Government employees: ಶಾಲಿನಿ ರಜನೀಶ್ ಜೊತೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಸಭೆ: ಚರ್ಚೆಯಾಗಿದ್ದೇನು?
ಬೆಂಗಳೂರು, ಫೆಬ್ರವರಿ 22: ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿರಜನೀಶ್ ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಸಭೆ ನಡೆಯಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಹಲವು ಬೇಡಿಕೆಗಳ ಕುರಿತು ಸಭೆಯಲ್ಲಿ ಗಮನ ಸೆಳೆದರು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದು. ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿಗೆ ನಿಯಮಗಳ ತಿದ್ದುಪಡಿ ಮಾಡುವುದು. ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ನೌಕರರ ಜೇಷ್ಠತಾ ಪಟ್ಟಿಯನ್ನು ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್ ಮಾಹೆಯಲ್ಲಿ ಪ್ರಕಟಿಸುವುದು. ನಿಗದಿತ ಅವಧಿಯಲ್ಲಿಯೇ ವೇತನ ಭತ್ಯೆಗಳನ್ನು ಪಾವತಿಸುವುದು.

ರಾಜ್ಯ ಸರ್ಕಾರದ ಅಧಿಕಾರಿ ನೌಕರರ ಇಲಾಖೆ ವಿಚಾರಣೆಯನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವುದು.ಅಧಿಕಾರಿ ಮತ್ತು ನೌಕರರ ಮೇಲಿನ ದೈಹಿಕ ಹಲ್ಲೆ ಅಥವಾ ದೌರ್ಜನ್ಯವನ್ನು ತಪ್ಪಿಸಲು ಕಠಿಣ ಕಾನೂನುಗಳನ್ನು ರೂಪಿಸುವುದು. ಪ್ರತಿ ವರ್ಷ ಏಪ್ರಿಲ್ 21ರಂದು ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರಧಾನ ಮಾಡುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ರಾಜ್ಯದ ಜನಸಂಖ್ಯೆ ಅನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವುದು. ರಾಜ್ಯದ ಎಲ್ಲಾ ಕಚೇರಿಗಳಲ್ಲೂ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ಕಲ್ಪಿಸುವುದು. ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಗಳ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಕಾರ್ಯದರ್ಶಿರವರಿಗೆ ಸುದೀರ್ಘವಾಗಿ ಸರ್ಕಾರಿ ನೌಕರರ ಸಮಸ್ಯೆಗಳನ್ನು ಮತ್ತು ನೌಕರರ ಬೇಡಿಕೆಗಳನ್ನು ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರು ಮಂಡಿಸಿದರು.
ಇನ್ನೂ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿರಜನೀಶ್ ರವರು, ಎಲ್ಲಾ ವಿಷಯಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರವಾಗಿ ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ತಿಳಿಸಿದರು ಹಾಗೂ ಎಲ್ಲಾ ಸರ್ಕಾರಿ ನೌಕರರು IGOT ಅಪ್ಲಿಕೇಶನ್ ನ್ನು ತಮ್ಮ ಮೊಬೈಲ್ ಗಳಲ್ಲಿ ಡೌನ್ಲೋಡ್ ಮಾಡಿ ಈ ಅಪ್ಲಿಕೇಶನ್ ಅನ್ನು ಬಳಸುವಂತೆ ತಿಳಿಸಿದರು. IGOT ಅಪ್ಲಿಕೇಶನ್ ನೌಕರ ಸ್ನೇಹಿಯಾಗಿದ್ದು, ಇದರಲ್ಲಿ ಒತ್ತಡ ನಿರ್ವಹಣೆ, ಯೋಗ, ಕರಡು(ಡ್ರಾಫ್ಟಿಂಗ್)ಪತ್ರ ತಯಾರಿಸುವ ಬಗ್ಗೆ ಹೀಗೆ ಹತ್ತು ಹಲವಾರು, ನೌಕರರಿಗೆ ದಿನ ನಿತ್ಯ ಅವಶ್ಯವಿರುವ ಮಾಹಿತಿಗಳಿದ್ದು ಎಲ್ಲಾ ನೌಕರರು gov.in ಮೇಲ್ ಐ.ಡಿ ಗಳನ್ನು ತೆರೆದು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಇದರಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿರಜನೀಶ್ ರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಕಾರ್ಯದರ್ಶಿರವರ ವಿಶೇಷಾಧಿಕಾರಿಗಳಾದ ಶ್ರೀಮತಿ ಪೂವಿತ ಎಸ್ ಭಾ.ಆ.ಸೇ ರವರು, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಿರಿಗೌಡ ಹೆಚ್ ರವರು, ಖಜಾಂಚಿಗಳಾದ ಶ್ರೀ ವಿ.ವಿ ಶಿವರುದ್ರಯ್ಯ ರವರು, ಗೌರವಾಧ್ಯಕ್ಷರಾದ ಶ್ರೀ ಎಸ್ ಬಸವರಾಜ್ ರವರು, ಕಾರ್ಯಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಳ್ಳಾರಿ ರವರು, ಸಚಿವಾಲಯ ನೌಕರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಸಂಗಾ ರವರು, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರುಗಳು, ರಾಜ್ಯ ಉಪಾಧ್ಯಕ್ಷರುಗಳು ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications