ಬಿಜೆಪಿಯಲ್ಲಿ ಲಿಂಗಾಯತ ಸಿಎಂ, ಬ್ರಾಹ್ಮಣ ಸಿಎಂ ವಿವಾದದ ಮಧ್ಯೆ, ಶೋಭಾ ಕರಂದ್ಲಾಜೆ ಆಗ್ತಾರಾ ಮಹಿಳಾ ಸಿಎಂ?
ಬೆಂಗಳೂರು, ಏಪ್ರಿಲ್. 25: ರಾಜ್ಯ ಬಿಜೆಪಿಯ ಮಹಿಳಾ ನಾಯಕಿ ಎಂದರೇ ತಕ್ಷಣ ನೆನಪಾಗುವ ಹೆಸರು ಸಚಿವೆ ಶೋಭಾ ಕರಂದ್ಲಾಜೆ ಅವರದ್ದು. ಬಿಜೆಪಿಯ ಕಾರ್ಯಕರ್ತೆಯಾಗಿ ರಾಜಕೀಯ ಪ್ರವೇಶಿಸಿದ ಇವರು ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ, ರಾಜ್ಯ ರಾಜಕಾರಣ ಬಿಟ್ಟು ಕೇಂದ್ರ ಸೇರಿರುವ ಇವರಿಗೆ ಮುಖ್ಯಮಂತ್ರಿಯಾಗುವ ಬಯಕೆಯಿಲ್ಲವೇ...?
ಎಸ್.. ಸದ್ಯ ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಿಎಂ, ಬ್ರಾಹ್ಮಣ ಸಿಎಂ ವಿವಾದದ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್, ಜಡಿಎಸ್ ನಾಯಕರ ಆರೋಪ ಪ್ರತ್ಯಾರೋಪಗಳ ನಡುವೆ ನಾವು ಮರೆತಿರುವುದು ಮಹಿಳಾ ಪ್ರಾತಿನಿಧ್ಯ. ಮಹಿಳಾ ಸಿಎಂ ಎನ್ನುವುದು ಕನಸಿನ ಮಾತಾಗಿರುವ ಸಮಯದಲ್ಲಿ ಬಿಜೆಪಿಯ ನಾಯಕಿ ಶೋಭಾ ಕರಂದ್ಲಾಜೆ ಸಿಎಂ ಆಗಬಹುದು ಎಂಬ ವದಂತಿಗಳು ಹರಡುತ್ತಿವೆ. ಇದಕ್ಕೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ನ್ಯೂಸ್ 18ನ 'ಮಹಾನ್ ಮಹಿಳೆ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ತಮ್ಮ ಮದುವೆ, ಮಹಿಳಾ ಸಿಎಂ, ರಾಜಕೀಯದಲ್ಲಿ ಮಹಿಳೆಯರ ಪಾತ್ರ, ಮೀಸಲಾತಿ, ಮಹಿಳಾ ಮೀಸಲಾತಿ, ತಮ್ಮ ಗಾಡ್ ಫಾದರ್ ಸೇರಿದಂತೆ ಹಲವು ವಿಷಯಗಳನ್ನು ಹೊರಹಾಕಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆ ಎಂದರೆ ಜನಸಾಮಾನ್ಯರಲ್ಲಿ ಒಂದು ಕುತೂಹಲವಿದೆ. ಅವರೇಕೆ ಮದುವೆಯಾಗಿಲ್ಲ ಎಂಬುದು. ಇದು ವೈಯಕ್ತಿಕ ವಿಷಯವಾಗಿದ್ದರೂ ಕೂಡ ರಾಜಕಾರಣಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲಕ್ಕೆ ಕಡಿವಾಣ ಹಾಕುವುದು ಕಷ್ಟ ಸಾಧ್ಯ. ಈ ಕಾರ್ಯಕರಮದಲ್ಲಿ ತಮ್ಮ ಮದುವೆ ಬಗ್ಗೆ ಸಚಿವೆ ಮನಬಿಚ್ಚಿ ಮಾತನಾಡಿದ್ದಾರೆ.

