ಶೂನ್ಯ ಮಾಸ ನೆಪ: ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಸಾಧ್ಯತೆ
Recommended Video

ಬೆಂಗಳೂರು, ನವೆಂಬರ್ 20: ಈಗಾಗಲೇ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಾಗಿದೆ. ಇನ್ನೇನು ನವೆಂಬರ್ ಅಂತ್ಯಕ್ಕೆ ವಿಸ್ತರಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರೂ ಕೂಡ ನವೆಂಬರ್ ನಲ್ಲಿ ಸಂಪುಟ ವಿಸ್ತರಣೆ ನಡೆಯದಿದ್ದರೆ ಡಿಸೆಂಬರ್ನಲ್ಲಿ ನಡೆಯಲು ಸಾಧ್ಯವೇ ಇಲ್ಲ.
ಇನ್ನು ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸೋಮವಾರ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರೇ ಖುದ್ದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಸಂಪುಟ ವಿಸ್ತರಣೆಯಿಂದ ಸರ್ಕಾರದ ಮೇಲೆ ಪರಿಣಾಮ
ಸಚಿವ ಸಂಪುಟ ವಿಸ್ತರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದರಿಂದ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಉಭಯ ನಾಯಕರು ವಿಸ್ತೃತವಾಗಿ ಚರ್ಚಿಸಿದರು ಎಂದು ತಿಳಿದುಬಂದಿದೆ. ಕೂಡಲೇ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕ ಮಾಡಿದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರ್ಕಾರ ಮತ್ತು ಎರಡೂ ಪಕ್ಷಗಳ ವಿರುದ್ಧವಾದ ಟೀಕೆಗಳು ವ್ಯಕ್ತವಾಗಬಹುದು ಎಂದು ಅಂದಾಜಿಸಲಾಗಿದೆ.

ಸಂಕ್ರಾಂತಿ ಬಳಿಕ ವಿಸ್ತರಣೆ
ಡಿಸೆಂಬರ್ 10ರಿಂದ 20ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ ಡಿಸೆಂಬರ್ 14ರಿಂದ ಶೂನ್ಯ ಮಾಸ ಆರಂಭವಾಗಲಿದ್ದು, ಆಗ ವಿಸ್ತರಣೆ ಮಾಡುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇದು ನಿಜವಾದರೆ ಸಂಕ್ರಾಂತಿ ಹಬ್ಬದ ವೇಳೆಗೆ ವಿಸ್ತರಣೆ ಮಾಡಿದರೂ ಆಶ್ಚರ್ಯವಿಲ್ಲ. ಹೀಗಾಗಿ ಸಚಿವ ಸ್ಥಾನ ಆಕಾಂಕ್ಷಿಗು ಇನ್ನೂ ಎರಡು ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸಿದ್ದರಾಮಯ್ಯ ಭೇಟಿ ಬಳಿಕ ಜೆಡಿಎಸ್ ವರಿಷ್ಠ ದೇವೇಗೌಡರು ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಡಿಸೆಂಬರ್ 10ರಿಂದ ಬೆಳಗಾವಿ ಅಧಿವೇಶನ
ಚಳಿಗಾಲದ ಅಧಿವೇಶನ ಅಥವಾ ಬೆಳಗಾವಿ ಅಧಿವೇಶನವು ಡಿಸೆಂಬರ್ 10 ರಿಂದ ಆರಂಭಗೊಳ್ಳಲಿದೆ ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ.ಡಿಸೆಂಬರ್ 10 ರಿಂದ 21 ರ ವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದ್ದು, ರಾಜ್ಯದ ಭವಿಷ್ಯವನ್ನು ರಾಜಕಾರಣಿಗಳು ಚರ್ಚಿಸಲಿದ್ದಾರೆ.ಮೈತ್ರಿ ಸರ್ಕಾರದ ಟೇಕ್ಆಫ್ ಆದ ನಂತರ ಎದುರುಗೊಳ್ಳುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷವು ಸರ್ಕಾರದ ಮೇಲೆರಗಲು ತುದಿಗಾಲಲ್ಲಿ ಕಾಯುತ್ತಿದೆ.ಸಂಪುಟ ವಿಸ್ತರಣೆಯ ತಲೆನೋವನ್ನು ಶೀಘ್ರದಲ್ಲಿಯೇ ಪರಿಹರಿಸಿಕೊಳ್ಳಲು ಯಾವ ನಡೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು. ಈ ವೇಳೆ ಸೂಕ್ತ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡುವ ಜವಾಬ್ದಾರಿಯ್ನನು ದೇವೇಗೌಡರಿಗೆ ವರ್ಗಾಯಿಸಲಾಯಿತು.

ಸಂಪುಟ ವಿಸ್ತರಣೆ ವಿಳಂಬವಿಲ್ಲ
ಹಲವು ತಿಂಗಳಿನಿಂದ ಕಗ್ಗಂಟಾಗಿ ಉಳಿದಿರುವ ಸಂಪುಟ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರ ಹೆಗಲಿಗೆ ವರ್ಗಾಯಿಸಲಾಗಿದೆ. ನಗರದ ಕೆಕೆ ಅತಿಥಿ ಗೃಹದಲ್ಲಿ ಎಚ್ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವೆ ಸೋಮವಾರ ಸಂಜೆ ಸುದೀರ್ಘ ಚರ್ಚೆ ನಡೆಯಿತು.












Click it and Unblock the Notifications