ಆದ್ದರಿಂದ ಮುಷ್ಕರ ಕೈ ಬಿಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.[ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಏಕೆ, ಏನು?]
'ಶೇಕಡಾ 10 ರಷ್ಟು ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ತಮ್ಮ ಇತರೆ ಬೇಡಿಕೆಗಳನ್ನೂ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು' ಎಂಬ ಭರವಸೆಯನ್ನು ಮುಖ್ಯಮಂತ್ರಿಗಳು ನೌಕರರಿಗೆ ನೀಡಿದ್ದಾರೆ.[ಸಾರಿಗೆ ಸಂಸ್ಥೆ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ]
'ನಮಗೆ ಅಭಿಮಾನ, ಹೆಮ್ಮೆ ಇದೆ'
'ಇಡೀ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿ ಹಾಗೂ ಗೌರವಗಳಿಗೆ ಪಾತ್ರವಾಗಿರುವ ಕರ್ನಾಟಕದಲ್ಲಿ ಉತ್ತಮ ಬಸ್ಸುಗಳು ಮಾತ್ರವಲ್ಲ, ಅತ್ಯುತ್ತಮ ಚಾಲಕರು, ನಿರ್ವಾಹಕರು, ಯಾಂತ್ರಿಕ ಹಾಗೂ ಇತರೆ ಸಿಬ್ಬಂದಿಯೂ ಇದ್ದಾರೆ ಎಂಬುದು ನಮ್ಮಲ್ಲಿ ಅಭಿಮಾನ ಹಾಗೂ ಹೆಮ್ಮೆಯನ್ನು ಮೂಡಿಸಿದೆ'.
'ಜನರ ಸಂಕಷ್ಟ ತಪ್ಪಿಸಿ'
'ಸರ್ಕಾರಿ ಬಸ್ಸುಗಳು ರಾಜ್ಯದ ಜನತೆಯ ಜೀವನಾಡಿ. ಬಸ್ಸುಗಳನ್ನು ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಬಸ್ಸುಗಳನ್ನೇ ಅವಲಂಭಿಸಿರುವ ಬಡವರು ಹಾಗೂ ಕಡು ಬಡವರು, ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗಕ್ಕೆ ಎದುರಾಗುವ ಕಷ್ಟ-ಸಂಕಷ್ಟಗಳನ್ನು ಊಹಿಸಲು ಅಸಾಧ್ಯ. ಬಡ ಜನತೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ತಾವು ನಡೆಸಲಿರುವ ಮುಷ್ಕರದಿಂದ ಅವರೆಲ್ಲರು ಸಂಕಷ್ಟ ಅನುಭವಿಸುತ್ತಾರೆ ಅದನ್ನು ತಪ್ಪಿಸಿ'.
'ಶೇಕಡಾ 10 ರಷ್ಟು ವೇತನ ಪರಿಷ್ಕರಣೆ'
'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಶೇಕಡಾ 10 ರಷ್ಟು ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ತಮ್ಮ ಇತರೆ ಬೇಡಿಕೆಗಳನ್ನೂ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು'.
'ಜನರ ಪ್ರೀತಿಗೆ ಪಾತ್ರರಾಗಿ'
'ನಮ್ಮ ಸರ್ಕಾರ ತಮ್ಮ ಬೇಡಿಕೆಗಳಿಗೆ ಹಂತ-ಹಂತವಾಗಿ ನಿಶ್ಚಯವಾಗಿಯೂ ಸ್ಪಂದಿಸುತ್ತದೆ. ತಾವು ನನ್ನ ಈ ಕರೆಗೆ ಓಗೊಟ್ಟು, ಮುಷ್ಕರವನ್ನು ಹಿಂಪಡೆದು ಸಾರ್ವಜನಿಕರ ಸೇವೆಗೆ ಎಂದಿನಂತೆ ಅಣಿಯಾಗುವಿರಿ. ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗುವಿರಿ ಎಂದು ನಂಬಿದ್ದೇನೆ'.
23 ಸಾವಿರ ಬಸ್ಸುಗಳಿವೆ
ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಎನ್ಇಕೆಆರ್ಟಿಸಿ ಸೇರಿ ಎಲ್ಲಾ ನಿಗಮಗಳಿಂದ ಒಟ್ಟು 23 ಸಾವಿರ ಬಸ್ಸುಗಳಿದ್ದು, 1.25 ಲಕ್ಷ ಸಿಬ್ಬಂದಿಗಳಿದ್ದಾರೆ.