"ನಾನು ಮನೆಯ ಮೊದಲ ಹೆಣ್ಣುಮಗಳು, ಮದುವೆಯ ವಯಸ್ಸು ಬಂದಾಗ ಮದುವೆಯಾಗುವ ಬಗ್ಗೆ ಒತ್ತಡ ಬಂದೇ ಬರುತ್ತದೆ. ನನಗೂ ಒತ್ತಡವಿತ್ತು. ಕುಟುಂಬ, ಸಂಬಂಧಿಕರು ಮತ್ತು ಊರಿನಲ್ಲಿ ಹಲವರಿಂದ ಒತ್ತಡವಿತ್ತು. ಆದರೆ, ನಾನು ಮದುವೆಯಾಗದ ನಿರ್ಧಾರ ಮಾಡಿದೆ. ಇದಕ್ಕೆ ಹಲವು ಕಾರಣವಿದೆ. ನಮ್ಮ ಹಳ್ಳಿಗಳಲ್ಲಿ ಪುರುಷರು ನಡೆದುಕೊಳ್ಳುವ ರೀತಿಯಿರಬಹುಹುದು, ಪುರುಷರು ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ನೋಡಿದ ಪರಿಣಾಮ ಇರಬಹುದು" ಎಂದಿದ್ದಾರೆ.
ಮುಂದುವರೆದು, "ಇದೆಲ್ಲಾ ಸುಮಾರು 40- 50 ವರ್ಷ ಹಿಂದಿನ ಮಾತು. ಆಗ ಹೆಣ್ಣುಮಕ್ಕಳು ಓದಿ ಏನು ಮಾಡುತ್ತಾರೆ ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಹೀಗೆ ಹಲವು ವರ್ತನೆಗಳು ನನಗೆ ಮದುವೆಯ ಮೇಲೆ ಜಿಗುಪ್ಸೆ ಹುಟ್ಟಿಸಿತು. ನಿಜವಾಗಿಯೂ ಇಂತಹ ಪುರುಷರ ಜೊತೆಗೆ ಬದುಕು ಸಾಧ್ಯವೇ ಎನ್ನುವ ಪ್ರಶ್ನೆ ಹುಟ್ಟುಹಾಕಿತು. ಅದಕ್ಕೆ ನಾನು ಮದುವೆಯಾಗಬರದು ಎಂದು ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ.
"ನಾನು ಮದುವೆಯಾಗದ ನಿರ್ಧಾರ ಮಾಡಿದೆ ನಿಜ. ಆದರೆ, ಮನೆಯಲ್ಲಿ ಅಪ್ಪ, ಅಮ್ಮನ ಒತ್ತಡ ಇದ್ದೇ ಇತ್ತು. ಆದರೆ, ನಮ್ಮ ಅಜ್ಜಿ ಬೆಂಬಲಕ್ಕೆ ಬಂದರು. ಆಕೆಗೆ ಇಷ್ಟ ಇಲ್ಲದಿದ್ದರೂ ಏಕೆ ಬಲವಂತ ಮಾಡುತ್ತಿರಿ, ದಿನವು ಆಕೆಯನ್ನು ಏಕೆ ಅಳಿಸುತ್ತಿರಿ ಎಂದು ಕೇಳಿದ ನಂತರ ಒತ್ತಡ ಕಡಿಮೆಯಾಯಿತು. ಹೀಗಾಗಿ ಕುಟುಂಬ ಸಮಾಜ ಎರಡನ್ನು ಎದುರಿಸಿದೆ" ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

*ರಾಜಕೀಯ ಕೂಡ ಪುರುಷ ಪ್ರಧಾನ*
ರಾಜಕೀಯದಲ್ಲಿ ಪುರುಷ ಪ್ರಧಾನತೆ ಬಗ್ಗೆ ಮಾತನಾಡಿರುವ ಅವರು, 2006- 07ರ ಸಮಯದಲ್ಲಿ ನಾನು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬಂದೆ. ರಾಜಕೀಯ ಕೂಡ ಪುರುಷ ಪ್ರಧಾನ. ಸಹಜ ಕಾರಣಕ್ಕಾಗಿ ಇದು ಪುರುಷ ಪ್ರಧಾನ. ಇಂತಹ ಸಂದರ್ಭದಲ್ಲಿ ಇಲ್ಲಿ ಗಟ್ಟಿಯಾಗಿ ನಿಲ್ಲಲು ಮಾನಸಿಕ ದೃಢತೆ ಬೇಕು. ಪುರುಷರಿಗೆ ಅನ್ನಿಸೋದು ಇದು ಪುರುಷರ ಕ್ಷೇತ್ರ ಎಂದು. ಅವರಿಗೆ ಅವರು ಮಾತ್ರ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ಭಾವನೆಯಿದ" ಎಂದು ಅಸಮಾಧಾನ ಹೊರಹಾಕಿದ್ದಾರೆ.
