ಶಕ್ತಿ ಯೋಜನೆಯಿಂದ NWKRTCಗೆ ಆದಾಯ ಸಂಕಷ್ಟ: ₹65 ಕೋಟಿಗೆ ಕೋರಿ ಸರ್ಕಾರಕ್ಕೆ ಎಂಡಿ ಪತ್ರ
ಬೆಂಗಳೂರು, ಆಗಸ್ಟ್ 03: ಕರ್ನಾಟಕ ರಾಜ್ಯದಲ್ಲಿ ಜಾರಿಯಾಗಿರುವ ಶಕ್ತಿ ಯೋಜನೆ (Shakti Scheme) ನಂತರ ಮಹಿಳಾಮಣಿಗಳು ಖಷಿಯಾದರೆ, ಸಾರಿಗೆ ನೌಕರರು ಮತ್ತು ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆಯೇ? ಎಂಬ ಅನುಮಾನ ಮೂಡುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಹೇಳಿತ್ತು. ಆದರೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಶಕ್ತಿ ಯೋಜನೆ ಜಾರಿಯಾಗಿ ಎರಡು ತಿಂಗಳು ಆಗುವುದರಲ್ಲಿದೆ. ಯೋಜನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಮಹಿಳೆಯರು ನಾಮುಂದು ತಾಮುಂದು ಎಂದು ಬಸ್ ಏರಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಭರಿಸಬೇಕಾದ ಕೋಟ್ಯಂತರ ರೂಪಾಯಿ ಇನ್ನೂವರೆಗೆ ಪಾವತಿಯಾಗಿಲ್ಲ.

ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಬಸ್ಗಳಲ್ಲಿ ಆರು ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ ಮತ್ತು ಬಾಗಲಕೋಟೆ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ಮಹಿಳೆಯರು ಓಡಾಡಿದ್ದಾರೆ. ಇದರಿಂದ ಸಂಸ್ಥೆ ಅಂದಾಜು ಖರ್ಚು 60 ಕೋಟಿ ದಾಟಿದ್ದು, ಸದ್ಯ ಆ ವೆಚ್ಚ ಭರಿಸಲು ಸರ್ಕಾರ 65 ಕೋಟಿ ಹಣ ಬಿಡುಗಡೆ ಮಾಡುವಂತೆ ಕೋರಿ NWKRTC ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಭರತ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಟಿವಿ ನೈನ್ ವರದಿ ಮಾಡಿದೆ.
ಯೋಜನೆ ಜಾರಿ ತಿಂಗಳಲ್ಲಿ 66 ಕೋಟಿ ರೂ ಖರ್ಚು
ಯೋಜನೆ ಅನುಷ್ಠಾನಗೊಂಡ ಕಳೆದ ಜೂನ್ 11 ರಿಂದ 30 ರವರೆಗಿನ ಅವಧಿಯಲ್ಲಿ ಈ ನಿಗಮದ ಬಸ್ಗಳಲ್ಲಿ 2.5 ಕೋಟಿ ಮಹಿಳೆಯರು ಉಚಿತ ಸಂಚಾರ ನಡೆಸಿದ್ದಾರೆ. ಇದಕ್ಕಾಗಿ ಅಂದಾಜು 66 ಕೋಟಿ ರೂಪಾಯಿ ಖರ್ಚಾಗಿದೆ. ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಗಮವು ಚಾಲಕ, ನಿರ್ವಾಹಕ, ಆಡಳಿತ ಸೇರಿ ಸಾರಿವಾರು ಮಂದಿ (21,641) ಸಿಬ್ಬಂದಿಯನ್ನು ಹೊಂದಿದೆ. ಅವರಿಗೆಲ್ಲ ಮಾಸಿಕ 48 ಕೋಟಿ ರೂಪಾಯಿ ವೇತನ ನೀಡಬೇಕಿದೆ. ಅದಕ್ಕಾಗಿ ಹಣದ ಅಗತ್ಯತೆ ಇದ್ದು, 65 ಕೋಟಿ ನೀಡುವಂತೆ ಎಂಡಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಯೋಜನೆ ಜಾರಿಗೂ ಮುನ್ನ ಅಂದರೆ ಜೂನ್ 1ರಿಂದ 10ರವರೆಗಿನ ಕೇವಲ ಹತ್ತು ದಿನಗಳ ಅವಧಿಯಲ್ಲಿ ಎಲ್ಲರೂ ಟಿಕೆಟ್ ಗೆ ಹಣ ನೀಡುತ್ತಿದ್ದು, 47 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಜೂನ್ 11 ರಿಂದ 30 ರ ಅವಧಿಯಲ್ಲಿ ಬರೀ 23 ಕೋಟಿ ರೂ. ಸಂಗ್ರಹವಾಗಿದೆ. ಕಾರಣ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡಲಾಗಿದೆ. ಪುರುಷರಂತೆ ಮಹಿಳೆಯರು ಸಹ ಹಣ ಕೊಟ್ಟು ಪ್ರಯಾಣಿಸಿದ್ದರೆ, ಪ್ರಯಾಣವೊಂದರಿಂದಲೇ ಈ ಅವಧಿಯಲ್ಲಿ ಸುಮಾರು 70 ಕೋಟಿ ಗೂ ಹೆಚ್ಚು ಆದಾಯ ಬರುತ್ತಿತ್ತು ಎಂದು ಅಂದಾಜಿಸಲಾಗಿದೆ.

ಹಣ ಬಿಡುಗಡೆ ಆಗದಿದ್ದರೆ ವೇತನ ಪಾವತಿಗೆ ಕಷ್ಟ
ಸದ್ಯ ಈ ನಿಗಮದ ಸಿಬ್ಬಂದಿಗೆ ಜೂನ್ ತಿಂಗಳ ವೇತನ ನೀಡಲಾಗಿದ್ದು, ಜುಲೈ ತಿಂಗಳ ಸಂಬಳ ನೀಡುವುದು ಬಾಕಿ ಇದೆ. ಸರ್ಕಾರದಿಂದ ನಿರೀಕ್ಷಿತ ಹಣ ಬಿಡುಗಡೆ ಆಗದಿದ್ದರೆ, ವೇತನ ಪಾವತಿ ಕಷ್ಟವಾಗಲಿದೆ ಎಂಬುದನ್ನು ಭರತ್ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರ ಆದಷ್ಟು ಶೀಘ್ರವೇ ಹಣ ಬಿಡುಗಡೆಗೆ ಮಾಡುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯ ಸಾರಿಗೆ ನಿಗಮಗಳ ನೌಕರರಿಗೆ ಅರ್ಧ ವೇತನ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಕೆಎಸ್ಆರ್ಟಿಸಿ ನಿಗವು ತನ್ನ ನೌಕರರಿಗೆ ಎಂದಿನಂತೆ ಜುಲೈ ತಿಂಗಳ ವೇತನ ಪಾವತಿಸಿರುವ ಬಗ್ಗೆ ಮಾಹಿತಿ ನೀಡಿತ್ತು. ಅದರ ಬೆನ್ನಲ್ಲೆ ಎನ್ಡಬ್ಲು ಕೆಆರ್ಟಿಸಿ ಎಂಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.












Click it and Unblock the Notifications