ಕುಡಿಯುವ ನೀರಿಗಾಗಿ ಡಿ.21ಕ್ಕೆ ಚಿಕ್ಕಬಳ್ಳಾಪುರ, ಕೋಲಾರ ಬಂದ್
ಚಿಕ್ಕಬಳ್ಳಾಪುರ, ಡಿಸೆಂಬರ್, 17: ಬಯಲುಸೀಮೆ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಖ೦ಡಿಸಿ ಡಿಸೆ೦ಬರ್ 21ರಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ರಸ್ತೆ ತಡೆ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬ೦ದ್ ಮಾಡಲು ನಿರ್ಧರಿಸಲಾಗಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಹಾಗೂ ಕರ್ನಾಟಕ ರಾಜ್ಯ ರೈತ ಸ೦ಘ, ಹಸಿರು ಸೇನೆಯ ನೇತೃತ್ವದಲ್ಲಿ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಬಂದ್ ಡಿಸೆಂಬರ್ 21ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ನಡೆಯಲಿದೆ.[ಬಯಲು ಸೀಮೆಗೆ ಕರ್ನಾಟಕ ರಾಜ್ಯೋತ್ಸವ ಪ್ರಸ್ತುತವೇ?]
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪ್ರಮುಖ ಸ್ಥಳಗಳಾದ, ಕೈವಾರ ಕ್ರಾಸ್, ಏನಿಗದಲೆ, ಚಿಲಕಲನೇರ್ಪು, ಕೆ೦ಚಾರ್ಲಹಳ್ಳಿ, ಬಟ್ಲಹಳ್ಳಿ, ಬೂರಗಮಾಕಲಹಳ್ಳಿ, ಶಿ೦ಗನಹಳ್ಳಿ, ಸ೦ತೇಕಲ್ಲಹಳ್ಳಿ ಮತ್ತಿತರ ಕಡೆ ಬ೦ದ್ ಮಾಡಲು ಈಗಾಗಲೇ ಗ್ರಾಮಸ್ಥರು ಕೈಜೋಡಿಸಿದ್ದಾರೆ.
ನೀರಾವರಿ ಹೋರಾಟದ ಬಗ್ಗೆ ಚಿ೦ತಾಮಣಿ ತಾಲ್ಲೂಕಿನಲ್ಲಿ ತೆಲ೦ಗಾಣ ಮಾದರಿಯಲ್ಲಿ ಬ೦ದ್ ಮಾಡಲು ಸಿದ್ಧತೆ ನಡೆಯುತ್ತಿವೆ. ಚಿ೦ತಾಮಣಿ ನಗರದ ಬೆ೦ಗಳೂರು ರಸ್ತೆಯ ಚಿನ್ನಸ೦ದ್ರ, ಕೋಲಾರ ರಸ್ತೆ, ಚೇಳೂರು ರಸ್ತೆ ಮತ್ತು ಬಾಗೇಪಲ್ಲಿ ರಸ್ತೆಗಳ ಮಧ್ಯೆ ಶಾಮಿಯಾನ ಹಾಕಿ ಹೋರಾಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.[ಕೋಲಾರದಲ್ಲಿ ಹಸಿರು ಕ್ರಾಂತಿಗೆ ಕೈ ಜೋಡಿಸಿದ ಯುವಕರು]
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗದ ಕೆಲವು ತಾಲೂಕುಗಳು ನೀರಿನ ಕೊರತೆ ಎದುರಿಸುತ್ತಿದೆ. ಆದರೆ ಸರ್ಕಾರ ಮಾತ್ರ ಇವರ ಬೇಡಿಕೆಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂಬುದು ಇವರ ಈ ಹೋರಾಟಕ್ಕೆ ಕಾರಣವಾಗಿದೆ.