"ನೀವು ಇತಿಹಾಸ ತೆರೆದು ನೋಡಿದರೇ ಮಹಿಳೆಯರಿಗೆ ಕೊಟ್ಟ ಇಲಾಖೆಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಲೆ ಸಂಸ್ಕೃತಿ ಇಂತಹವೇ. ಅದಕ್ಕೆ ನಾನು ನನಗೆ ಸಚಿವ ಸ್ಥಾನ ನೀಡುವುದಾದರೇ ಇದ್ಯಾವುದು ಬೇಡ ಎಂದೇ ಹೇಳಿದ್ದೆ. ಅಂದರೆ ಇದಕ್ಕೆ ನಾನು ವಿರೋಧ ಎಂದಲ್ಲ. ಆದರೆ ಮಹಿಳೆಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬ್ರಾಂಡ್ ಮಾಡುವುದನ್ನು ಬಿಡಬೇಕು" ಎಂದು ಆಗ್ರಹಿಸಿದ್ದಾರೆ.
"ಹಾಗಾಗಿ ಯಡಿಯೂರಪ್ಪ ಧೈರ್ಯ ಮಾಡಿ ನನಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಕೊಟ್ಟರು. ನಾನು ಒಂದೂವರೆ ವರ್ಷದಲ್ಲಿ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದೇನೆ. ಮತ್ತೆ ನನಗೆ ಇಂಧನ ಇಲಾಖೆ ನೀಡಲಾಯಿತು. ಏನು ಗೊತ್ತಿಲ್ಲದ ನಾನು ಅದರ ಬಗ್ಗೆ ಮೂರು ತಿಂಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಅಧ್ಯಯನ ಮಾಡಿದೆ" ಎಂದು ತಮ್ಮ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ.
*ಮಹಿಳೆ ಬಗ್ಗೆ ಸಮಾಜದ ಮನಸ್ಥಿತಿ ಬದಲಾಗಬೇಕು*
ಮಹಿಳೆಯರ ಬಗ್ಗೆ ಸಮಾಜ ಇನ್ನು ಬದಲಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಅವರು, "ಮಹಿಳೆ ಬಗ್ಗೆ ಸಮಾಜದ ಮನಸ್ಥತಿ ಬದಲಾಗಬೇಕು. ಸಮಾಜದಲ್ಲಿ ಬದಲಾವಣೆಯಾಗದೇ ರಾಜಕೀಯದಲ್ಲಿ ಬದಲಾವಣೆ ಸಾಧ್ಯವಿಲ್ಲ. ನಮ್ಮಲ್ಲಿ ಮಹಿಳೆ ಪ್ರಧಾನಿಯಾಗಿದ್ದಾರೆ, ಇಂದು ರಾಷ್ಟ್ರಪತಿಯಾಗಿದ್ದಾರೆ. ಹಲವು ರಾಜ್ಯಗಳಲ್ಲಿ ಸಿಎಂ ಆಗಿದ್ದಾರೆ. ಆದರೂ ಕೂಡ ಪುರುಷರಿಗೆ ಮಹಿಳೆಯರ ಮೇಲೆ ನಂಬಿಕೆ ಮತ್ತು ವಿಶ್ವಾಸವಿಲ್ಲ. ಆದರೆ, ಇಂದು ಪ್ರಧಾನಿ ಮೋದಿ ಮಹಿಳೆಯನ್ನು ಹಣಕಾಸು, ರಕ್ಷಣಾ ಸಚಿವಾಲಯ, ರಾಷ್ಟ್ರಪತಿ ಹುದ್ದೆಗೆ ನೇಮಿಸಿದ್ದಾರೆ" ಎಂದಿದ್ದಾರೆ.
