'ರಾಜಕಾರಣಿಗಳು ಜೋಕರ್ಗಳಾ?'- ಹೆಸರು ಬದಲಾವಣೆ ಸುದ್ದಿಗೆ ಶೋಭಾ ಕರಂದ್ಲಾಜೆ ಕಿಡಿ
ಬೆಂಗಳೂರು, ಸೆ. 30: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕರಂದ್ಲಾಜೆ ಬದಲು ಜಾತಿ ಸೂಚಕ ಗೌಡ ಪದ ಸೇರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿಬಂದಿತ್ತು. ಈ ಬಗ್ಗೆ ಶೋಭಾ ಕರಂದ್ಲಾಜೆ ಅವರೇ ಸ್ವತಃ ಪ್ರತಿಕ್ರಿಯಿಸಿದ್ದು, ಯಾವ ಹೆಸರು ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ, ಇದು ಯಾರೋ ಹಬ್ಬಿಸಿರುವ ಸುಳ್ಳು ಸುದ್ದಿ. ಈ ಚರ್ಚೆ ಯಾಕೆ ಶುರುವಾಯಿತೋ ಗೊತ್ತಿಲ್ಲ. ಹೆಸರು ಬದಲಾಯಿಸಲು ನನಗೇನು ತಲೆ ಕೆಟ್ಟಿಲ್ಲ ಎಂದಿದ್ದಾರೆ.
"ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆದಿದೆ. ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಜಕಾರಣಿಗಳನ್ನು ಇವರೆಲ್ಲಾ ಜೋಕರ್ಸ್ ಅಂದುಕೊಂಡಿದ್ದಾರೆ" ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಗುಲ್ಲು ಸದ್ದಿ?
ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಒಕ್ಕಲಿಗರೊಬ್ಬರು ಅಧ್ಯಕ್ಷರಾದರೆ ಆ ಸಮುದಾಯದ ಮತದಾರರನ್ನು ಆಕರ್ಷಿಸುವುದು ಸುಲಭವಾಗುತ್ತದೆ. ಶೋಭಾ ಹೆಸರಿನ ಮುಂದೆ ಇರುವ ಕರಂದ್ಲಾಜೆಯಿಂದ ಒಕ್ಕಲಿಗ ಗುರುತು ಸ್ಪಷ್ಟವಾಗುವುದಿಲ್ಲ. ಹೀಗಾಗಿ ಗೌಡ ಹೆಸರನ್ನು ಸೇರಿಸಿದರೆ ಒಕ್ಕಲಿಗ ಐಡೆಂಟಿಟಿ ಸುಲಭವಾಗುತ್ತದೆ. ಹೀಗಾಗಿ ಅವರು ಹೆಸರನ್ನು ಶೋಭಾ ಗೌಡ ಆಗಿ ಬದಲಿಸಿಕೊಳ್ಳುತ್ತಾರೆ ಎಂಬಂತಹ ಸುದ್ದಿ ಹರಿದಾಡಿತ್ತು.
ಶೋಭಾ ಕರಂದ್ಲಾಜೆ ರಾಜ್ಯ ಬಿಜೆಪಿ ಅಧ್ಯಕ್ಷೆಯಾಗದೇ ಹೋದರೂ ಕೂಡ ೨೦೨೩ರ ಚುನಾವಣೆಯಲ್ಲಿ ಶೋಭಾ ಗೌಡ ಆಗಿ ಪ್ರಮುಖ ಪಾತ್ರ ವಹಿಸುವುದು ಹೌದು. ಮೈಸೂರು ಸೀಮೆ ಭಾಗದಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ. ಇಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮತ್ತು ಜೆಡಿಎಸ್ ಬಲವಾಗಿದೆ. ದೇವೇಗೌಡ ಕುಟುಂಬ, ಡಿಕೆ ಶಿವಕುಮಾರ್ ಅವರ ಪ್ರಾಬಲ್ಯ ಇಲ್ಲಿ ಹೆಚ್ಚು. ಇಲ್ಲಿ ಬಿಜೆಪಿ ಬಲವಾಗಿ ಬೇರೂರಬೇಕಾದರೆ ಒಕ್ಕಲಿಗ ನಾಯಕರಿಗೆ ಬಿಜೆಪಿ ಆದ್ಯತೆ ಕೊಡುವುದು ಅಗತ್ಯ.

ಶೋಭಾ ಕರಂದ್ಲಾಜೆ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರು ಬದಲಾಯಿಸಿಕೊಳ್ಳಲು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ಅವರು ಹೆಸರು ಬದಲಾವಣೆಗೆ ಅಫಿಡವಿಟ್ ಸಲ್ಲಿಸಬಹುದು ಎಂದು ಮೂಲವನ್ನು ಉಲ್ಲೇಖಿಸಿ ಮಾಧ್ಯಮವೊಂದರಲ್ಲಿ ವರದಿಯಾಗಿತ್ತು.
ಆದರೆ, ಈಗ ಶೋಭಾ ಕರಂದ್ಲಾಜೆ ಸ್ಪಷ್ಟನೆ ಕೊಡುವ ಮೂಲಕ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications