ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಖಾಲಿ: ಮಹಿಳೆಯರ ಉಚಿತ ಬಸ್ ಪ್ರಯಾಣ ರದ್ದಾಗುತ್ತಾ?
ಬೆಂಗಳೂರು, ನವೆಂಬರ್ 9: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಕೊಟ್ಟ ಮಹತ್ವಾಕಾಂಕ್ಷೆ ಯೋಜನಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಈ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರು ಈಗಾಗಲೇ ಉಚಿತವಾಗಿ ಬಸ್ ಸೇವೆಗಳನ್ನು ಪಡೆದಿದ್ದಾರೆ.
ಹೌದು, ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣ ಕೇವಲ ಆರೇ ತಿಂಗಳಿಗೆ ಖಾಲಿಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಬಜೆಟ್ನಲ್ಲಿ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೂ, ಆದರೆ, ನವೆಂಬರ್ 5 ರವರೆಗೆ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್ ಮೌಲ್ಯವು 2,143 ಕೋಟಿ ರೂ. ತಲುಪಿದೆ. ಇನ್ನೂ ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳುಗಳು ಬಾಕಿ ಉಳಿದಿದ್ದು, ಬಜೆಟ್ನಲ್ಲಿ ಮೀಸಲಿಟ್ಟ ಹಣ ಡಿಸೆಂಬರ್ವರೆಗೆ ಮಾತ್ರ ಬರಬಹುದು ಎಂದು ಸಾರಿಗೆ ನಿಗಮಗಳೇ ಹೇಳಿಕೊಂಡಿವೆ.

ಇನ್ನೂ ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಖಾಲಿ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಹಾತ್ವಕಾಂಕ್ಷೆಯ ಶಕ್ತಿ ಯೋಜನೆಗೆ ಡಿಸೆಂಬರ್ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ, ಡಿಸೆಂಬರ್ ವರೆಗೆ ನೀಡಲಾದ ಒಟ್ಟು ಟಿಕೆಟ್ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು, ನಾವು ಹೆಚ್ಚಿನ ಹಣವನ್ನು ನಿಯೋಜಿಸುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ಈ ಯೋಜನೆ ಜಾರಿಯಾದ ಕೆಲವು ತಿಂಗಳ ನಂತರ ಉಚಿತ ಬಸ್ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಎಂದು ನಾವು ಊಹಿಸಿದ್ದೇವೆ. ಆದರೆ ಇದರ ಸಂಖ್ಯೆ ಸ್ಥಿರವಾಗಿದೆ. ಶಕ್ತಿ ಯೋಜನೆಗೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಮತ್ತಷ್ಟು ಹೆಚ್ಚು ಮಾಡಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಶಕ್ತಿ ಯೋಜನೆ ಹಣ ಆರೇ ತಿಂಗಳಿಗೆ ಖಾಲಿ: ಬಿಜೆಪಿ
ಕಾಂಗ್ರೆಸ್ನ "ಶಕ್ತಿ" ಯೋಜನೆಗೆ ಆರು ತಿಂಗಳೊಳಗೆ ನಿಶ್ಯಕ್ತಿ ಆವರಿಸಿದೆ. ಒಂದು ವರ್ಷಕ್ಕೆ ಮೀಸಲಿಟ್ಟ ಶಕ್ತಿ ಯೋಜನೆ ಹಣ ಆರೇ ತಿಂಗಳಿಗೆ ಖಾಲಿಯಾಗಿದೆ, ಅಂದರೆ ಕಾಂಗ್ರೆಸ್ ಎಂತಹ ತಿಮಿಂಗಿಲ ಎಂಬುದನ್ನು ನೀವೇ ಊಹಿಸಿ ಎಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಉಚಿತ 10 ಕೆಜಿ ಅಕ್ಕಿಯ ಅನ್ನಭಾಗ್ಯ ಇದುವರೆಗೂ ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ ಬಡವರಿಗೆ ನೀಡುವ 05 ಕೆಜಿ ಅಕ್ಕಿಯಲ್ಲಿ ಸಹ 02 ಕೆಜಿ ಅಕ್ಕಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಳುಂ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಚುನಾವಣೆಗೂ ಮುನ್ನ ಮನೆ-ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಚುನಾವಣೆಯಲ್ಲಿ ಗೆದ್ದ ನಂತರ ಇಲ್ಲಸಲ್ಲದ ಕಂಡಿಷನ್ ಹಾಕಿ, ಈಗ ಸರಿಯಾಗಿ ವಿದ್ಯುತ್ ನೀಡದೆ ಕರ್ನಾಟಕ ಕತ್ತಲಾಗಿದೆ. "ನಿಮ್ಮ ಪುಕ್ಸಟ್ಟೆ ವಿದ್ಯುತ್ ಬೇಡ ಸ್ವಾಮಿ, ನಮಗೆ ಸರಿಯಾಗಿ ವಿದ್ಯುತ್ ನೀಡಿ" ಎಂದು ಕರ್ನಾಟಕದ ಜನತೆ ಪರಿಪರಿಯಾಗಿ ಬೇಡಿಕೊಳ್ಳುವಷ್ಟರ ಮಟ್ಟಿಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕಣ್ಣಿಗೆ ರಾಚುತ್ತಿದೆ.
ರಾಜ್ಯದಲ್ಲಿ ದುರಾಡಳಿತ ನೀಡುತ್ತಿರುವ ಕಾಂಗ್ರೆಸ್ ಚುನಾವಣೆಗೂ ಮುನ್ನ ಉಚಿತ, ಖಚಿತ, ನಿಶ್ಚಿತ ಎಂದೆಲ್ಲಾ ಕರ್ನಾಟಕದ ಜನತೆಯ ಕಿವಿ ಮೇಲೆ ಇಟ್ಟಿದ್ದ ಹೂವುಗಳೆಲ್ಲವೂ ಬೋಗಸ್!! ಅಧಿಕಾರಕ್ಕೇರಿ ಆರು ತಿಂಗಳು ಮುಗಿಯುತ್ತಾ ಬಂದರೂ ಘೋಷಿಸಿದ ಗ್ಯಾರಂಟಿಗಳಲ್ಲಿ ನುಡಿದಂತೆ ನಡೆಯದಿರುವುದೇ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಎಂದು ವ್ಯಂಗ್ಯವಾಡಿದೆ.












Click it and Unblock the Notifications