ಸಿಎಂ-ಡಿಸಿಎಂ ನೇತೃತ್ವದಲ್ಲಿ ಶಾಸಕರ ಜತೆಗೆ ಜಿಲ್ಲಾವಾರು ನಿರಂತರ ಸಭೆ ಆಯೋಜನೆ
ಬೆಂಗಳೂರು, ಆಗಸ್ಟ್ 07: ರಾಜ್ಯ ಕಾಂಗ್ರೆಸ್ನಲ್ಲಿ ಸೃಷ್ಟಿಯಾಗಿರುವ ಭಿನ್ನಮತ ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಶಾಸಕರು ಸೇರಿದಂತೆ ನಾಯಕ ಅಸಮಾಧಾನ ಶಮನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದಿನಿಂದ (ಆ.7) ಸೋಮವಾರದಿಂದ ಪಕ್ಷದ ಜಿಲ್ಲಾ ಮಟ್ಟದ ಸರಣಿ ಸಂವಾದ ನಡೆಸಲಿದ್ದಾರೆ ಎಂದು ವರದಿ ಆಗಿದೆ.
ಶಾಸಕರು, ಸಚಿವರ ಮಧ್ಯೆ ಸಮನ್ವಯ ಕೊರತೆ, ವರ್ಗಾವಣೆ ವಿಚಾರದಲ್ಲಿ ಭುಗಿಲೆದ್ದ ಅಸಮಧಾನಗಳು ಇಂದು ಸಿಎಂ ನೇತೃತ್ವದಲ್ಲಿಯೇ ಸಭೆ ನಡೆಸುವಷ್ಟರ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿವೆ. ಈ ಸಂಬಂಧ ಇಂದಿನಿಂದ ನಡೆಯಲಿರುವ ಪ್ರಮುಖ ಸಭೆಗಳಲ್ಲಿ ಆಯಾ ಜಿಲ್ಲೆಯ ಮಂತ್ರಿಗಳು ಸಹ ಪಾಲ್ಗೊಳ್ಳಲಿದ್ದಾರೆ. ಕೆಲವು ಸಚಿವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ. ಆರೋಪ ಪ್ರತ್ಯಾರೋಪಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳು ಇವೆ.

ಇಂದು ಸೋಮವಾರ ಯಾದಗಿರಿ, ತುಮಕೂರು, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ ಮತ್ತು ಬಳ್ಳಾರಿ ಸೇರಿ ಆರು ಜಿಲ್ಲೆಗಳಲ್ಲಿ ಶಾಸಕರ ಜತೆಗೆ ಸಿಎಂ ಮತ್ತು ಡಿಸಿಎಂ ನೇತೃತ್ವದ ಸಮನ್ವಯ ಸಭೆಗಳು ನಡೆಯಲಿವೆ. ರಾಜ್ಯದ ಎಲ್ಲಾ 31 ಜಿಲ್ಲೆಗಳನ್ನು ಒಳಗೊಂಡಂತೆ ಸಭೆಗಳು ಹಂತ ಹಂತವಾಗಿ ನಡೆಯಲಿವೆ.
ಹೈಕಮಾಂಡ್ ಸೂಚನೆ ಮೇರೆಗೆ ನಿರಂತರ ಸಭೆ ಆಯೋಜನೆ
ಇತ್ತೀಚೆಗೆ ಸುಮಾರು 30 ಮಂದಿ ಶಾಸಕರು ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಅವರು ಆಗ್ರಹಿಸಿದ್ದರು. ಕಳೆದ ತಿಂಗಳು ಜುಲೈ 27 ರಂದು ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಭೆ ಕರೆದಿದ್ದರು. ಅದರ ಬೆನ್ನಲ್ಲೆ ಹೈಕಮಾಂಡ್ ಸಹ ಕರ್ನಾಟಕ ನಾಯಕರೊಂದಿಗೆ ಸಭೆ ನಡೆಸಿತು. ಅಲ್ಲಿಂದ ಸಿದ್ದರಾಮಯ್ಯ ಅವರು ಬಂದ ಬಳಿಕ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ಬ್ರೇಕ್ ಬಿದ್ದಿತ್ತು.
ಕಳೆದ ವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ನಾಯಕರಿಗೆ ಅಗತ್ಯ ಸೂಚನೆ ನೀಡಿದರು. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ನಾಯಕರಿಗೆ ಸಲಹೆ ನೀಡಿದರು. ಈ ಸೂಚನೆ ಬೆನ್ನಲ್ಲೆ ಇಂದು ಜಿಲ್ಲಾವಾರು ಶಾಸಕರ ನಿರಂತರ ಸಭೆ ನಡೆಸಲಾಗುತ್ತಿದೆ.

ಸಭೆಗೆ ಶಾಸಕ ಬಿಆರ್ ಪಾಟೀಲ್ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಿ.ಆರ್. ಪಾಟೀಲ್ ಅವರು, ನಾವು ಮಾಡಿದ ಪ್ರಯತ್ನ ಫಲಪ್ರದವಾಗಿದ್ದು, ಕೆಲವು ವಿಚಾರಗಳ ಕುರಿತು ಪ್ರಸ್ತಾಪಿಸಿದ ಬೆನ್ನಲ್ಲೆ ಸಚಿವರ ಸಮ್ಮುಖದಲ್ಲಿ ಶಾಸಕರ ಸಭೆ ನಡೆಸಲಾಗುತ್ತಿದೆ. ಇದು ಸ್ವಾಗತಾರ್ಹ ಎಂದು ಅವರು ತಿಳಿಸಿದರು.
ಇನ್ನೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಜೊತೆಗೆ ಎಲ್ಲ ಶಾಸಕರು, ಅವರ ಗುಂಪುಗಳ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾವಾರು ಸಭೆ ಮೂಲಕ ಪ್ರತಿಯೊಬ್ಬರನ್ನು ತಲುಪಲು ಅವರು ಯೋಜಿಸಿದ್ದಾರೆ. ಈಗಾಗಲೇ ಮುಸ್ಲಿಂ ಶಾಸಕರ ನಿಯೋಗ ಡಿಕೆಶಿ ಅವರನ್ನು ಬೇಟಿ ಮಾಡಿದೆ.
ಎಲ್ಲ ಸಮುದಾಯಗಳ ಪದಾಧಿಕಾರಿಗಳು ಹಾಗೂ ಶಾಸಕರ ಅಭಿಪ್ರಾಯ ಆಲಿಸಲು ಸಿದ್ದರಾಮಯ್ಯನವರ ಜೊತೆಗೆ ನಾನು ಸಹ ಜೊತೆಯಾಗಿ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ. ಈ ಮೂಲಕ ನಾಯಕರನ್ನು ಒಗ್ಗೂಡಿಸಿ ಲೋಕಸಭೆ ಚುನಾವಣೆ ಎದುರಿಸಲು ಪಕ್ಷವನ್ನು ಸಜ್ಜುಗೊಳಿಸಲಿದ್ದಾರೆ. ಇನ್ನೂ ಲೋಕಸಭೆ ಚುನಾವಣೆಯಲ್ಲಿ ಕೆಲವು ಹಾಲಿ ಶಾಸಕರು ಮತ್ತು ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಕೆಪಿಸಿಸಿ ಮೂಲಗಳು ಹೇಳಿವೆ.












Click it and Unblock the Notifications