Shivamogga Temple: ಈ ದೇವರಿಗೆ ಒಣಮೆಣಸಿನಕಾಯಿ ರುಬ್ಬಿ ಹಚ್ಚಿದರೆ ದುಷ್ಟಶಕ್ತಿಗಳು ಹತ್ತಿರ ಸುಳಿಯಲ್ಲ..
ಏಳಿಗೆಯನ್ನು ಸಹಿಸಲಾಗದೆ ಮಾಟಮಂತ್ರ ಮಾಡುವವರು ಇಂದಿಗೂ ಇದ್ದಾರೆ. ಇದು ಅದೆಷ್ಟರ ಮಟ್ಟಿಗೆ ನೆರವೇರುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಮಾಟ ಮಂತ್ರದಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಎನ್ನುವ ನಂಬಿಕೆ ಕೂಡ ಇಂದಿಗೂ ಇದೆ. ಇದರಿಂದ ಪರಿಹಾರ ಕಂಡುಕೊಳ್ಳಲು ಜನ ದೇವರ ಮೊರೆ ಹೋಗುತ್ತಾರೆ. ಕರ್ನಾಟಕದಲ್ಲಿ ಮಾಟ ಮಂತ್ರಗಳಿಂದ ಹಾಗೂ ದುಷ್ಟಶಕ್ತಿಗಳಿಂದ ಪರಿಹಾರ ನೀಡುವಂತೆ ಪ್ರಾರ್ಥಿಸಲು ಸಾಕಷ್ಟು ವಿಶೇಷ ದೇವಸ್ಥಾನಗಳು ಇವೆ. ಅವುಗಳಲ್ಲಿ ಪ್ರತ್ಯಂಗಿರ ದೇವಿಯ ಪುಣ್ಯಕ್ಷೇತ್ರವೂ ಒಂದು.
ಪ್ರತ್ಯಂಗಿರಾ ದೇವಿ ದೇವಸ್ಥಾನ ಶಿವಮೊಗ್ಗದ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಇದೆ. ಭಕ್ತರ ಕಷ್ಟಗಳನ್ನು ಕ್ಷಣದಲ್ಲಿ ದೂರ ಮಾಡುವ ಜಗತ್ತಿನ ಪುಣ್ಯಕ್ಷೇತ್ರಗಳಲ್ಲಿ ಇದು ಕೂಡ ಒಂದು. ಇಲ್ಲಿನ ವಿಶೇಷತೆ ಏನು ಅಂದರೆ ವಾಮಾಚಾರ, ಮಾಟ. ಮಂತ್ರ ಹೀಗೆ ಯಾರು ಏನೇ ಮಾಡಿಸಿದರೂ ಇಲ್ಲಿಗೆ ಬಂದು ಪ್ರತ್ಯಂಗಿರಾ ದೇವಿಗೆ ಒಣಮೆಣಸಿನಕಾಯಿ ರುಬ್ಬಿ ಹಚ್ಚಿದರೆ ಯಾವುದೇ ದುಷ್ಟಶಕ್ತಿಗಳು ಹತ್ತಿರ ಸುಳಿಯಲ್ಲ.

ಒಣಮೆಣಸಿನಕಾಯಿ ಹೋಮ
ಸಂಕಷ್ಟಗಳನ್ನು ದೂರ ಮಾಡುವ ಈ ಪುಣ್ಯ ಕ್ಷೇತ್ರಕ್ಕೆ ಶುಕ್ರವಾರ ಹಾಗೂ ಭಾನುವಾರ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಕ್ಕೆ ಐದು ಶುಕ್ರವಾರ ಅಥವಾ ಐದು ಭಾನುವಾರ ಬಂದು ಭಕ್ತರು ಒಣಮೆಣಸಿನಕಾಯಿ ರುಬ್ಬಿ ದೇವಿ ಶಕ್ತಿಗೆ ಹಚ್ಚುತ್ತಾರೆ. ಇದರಿಂದ ಶತ್ರುಕಾಟ, ಭೂತಪ್ರೇತಗಳ ಕಾಟವೂ ಇರುವುದಿಲ್ಲ ಎನ್ನಲಾಗುತ್ತದೆ.
ಹಾಗೆಯೇ ಇಲ್ಲಿ ಬರುವ ಭಕ್ತರು ಸುಪ್ರಿತ್ ಗುರುಜಿಯವರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ. ಇಲ್ಲಿ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ಮೆಣಸಿನಕಾಯಿ ಹೋಮವನ್ನು ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ ದೋಷ ನಿವಾರಣೆ, ಶತ್ರು ಸಂಹಾರ, ಮಾಟ, ಮಂತ್ರ ಏನೇ ಇದ್ದರೂ ಪರಿಹಾರ ಸಿಗುತ್ತದೆ. ಈ ದೇವಸ್ಥಾನಕ್ಕೆ ಶಿವಮೊಗ್ಗ ಬಸ್ ನಿಲ್ದಾಣದ ಫ್ಲಾಟ್ ಫಾರಂ ನಂಬರ್ 8ರಿಂದ ನೇರವಾಗಿ ಬಸ್ ಇವೆ.

ವೇದದಲ್ಲಿ ಪ್ರತ್ಯಂಗಿರಾ ದೇವಿಯ ಬಗ್ಗೆ ಉಲ್ಲೇಖ:-
ಮಹಾಕಾವ್ಯಗಳಲ್ಲಿ ಒಂದಾದ ಅಥರ್ವಣ ವೇದದಲ್ಲಿ ತಾಯಿ ಪ್ರತ್ಯಂಗಿರಾ ದೇವಿಯ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ಪ್ರತ್ಯಂಗಿರಾ ದೇವಿಯನ್ನು ಘೋರ, ಉಗ್ರ ದೇವತೆಯನ್ನಾಗಿ ಚಿತ್ರಿಸಲಾಗಿದೆ. ಇದರಿಂದಾಗಿ ಕರ್ನಾಟಕದ ಏಕೈಕ ಶಕ್ತಿಪೀಠ ಇದಾಗಿದೆ. ಇನ್ನೂ ಧಗ ಧಗ ಜ್ವಲಿಸುವ ಸಹಸ್ತ್ರಿಸಿಂಹ ಮುಖವನ್ನು ದೇಹವನ್ನು, ಕೈಯಲ್ಲಿ ಭಯಾನಕ ಆಯುಧಗಳನ್ನು ಹೊಂದಿರುವ ಸಾಕ್ಷಾತ್ ಶಕ್ತಿ ಮಾತೆಯೇ ನೆಲೆಸಿರುವ ಸ್ಥಳ ಶಿವಮೊಗ್ಗದ ಈ ಪ್ರತ್ಯಂಗಿರಾ ದೇವಿ ದೇವಸ್ಥಾನ.
ಈ ದೇವಸ್ಥಾನದಲ್ಲಿ ಇರುವ ದೇವಿಯ ಮೂರ್ತಿಯನ್ನು ಯಾರೂ ಕೂಡ ಕೆತ್ತನೆ ಮಾಡಿಲ್ಲ. ಬದಲಾಗಿ ಸ್ವಯಂ ಮೂರ್ತಿಯಾಗಿ ಪ್ರತ್ಯಂಗಿರಾ ದೇವಿ ರೂಪದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ಅಚ್ಚರಿ ಅಂದರೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯಂದು ನಡೆಯುವ ಯಾಗದಲ್ಲಿ ಒಣಮೆಣಸಿನಕಾಯಿನ್ನು ಸುಡಲಾಗುತ್ತದೆ. ಸಾಮಾನ್ಯವಾಗಿ ಒಣಮೆಣಸಿನಕಾಯಿ ಸುಟ್ಟರೆ ಗಾಟು, ವಾಸನೆ ಹೆಚ್ಚಾಗಿರುತ್ತದೆ. ಆದರೆ ಈ ಯಾಗದಲ್ಲಿ ಒಣಮೆಣಸಿನಕಾಯಿ ಸುಟ್ಟರೆ ಗಾಟು ಆಗಲಿ ಹೊಗೆಯಾಗಲಿ ಆಗುವುದಿಲ್ಲ.

ಈ ಹೋಮದಲ್ಲಿ ಒಣಮೆಣಸಿನಕಾಯಿ ಸುಟ್ಟರೆ ಮಾಟ, ಮಂತ್ರ, ದೃಷ್ಟಿದೋಷ, ವಾಮಾಚಾರ, ಪ್ರೇತಾತ್ಮ ಭಾದೆಯಂತಹ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಭಾನಮತಿಯಂತಹ ನಕಾರಾತ್ಮಕ ಕಾರ್ಯಗಳಿಂದುಂಟಾಗುವ ಸಮಸ್ಯೆಗಳಿರುವವರು, ಅನಾರೋಗ್ಯವನ್ನು ಎದುರಿಸುತ್ತಿರುವವರು ಸ್ವತ: ಈ ದೇವಾಲಯಕ್ಕೆ ಬಂದು ಐದು ಭಾನುವಾರ ಅಥವಾ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಖಾರವಾದ ಕೆಂಪು ಒಣಮೆಣಸಿನಕಾಯಿ ರುಬ್ಬಿ ಶಕ್ತಿಗೆ ಹಚ್ಚುವುದರಿಂದ ಬಲಿಷ್ಠವಾದ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಸಂಹಾರವಾಗುತ್ತವೆ. ಅಲ್ಲದೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಮಂತರಾದ ಭಕ್ತರು ಕೂಡ ಅಧಿಕ ಜನರಿದ್ದಾರೆ.












Click it and Unblock the Notifications