ಭದ್ರಾವತಿ: ಹಣಕ್ಕಾಗಿ ದೊಡ್ಡಪ್ಪ-ದೊಡ್ಡಮ್ಮನ ಹತ್ಯೆಗೈದ ವೈದ್ಯ ಅರೆಸ್ಟ್: ಖಾಕಿಗೆ ಸುಳಿವು ಕೊಟ್ಟದ್ದೇ ಈ ಸಾಕ್ಷ್ಯಗಳು
ಶಿವಮೊಗ್ಗ: ಭದ್ರಾವತಿ ತಾಲೂಕಿನ ಭೂತನಗುಡಿಯಲ್ಲಿ ವೃದ್ಧ ದಂಪತಿ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಹಳೆನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬರುವುದರೊಳಗೆ 24 ಗಂಟೆಯಲ್ಲಿ ಕೊಲೆ ಆರೋಪಿ ವೈದ್ಯನನ್ನು ಬಂಧಿಸಿ ತನಿಖೆಗೆ ತಾರ್ಕಿಕ ಅಂತ್ಯ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಜನರ ಜೀವ ಉಳಿಸಬೇಕಾದ ವೈದ್ಯನೇ ಸ್ವಂತ ಸಂಬಂಧಿಕರ ಪ್ರಾಣ ತೆರೆದಿರುವುದು ಗೊತ್ತಾಗಿದೆ. ಪ್ರಕರಣಕ್ಕೆ ಸಿಕ್ಕ ಮಹತ್ವದ ಸಾಕ್ಷ್ಯಗಳು, ಅನುಮಾನಗಳ ಜಾಡು ಬೆನ್ನತ್ತಿದ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದೆ ರೋಚಕವಾಗಿದೆ.
ಜನವರಿ 19ರಂದು ಮಕ್ಕಳಿಂದ ಪ್ರತ್ಯೇಕವಾಗಿ ಭೂತನಗುಡಿಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಯ (ಪತಿ ಚಂದ್ರಪ್ಪ, ಪತ್ನಿ ಜಯಮ್ಮ) ನಿಗೂಢವಾಗಿ ಸಾವನ್ನಪ್ಪಿದ್ದರು. ದಂಪತಿಯ ಜೋಡಿ ನಿಧನ ಸುದ್ದಿ ಜಿಲ್ಲೆಯಾದ್ಯಂತ ಸಾಕಷ್ಟು ಅನುಮಾನ, ಚರ್ಚೆ ಹುಟ್ಟು ಹಾಕಿತ್ತು. ದೂರು ದಾಖಲಿಸಿಕೊಂಡ ಹಳೆನಗರ ಪೊಲೀಸರು ಲಭ್ಯ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿ ಆರೋಪಿ ಆಯುರ್ವೇದಿಕ್ ವೈದ್ಯ ಜಿ.ಪಿ.ಮಲ್ಲೇಶ್ ನನ್ನು ಬಂಧಿಸಿದ್ದಾರೆ. ಬಂಧಿತ ವೈದ್ಯ ಮೃತ ಚಂದ್ರಪ್ಪ ಅವರ ತಮ್ಮನ ಮಗ.

ಹತ್ಯೆ ನಡೆದಿದ್ದು ಯಾಕೆ?
ಆರೋಪಿ ವೈದ್ಯ ಮಲ್ಲೇಶ್ ವೈದ್ಯನಾಗಿದ್ದು, ಜೂಜಾಟಕ್ಕೆ ದಾಸನಾಗಿದ್ದ. ಜೂಜಿನಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದಲ್ಲದೇ ಅಪಾರ ಸಾಲ ಮಾಡಿಕೊಂಡಿದ್ದ. ಹೀಗಾಗಿ ಅವರಿವರ ಬಳಿ ಹಣ ಕೇಳುತ್ತಲೇ ಇದ್ದ. ಅದೇ ರೀತಿ ತಮ್ಮ ದೊಡ್ಡಪ್ಪ ಹಾಗೂ ದೊಡ್ಡಮ್ಮನವರಾದ ಮೃತ ಚಂದ್ರಪ್ಪ ಮತ್ತು ಜಯಮ್ಮ ಅವರ ಬಳಿ ಸುಮಾರು 15 ಲಕ್ಷ ರೂಪಾಯಿ ಕೇಳಿದ್ದ ಎನ್ನಲಾಗಿದೆ. ಆದರೆ ಅವರು ತಮ್ಮ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆಗಲೇ ಅವರ ಮೈಮೇಲಿದ್ದ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದ ವೈದ್ಯ, ದಂಪತಿ ಆರೋಗ್ಯ ತಪಾಸಣೆ ಹೆಸರಿನಲ್ಲಿ ಅವರ ಆರೋಗ್ಯದ ಕಡತ ಪಡೆದುಕೊಂಡು ಪರಿಶೀಲಿಸಿದಂತೆ ನಾಟಕವಾಡಿದ್ದಾನೆ. ನಿಮಗೆ ಇಂಜೆಕ್ಷನ್ ನೀಡುವುದು ಅಗತ್ಯವಿದೆ ಎಂದು ನಂಬಿಸಿದ್ದಾನೆ. ಬಳಿಕ ದಂಪತಿಗೆ ಅನಸ್ತೇಷಿಯಾ ಇಂಜೆಕ್ಷನ್ ಕೊಟ್ಟು ಸಾಯಿಸಿದ್ದ. ನಂತರ ಅಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಬೇರೆಡೆ ಇರುವ ಮೂವರು ಗಂಡು ಮಕ್ಕಳು ನಿತ್ಯವು ಕರೆ ಮಾಡುವಂತೆ ತಂದೆ ತಾಯಿಗೆ ಜ.19ರಂದು ಕರೆ ಮಾಡಿದ್ದಾರೆ. ಆದರೆ ಅವರ ತಂದೆ ತಾಯಿ ಕರೆ ಸ್ವೀಕರಿಸಲಿಲ್ಲ. ಅಕ್ಕ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನೆರೆಹೊರೆಯವರು ಕರೆ ಮಾಡಿದರೂ ಫೋನ್ ತೆಗೆಯದಿದ್ದಾಗ ಮನೆಗೆ ಬಂದು ನೋಡಿದ್ದಾರೆ. ವೃದ್ಧ ದಂಪತಿ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ.
ಮಕ್ಕಳು ಬಂದು ನೋಡಿದಾಗ ತಂದೆ ತಾಯಿ ಬಾಯಲ್ಲಿ ನೊರೆ ಕಾಣಿಸಿಕೊಂಡಿದೆ. ಆಸ್ಪತ್ರೆ ಸೇರಿಸುವಷ್ಟರಲ್ಲಿ ಅವರು ತೀರಿ ಹೋಗಿದ್ದರು. ಮೈ ಮೇಲಿದ್ದ ಚಿನ್ನಾಭರಣ ನಾಪತ್ತೆ ಆಗಿದ್ದವು. ಇದೆಲ್ಲ ನೋಡಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ದಂಪತಿ ಆರೋಗ್ಯಕ್ಕೆ ಸಂಬಂಧಿಸಿದ ಫೈಲ್ ಟೇಬಲ್ ಮೇಲಿದ್ದಿದ್ದನ್ನು ಗಮನಿಸಿದ್ದಾರೆ. ಜೊತೆಗೆ ತಮ್ಮ ದೊಡ್ಡಪ್ಪ ದೊಡ್ಡಮ್ಮನವರ ಸಾವಾದರೂ ವೈದ್ಯ ಮಲ್ಲೇಶ್ ನೋಡಲು ಬಂದಿರಲಿಲ್ಲ. ಅದಲ್ಲದೇ ಆತ ಈ ಮನೆಗೆ ಹಣ ಕೇಳಲು ಬಂದಾಗ ನೆರೆ ಹೊರೆಯವರು ಆತನನ್ನು ಗಮನಿಸಿದ್ದರು.
ವಿಚಾರಣೆ ವೇಳೆ ಬಾಯ್ಬಿಟ್ಟ ವೈದ್ಯ: ಪೊಲೀಸರಿಗೆ ನಗದು ಬಹುಮಾನ
ಇದೆಲ್ಲ ಮಾಹಿತಿ ಕಲೆ ಹಾಕಿದ ಪೊಲೀಸರು ಮಲ್ಲೇಶ್ನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆಗ ತಾನು ಹಣಕ್ಕಾಗಿ ಹೀಗೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿದ ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬರುವುದರೊಳಗೆ 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸಿರುವ ಪೊಲೀಸರ ಈ ಕಾರ್ಯಕ್ಕೆ ಮೇಲಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಗದು ಬಹುಮಾನ ಘೋಷಿಸಿದ್ದಾರೆ.












Click it and Unblock the Notifications