ಫ್ರೀ ಬಸ್ ಹತ್ತುವ ಮಹಿಳೆಯರ ನಿಂದನೆ: ಸಾರಿಗೆ ಸಿಬ್ಬಂದಿಗೆ ಸಚಿವರ ಖಡಕ್ ವಾರ್ನಿಂಗ್
ಬೆಂಗಳೂರು, ಆಗಸ್ಟ್ 10: ಶಕ್ತಿ ಯೋಜನೆ ಫಲಾನುಭವಿ ಆದ ಮಹಿಳೆಯರ ಸಂಚಾರ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಜೊತೆಗೆ ಮಹಿಳೆಯರ ನಿಂದನೆ ಕೂಡ. ಮಹಿಳೆಯರನ್ನು ಕಂಡರೆ ಸಾಕು ಕೆಲ ಸರ್ಕಾರಿ ಬಸ್ ಚಾಲಕರು ನಿರ್ವಾಹಕರು ಆ ಸ್ಥಳಗಳಲ್ಲಿ ಸ್ಟಾಪ್ ನೀಡುತ್ತಿಲ್ಲ. ಮಹಿಳೆಯರನ್ನು ನೋಡುತ್ತಿದ್ದ ಹಾಗೆಯೇ ಬಸ್ ವೇಗ ಜಾಸ್ತಿ ಮಾಡುತ್ತಾರೆ.
ಇನ್ನು ಕೆಲವು ಸಾರಿಗೆ ಬಸ್ ಸಿಬ್ಬಂದಿ ಮಹಿಳೆಯರು ಬಸ್ ಹತ್ತಿದರೆ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸೋದು ಈ ತರಹದ ಘಟನೆಗಳು ಶಕ್ತಿ ಯೋಜನೆ ಜಾರಿಯಿಂದ ಹೆಚ್ಚಾಗುತ್ತಿದೆ. ಸದ್ಯ ಈ ಎಲ್ಲಾ ಘಟನೆ ಮರುಕಳಿಸದ ರೀತಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖಡಕ್ ಸೂಚನೆ ಕೊಟ್ಟಿದ್ದಾರೆ.

ಡ್ರೈವರ್ ಹಾಗೂ ಕಂಡೆಕ್ಟರ್ ಎಚ್ಚರ ಎಚ್ಚರ.. ನಿಮಗಿದೋ ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಗಂಟೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದು, ಇನ್ನುಮುಂದೆ ಮಹಿಳೆಯರಿಗೆ ಅಗೌರವ ಸೂಚಿಸಿದರೆ ಮನೆಗೆ ಹೋಗೋದು ಗ್ಯಾರಂಟಿ ಎಂದಿದ್ದಾರೆ.
ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಅವಮಾನ ಮಾಡಿದರೆ, ಅಗೌರವ ಸೂಚಿಸಿದರೆ ಕಂಡಕ್ಟರ್ ಹಾಗೂ ಡ್ರೈವರ್ ಡಿಸ್ಮಿಸ್ ಮಾಡುವ ಅಧಿಕಾರವನ್ನು ಆಯಾ ಸ್ಥಳೀಯ ಅಧಿಕಾರಿಗಳಿಗೆ ಸಚಿವ ರಾಮಲಿಂಗರೆಡ್ಡಿ ಕೊಟ್ಟಿದ್ದಾರೆ. ಕೆಲ ಬಸ್ ಡ್ರೈವರ್ ಮತ್ತೆ ಕಂಡೆಕ್ಟರ್ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ನಿಂದಕರಿಗೆ ಪಾಠ ಕಲಿಸಲು ಸಾರಿಗೆ ಇಲಾಖೆ ಫಸ್ಟ್ ಲೈನ್ ಅಲ್ಲಿ ನಿಲ್ಲುತ್ತದೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಮಹಿಳೆಯರಿಗೆ ಅಗೌರವ ಆಗುವ ಒಂದು ಪ್ರಸಂಗ ಕಂಡು ಬಂದರೂ ಆ ಕೂಡಲೇ ಸಂಬಂಧ ಪಟ್ಟ ಚಾಲಕ ನಿರ್ವಾಹಕರಿಗೆ ಮೊದಲು ಒಂದು ವಾರ್ನಿಂಗ್ ಕೊಡಬೇಕು. ಎಚ್ಚರಿಕೆಗೆ ಬಗ್ಗದೇ ಮತ್ತದೇ ಕೆಲಸ ರಿಪೀಟ್ ಮಾಡಿದರೆ ಗೇಟ್ ಪಾಸ್ ಗ್ಯಾರಂಟಿ. ಅನುಚಿತವಾಗಿ ವರ್ತಿಸುವ ಚಾಲಕ, ನಿರ್ವಾಹಕರಿಗೆ ಸಾರಿಗೆ ವಿಶೇಷ ಸೂಚನೆ ಕೊಟ್ಟಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯಿಂದ ನಾಲ್ಕು ನಿಗಮದ ಅಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟಿದ್ದಾರೆ.
ಮಹಿಳೆಯರಿಗೆ ಅನುಕೂಲ ಆಗಲಿ ಅಂತ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣವನ್ನು ಸಾರಿಗೆ ಇಲಾಖೆ ಕಲ್ಪಿಸಿ ಕೊಟ್ಟಿತ್ತು. ಜೂನ್ 11ರಿಂದ ಕೋಟ್ಯಂತರ ಮಹಿಳೆಯರು ಈ ಯೋಜನೆಯ ಫಲಾನುಭವಿ ಆಗಿದ್ದರು. ಆದರೆ ಬಹುತೇಕರು ತಮಾಗಾಗುವ ಅವಮಾನದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸಾರಿಗೆ ಸಚಿವರು ಈ ಮಹತ್ವದ ನಿರ್ಣಯ ಕೈ ಗೊಂಡಿದ್ದಾರೆ. ಇನ್ನು ಮುಂದೆಯಾದರೂ ಈ ತರಹದ ಪ್ರಕರಣ ಕಡಿಮೆ ಆಗುತ್ತಾ ಕಾದು ನೋಡಬೇಕಿದೆ.












Click it and Unblock the Notifications