"ಮಹಿಳೆಯರರಿಗೆ ರಾಜಕೀಯ ಸಮಾನತೆ ಬೇಕು. ಸಮಾನತೆ ನಾವು ಪಡೆದುಕೊಳ್ಳಬೇಕು ನಿಜ. ಆದರೆ ಎಲ್ಲರಿಗೂ ಆ ಅವಕಾಶ ಇರುವುದಿಲ್ಲ. ಡಾ.ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡದಿದ್ದರೇ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ. ಅವರು ಯೋಚನೆ ಮಾಡಿದ ಕಾರಣಕ್ಕೆ ಸುಳ್ಯದಲ್ಲಿ ಅಂಗಾರ ಅವರು ಇಷ್ಟು ದಿನ ಎಂಎಲ್ಎ ಆಗಿದ್ದರು, ಮಂತ್ರಿ ಆದರು. ಮೀಸಲಾತಿ ಇಲ್ಲದಿದ್ದರೇ ಅದು ಮೇಲ್ಜಾತಿಯ ಪಾಲಾಗುತ್ತಿತ್ತು. ಹಾಗೇಯೇ ಮಹಿಳೆಯರು ಕೂಡ ಎಲ್ ಸ್ಥಾನಗಳಲ್ಲಿ ಮುಂದೆ ಬರುತ್ತಿದ್ದಾರೆ. ಆದರೆ, ರಾಜಕೀಯ ಮೀಸಲಾತಿ ಹೆಚ್ಚು ಮಾಡಿದರೇ ಅವರು ಮತ್ತಷ್ಟು ಸ್ಥಾನಗಳಲ್ಲಿ ಗೆದ್ದು ಬರುತ್ತಾರೆ" ಎಂದಿದ್ದಾರೆ.
*ಬಿಜೆಪಿಯಿಂದ ಮಹಿಳಾ ಸಿಎಂ*
ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಿಎಂ, ಬ್ರಾಹ್ಮಣ ಸಿಎಂ ಬಗ್ಗೆ ಮಾತುಕತೆ ನಡೆಯುತ್ತಲೆ ಇದೆ. ಇದರ ನಡುವೆ ಕರ್ನಾಟಕದಲ್ಲಿ ಶೋಭಾ ಕರಂದ್ಲಾಜೆ ಮಹಿಳಾ ಸಿಎಂ ಆಗುವ ಬಗ್ಗೆ ಮಾತುಗಳು ಕೇಳೀಬರುತ್ತಿವೆ. ಆದರೆ, ಇದಕ್ಕೆ ಉತ್ತರಿಸಿರುವ ಅವರು ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿ ವಿಷಯ ತಣ್ಣಗಾಗಿಸಿದ್ದಾರೆ.
"ನಾನು ಯಾವುದೇ ಸ್ವರ್ಧೆಗಿಲ್ಲ. ಇದು ಪಕ್ಷದ ನಿರ್ಧಾರಕ್ಕೆ ಬಿಟ್ಟದ್ದು. ಇದಕ್ಕೆ ಮುಖ್ಯ ಕಾರಣ ನಾನು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮಂತ್ರಿಯಾಗಿರುವು. ಅವರ ಸಂಪುಟದಲ್ಲಿ ಮಂತ್ರಿಯಾಗುವುದಕ್ಕಿಂತ ದೊಡ್ಡ ಗೌರವ ಬೇರೆಯಿಲ್ಲ. ಹೀಗಾಗಿ ನಾನು ಅವರ ಜೊತೆಗೆ ಕೆಲಸ ಮಾಡುವ ಅನುಭವ ಪಡೆಯುತ್ತಿದ್ದೇನೆ. ನಾನು ಯಾರಿಗೂ ಕಾಂಪಿಟೇಟರ್ ಆಗುವುದಿಲ್ಲ. ನನಗೆ ಸದ್ಯ ಚುನಾವಣೆ ನಿರ್ವಹಣೆಯ ಜವಾಬ್ದಾರಿ ಕೊಟ್ಟಿದ್ದಾರೆ. ಮೇ13ಕ್ಕೆ ನನ್ನ ಜವಾಬ್ದಾರಿ ಮುಗಿಯುತ್ತದೆ, ತಕ್ಷಣ ದೆಹಲಿಗೆ ಹೋಗುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications