Karnataka By Polls: ಶಿಗ್ಗಾಂವಿ ಉಪ ಚುನಾವಣೆ: ನಾನು ಯಾರಿಗೂ ಮಾತುಕೊಟ್ಟಿಲ್ಲ: ಬಸವರಾಜ ಬೊಮ್ಮಾಯಿ
ಹಾವೇರಿ, ಅಕ್ಟೋಬರ್ 22: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ಶಿಗ್ಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶಿಗ್ಗಾವಿ ಕ್ಷೇತ್ರದ ಚುನಾವಣೆಯ ಗೆಲುವು, ಈ ಕ್ಷೇತದ ಭವಿಷ್ಯ, ಅಭಿವೃದ್ಧಿ ಮತ್ತು ಕ್ಷೇತ್ರದ ಸಾಮರಸ್ಯದ ಬದುಕು ಕಾಪಾಡಲಿದೆ. ಈ ಕ್ಷೇತ್ರದಲ್ಲಿ ಸಾಮರಸ್ಯ ಕದಲುತ್ತಿದೆ. ದ್ವೇಷದ ರಾಜಕಾರಣ ಬರುತ್ತಿದೆ. ಪೊಲೀಸ್ ಸ್ಟೇಷನ್ ರಾಜಕಾರಣ ಮಾಡುತ್ತಿದೆ. ಇದು ಮುಂದುವರೆಯಬಾರದು. ನಮಗೆ ಜಾತಿ, ಮತ ಧರ್ಮ ಇಲ್ಲ. ನಮ್ಮಲ್ಲಿ ನ್ಯಾಯ, ನೀತಿ ಇದೆ. ಈ ಚುನಾವಣೆ ನಮ್ಮ ನಿಮ್ಮೆಲ್ಲರ ಭವಿಷ್ಯದ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಹೇಳಿದರು.

ಇವತ್ತು ಪಕ್ಷದ ವರಿಷ್ಠರು ಉಪ ಚುನಾವಣೆ ವಿಶೇಷ ಸಂದರ್ಭ ಇದನ್ನು ಗೆಲ್ಲುವ ಅವಕಾಶ ಇದೆ. ಮೂರು ಸರ್ವೆ ಮಾಡಿದ್ದೇವೆ. ಇದು ನಮ್ಮ ನಿರ್ಣಯ, ನೀವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಮಾತನಾಡುವ ಮೊದಲೇ ಪಟ್ಟಿ ಸಿದ್ಧಪಡಿಸಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಸಿದ್ದರಾಗಿದ್ದರು. ನಾನು ಎಷ್ಟೇ ಪಯತ್ನ ಮಾಡಿದರೂ ನಿಮ್ಮ ಛಲ, ನಿಮ್ಮ ಹಠ ಜಯಗಳಿಸಿದೆ. ನನ್ನ ಛಲ ಹಠ ನಿಮ್ಮ ಮುಂದೆ ನಾನು ತಲೆ ಬಾಗಿದ್ದೇನೆ. ನಾಯಕರಿಗಿಂತ ನಾಯಕರನ್ನು ಮಾಡಿದ ಮಹಾಜನತೆಯ ಶಕ್ತಿ ದೊಡ್ಡದು ಎಂದು ತಾವು ತೋರಿಸಿದ್ದೀರಿ ಎಂದು ಹೇಳಿದರು.
ವಿಶ್ವಾಸ, ಸಂಬಂಧ ಆತ್ಮೀಯತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವ ಜನ್ಮದ ಋಣ ಇದೆಯೋ ಗೊತ್ತಿಲ್ಲ. ಕರ್ನಾಟಕದ ಯಾವ ರಾಜಕಾರಣಿಗೆ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಅಷ್ಟು ಪೀತಿ ವಿಶ್ವಾಸ ನನಗೆ ಸಿಕ್ಕಿದೆ. ರಾಜಕೀಯ, ನೈಸರ್ಗಿಕ, ಆಡಳಿತಾತ್ಮಕ ಸಂಕಷ್ಟ, ಸಾಮಾಜಿಕ ಸಂಕಷ್ಟ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಪ್ರವಾಹ ಬಂದ ಸಂದರ್ಭದಲ್ಲಿ ಹಲವಾರು ಮನೆಗಳು ಬಿದ್ದವು. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಐದು ಲಕ್ಷ ರೂಪಾಯಿ ಪರಿಹಾರ ನೀಡಿ, ಸುಮಾರು 18 ಸಾವಿರ ಮನೆಗಳನ್ನು ಈ ಕ್ಷೇತದಲ್ಲಿ ಕಟ್ಟಿದ್ದೇವೆ. ಇದೊಂದು ದೊಡ್ಡ ದಾಖಲೆ ಎಂದು ಹೇಳಿದರು.
ನಾನು ಯಾವುದಾದರೂ ಊರಿಗೆ ಹೋದರೆ, ಜನರು ತಮ್ಮ ಮನೆಗೆ ಕರೆದು ಇದು ನೀವು ಕಟ್ಟಿದ ಮನೆ ಎಂದು ತೋರಿಸಿ ಪ್ರೀತಿ ತೋರಿಸಿದ್ದಾರೆ. ಆ ಮನೆಗಳನ್ನು ನೋಡಿ ನನ್ನ ಮನೆಕ್ಕಿಂತ ಹೆಚ್ಚು ಸಂತೋಷ ಪಟ್ಟಿದ್ದೇನೆ. ಬಡ ಕುಟುಂಬಕ್ಕೆ ಆಶ್ರಯ ಸಿಕ್ಕಿದೆ. ಹೆಂಡತಿ ಮಕ್ಕಳು ಸುಖವಾಗಿರುತ್ತಾರೆ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಕಲಿಯುತ್ತಾರೆ. ಅವರಿಗೆ ಆರ್ಸಿಸಿ ಮನೆ ಸಿಗುತ್ತದೆ ಎಂದು ಜೀವನದಲ್ಲಿ ಕನಸು ಕಂಡಿರಲಿಲ್ಲ. ಬಡವರು ಏನೂ ಕೇಳುವುದಿಲ್ಲ. ಕೇವಲ ಗೌರವ ಕೇಳುತ್ತಾರೆ. ಗೌರವ ಸ್ವಾಭಿಮಾನ ಹೇಗೆ ಬರುತ್ತದೆ ಎಂದರೆ ತಲೆಗೊಂದು ಸೂರು ಮೈಮೇಲೆ ಬಟ್ಟೆ, ಕೈಗೊಂದು ಕೆಲಸ, ಹೊಟ್ಟೆಗೆ ಅನ್ನ ಸಿಕ್ಕಾಗ ಗೌರವ ಸ್ವಾಭಿಮಾನ ಬರುತ್ತದೆ ಎಂದರು.
2008 ರಲ್ಲಿ ಕ್ಷೇತ್ರಕ್ಕೆ ಬಂದಾಗ ಅಭಿವೃದ್ಧಿಯ ಕಲ್ಪನೆಯನ್ನು ಹಂಚಿಕೊಂಡಿದ್ದೆ, ಆಗ ನಾನು ನಿಮ್ಮ ಜೊತೆಗೆ ಬದುಕುತ್ತೇನೆ. ನಿಮ್ಮ ಜೊತೆಗೆ ಸಾಯುತ್ತೇನೆ ಎಂದು ಹೇಳಿದ್ದೆ. ಬಂದುಗಳೆ ಈ ಚುನಾವಣೆ ಬಂದಾನ ನಾನು ನಿರ್ಲಿಪ್ತನಾಗಿದ್ದೇನೆ. ನನ್ನ ಮೇಲೆ ಒತ್ತಡವನ್ನು ಹಾಕಿದ್ದೀರಿ, ನೀವು ಜಯಶಾಲಿಯಾಗಿದ್ದೀರಿ. ನಾನು ಯಾರಿಗೂ ಆಶ್ವಾಸನೆಯನ್ನು ಕೊಟ್ಟಿರಲಿಲ್ಲ. ಹಲವಾರು ಜನರು ಬಂದಿದ್ದರು. ಸುಮಾರು 57 ಜನರು ಅರ್ಜಿ ಹಾಕಿದ್ದರು. ಸುಮಾರು ಎಂಟು ಹತ್ತು ಜನ ದೊಡ್ಡ ಪ್ರಮಾಣದಲ್ಲಿ ಓಡಾಡಿದ್ದರು. ಅಷ್ಟು ಜನರು ಆಕಾಂಕ್ಷಿಗಳಿದ್ದಾಗ ಯಾರೋ ಒಬ್ಬರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.
ರಾಜಕೀಯ ಅನುಭವ ಇರುವವರು ಯಾರೂ ಹೇಳುವುದಿಲ್ಲ. ನಾನು ಯಾರಿಗೂ ಮಾತು ಕೊಟ್ಟಿಲ್ಲ. ಮಾತು ತಪ್ಪಿಲ್ಲ. ನನಗೆ ಯಾವಾಗ ಅವಕಾಶ ಸಿಕ್ಕಿದೆ. ಎಲ್ಲ ಸಮುದಾಯಗಳ ಕಾರ್ಯಕರ್ತರಿಗೆ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ನಾನು ಈ ಕ್ಷೇತಕ್ಕೆ ಬರುವ ಮೊದಲು ಇಲ್ಲಿಂದ ಯಾರೂ ವಿಧಾನ ಪರಿಷತ್ ಸದಸ್ಯರಾಗಿರಲಿಲ್ಲ. ನಿಗಮಗಳ ಅಧ್ಯಕ್ಷರಾಗಿರಲಿಲ್ಲ. ಯಾವುದೇ ಪ್ರಶಸ್ತಿಗಳು ಬಂದಿರಲಿಲ್ಲ. ಯಾರೂ ಗುರುತಿಸಿರಲಿಲ್ಲ. ಸಾಕಷ್ಟು ಹುದ್ದೆಗಳು ಸಿಕ್ಕಿವೆ. ಇದು ನನಗೆ ಸಮಾಧಾನ ಇದೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.












Click it and Unblock the Notifications