ಸಚಿವರ ಜೊತೆ ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದ ರೋಹಿಣಿ ಸಿಂಧೂರಿ
ಬೆಂಗಳೂರು, ಜುಲೈ 11; "ಶ್ರಾವಣ ಮಾಸದ ಕೊನೆಯ ವಾರದಲ್ಲಿ ಕರ್ನಾಟಕದಿಂದ ಕಾಶಿಗೆ ಭಾರತ್ ಗೌರವ್ ರೈಲು ಸಂಚಾರ ನಡೆಸಲಿದೆ" ಎಂದು ಕರ್ನಾಟಕದ ಮುಜರಾಯಿ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸೋಮವಾರ ಸಚಿವರು ಭಾರತ್ ಗೌರವ್ ರೈಲು ಬೋಗಿ ಪರಿಶೀಲಿಸಿದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ, ನೈಋತ್ಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊಯಿಮತ್ತೂರಿನಿಂದ ಹೊರಟ ಮೊದಲು ಖಾಸಗಿ ರೈಲು 'ಭಾರತ್ ಗೌರವ್'
ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಭಾರತ್ ಗೌರವ್ ಯೋಜನೆಯಡಿ ಸಂಚಾರ ನಡೆಸುವ ರೈಲು ನಿಲ್ಲಿಸಲಾಗಿದೆ. ಸಚಿವರು ರೈಲು ಬೋಗಿಗಳ ವೀಕ್ಷಣೆ ಮಾಡಿ, ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಬೆಂಗಳೂರು-ಕಣ್ಣೂರು ರೈಲು ಕೋಝಿಕ್ಕೋಡ್ಗೆ ವಿಸ್ತರಣೆ: ಪ್ರಯಾಣಿಕರ ವಿರೋಧ
ಭಾರತ್ ಗೌರವ್ ರೈಲು ಧಾರ್ಮಿಕ ಕ್ಷೇತ್ರಗಳಿಗೆ ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ವಾರಣಾಸಿ, ಅಯೋಧ್ಯಾ, ಪ್ರಯಾಗ್ ರಾಜ್ ಮತ್ತು ಕಾಶಿಗೆ ಯಾತ್ರಾರ್ಥಿಗಳು ಈ ರೈಲುಗಳ ಮೂಲಕ ಸಂಚಾರ ನಡೆಸಲಿದೆ.
ಹಾಲಿ, ಮಾಜಿ ಸಂಸದರ ಉಚಿತ ರೈಲು ಪ್ರಯಾಣಕ್ಕೆ 62 ಕೋಟಿ ಖರ್ಚು
14 ಬೋಗಿಗಳನ್ನು ಹೊಂದಿರುವ ರೈಲು ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗ್ ರಾಜ್-ಬೆಂಗಳೂರು ಮಾರ್ಗದಲ್ಲಿ 7 ದಿನಗಳ ಕಾಲ 4162 ಕಿ. ಮೀ. ಸಂಚಾರ ನಡೆಸಲಿದೆ. 11 ಬೋಗಿಗಳಲ್ಲಿ ಪ್ರಯಾಣಿಕರು ಸಂಚಾರ ನಡೆಸಬಹುದು. ಒಂದು ಬೋಗಿಯಲ್ಲಿ ಜನರು ಭಜನೆ ಮಾಡಲು ಅವಕಾಶ ನೀಡಲಾಗುತ್ತದೆ.
ಕಾಶಿಗೆ ಭೇಟಿ ನೀಡುವುದು ಹಿಂದೂಗಳ ಆಸೆ
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, "ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆಯನ್ನು ಕೈಗೊಳ್ಳಬೇಕು ಎನ್ನುವುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಇದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ನನ್ನ ಆಶಯವಾಗಿತ್ತು. ಇದಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ರೀತಿಯ ಸಹಕಾರ ನೀಡಿದರು. ಇದಕ್ಕೆ ಅಭಿನಂದನೆಗಳು" ಎಂದರು.
ದೇಶದ ಮೊದಲ ರಾಜ್ಯದ ಎನ್ನುವ ಹೆಗ್ಗಳಿಕೆ
"ಶ್ರಾವಣ ಮಾಸದ ಕೊನೆಯಲ್ಲಿ ಭಾರತ್ ಗೌರವ್ ರೈಲು ಸಂಚಾರ ಆರಂಭಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ರೈಲು ಸಂಚಾರ ನಡೆಸಲಿದೆ. ಕಾಶಿ ಯಾತ್ರಾರ್ಥಿಗಳು ಸಂಚಾರ ನಡೆಸುವ ರೈಲುಗಳ ವಿನ್ಯಾಸ ಸಿದ್ಧಪಡಿಸಲು ಅನುಮತಿ ದೊರಕಿದೆ" ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಕಡಿಮೆ ಖರ್ಚಿನಲ್ಲೇ ಪ್ರವಾಸ
"ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಸಂಚಾರ ನಡೆಸಲು ಅನುಕೂಲವಾಗುವಂತೆ ಪ್ಯಾಕೇಜ್ಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಜರಾಯಿ ಇಲಾಖೆ ಇಟ್ಟಿದೆ. ಇಲಾಖೆಯಿಂದ ರೈಲುಗಳನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.
7 ದಿನಗಳ ಪ್ಯಾಕೇಜ್ ಇರುತ್ತದೆ
"ಧಾರ್ಮಿಕ ಕ್ಷೇತ್ರಗಳಿಗೆ ಸಂಚಾರ ನಡೆಸುವ ರೈಲಿನ ವಿನ್ಯಾಸ ಬದಲಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಪ್ರವಾಸಿ ಪ್ಯಾಕೇಜ್ 7 ದಿನಗಳನ್ನು ಒಳಗೊಂಡಿರುತ್ತದೆ. ರೈಲುಗಳನ್ನು ಬಾಡಿಗೆ ಪಡೆಯಲು 1 ಕೋಟಿ ರೂ. ಭೌತಿಕ ಗ್ಯಾರಂಟಿಯನ್ನು ಇಲಾಖೆಗೆ ನೀಡಲಾಗಿದೆ" ಎಂದು ಸಚಿವರು ಹೇಳಿದರು.