ಸಿಎಂ ಸಿದ್ದರಾಮಯ್ಯ ರೈತ ಹಂತಕ ಅಂತೆ!
ಕೊಪ್ಪಳ, ಮಾ.26 : ಲೋಕಸಭೆ ಚುನಾವಣೆಗೆ ನಾಮಪತ್ರ ಪತ್ರ ಸಲ್ಲಿಕೆ ಅಂತ್ಯಗೊಳ್ಳುತ್ತಿದ್ದಂತೆ ಪ್ರಚಾರದತ್ತ ಎಲ್ಲಾ ಪಕ್ಷದ ನಾಯಕರು ಗಮನ ಹರಿಸಿದ್ದಾರೆ. ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ನರಹಂತಕ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ರೈತ ಹಂತಕ ಎಂದು ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕೊಪ್ಪಳದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನರಹಂತಕ ಎಂದು ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಹಂತಕ ಎಂದರು.
ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿ ಇರುವ ಸಿದ್ದರಾಮಯ್ಯ ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೆ ನರಹಂತಕ ಎಂದು ಹೇಳುವುದು ತಪ್ಪು. ಮುಖ್ಯಮಂತ್ರಿಗಳಿಗೆ ಇಂತಹ ಹೇಳಿಕೆ ಶೋಭೆ ತರುವಂತದ್ದಲ್ಲ. ತಮ್ಮ ಜವಾಬ್ದಾರಿ ಅರಿತು ಅವರು ಹೇಳಿಕೆಗಳನ್ನು ನೀಡಲಿ ಎಂದು ಜಗದೀಶ್ ಶೆಟ್ಟರ್ ಸಲಹೆ ನೀಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಅಲ್ಲಿನ ಜನರು ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿ ಪಡೆದು ಕೇವಲ 10 ತಿಂಗಳಾಗಿದೆ. ಮೋದಿ ಜನಪ್ರಿಯತೆಯನ್ನು ನೋಡಿ ಸಹಿಸಿಕೊಳ್ಳಲಾಗದೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಗಟ್ಸ್ ಇದ್ದರೆ ಪ್ರಧಾನಿ ಅಭ್ಯರ್ಥಿ ಘೋಷಿಸಿ : ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಕಾಂಗ್ರೆಸ್ ಚುನಾವಣೆ ಸಮೀಪಿಸಿದರೂ ಈ ವರೆಗೆ ಪ್ರಧಾನಿ ಅಭ್ಯರ್ಥಿಯನ್ನು ಏಕೆ ಘೋಷಣೆ ಮಾಡಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು. ಕಾಂಗ್ರೆಸ್ ಗೆ ಗಟ್ಸ್ ಇದ್ದರೆ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಶೆಟ್ಟರ್ ಸವಾಲು ಹಾಕಿದರು.