Shakti scheme: ಮೈಸೂರು ವಿಭಾಗದಲ್ಲಿ ಪ್ರತಿ ದಿನ 4 ಲಕ್ಷ ಮಹಿಳೆಯರ ಬಸ್ ಪ್ರಯಾಣ- ಹಬ್ಬಗಳಲ್ಲಿ ಐದು ಲಕ್ಷ ತಲುಪುವ ಸಾಧ್ಯತೆ
ಮೈಸೂರು, ಜುಲೈ 15: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯು ರಾಜ್ಯದಲ್ಲಿ ಭಾರೀ ಜನಮನ್ನಣೆ ಗಳಿಸಿದೆ. ಅದರಲ್ಲೂ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಮೈಸೂರು ವಿಭಾಗದಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಮೈಸೂರು ಕೆಎಸ್ಆರ್ಟಿಸಿ ವಿಭಾಗದ ಬಸ್ಗಳಲ್ಲಿ ದೈನಂದಿನ ಪ್ರಯಾಣಿಕರ ಹೊರೆ ಬಹುತೇಕ 4 ಲಕ್ಷ ತಲುಪಿದೆ. ಮುಂದಿನ ಹಬ್ಬ ಹಾಗೂ ಮದುವೆ ದಿನಗಳಲ್ಲಿ ಈ ಸಂಖ್ಯೆ ದಿನಕ್ಕೆ ಐದು ಲಕ್ಷ ತಲುಪಬಹುದು ಎಂದು ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ.

ವಿಭಾಗವು ಲಭ್ಯವಿರುವ ಸಂಪನ್ಮೂಲಗಳೊಂದಿಗೆ ವಿಸ್ತೃತ ಸೇವೆಗಳನ್ನು ನಿರ್ವಹಿಸುತ್ತಿದೆ. ವಿಪರೀತ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಟ್ರಿಪ್ಗಳನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ 100 ಕ್ಕೂ ಹೆಚ್ಚು ಚಾಲಕರನ್ನು ಹೊರಗುತ್ತಿಗೆಗೆ ಪಡೆದಿದೆ. ಇದಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಪ್ರಯಾಣ ನಡೆಸುವ ಮೂಲಕ (ಶೂನ್ಯ ದರದ ಟಿಕೆಟ್ಗಳನ್ನು ನೀಡುವುದು) ಮೈಸೂರು ವಿಭಾಗವು ಜೂನ್ನಲ್ಲಿ ಗಳಿಸಿದ ಆದಾಯ ಸುಮಾರು ₹ 13.48 ಕೋಟಿ ಆಗಿದೆ. ಸರ್ಕಾರದಿಂದ ಮರುಪಾವತಿಗಾಗಿ ಕೋರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿ ಮಹಿಳೆಯರ ಪ್ರಯಾಣಕ್ಕೆ ಶೂನ್ಯ ದರದಲ್ಲಿ ಟಿಕೆಟ್ ನೀಡಲಾಗುತ್ತದೆ. ಇದರ ವೆಚ್ಚವನ್ನು ಸರ್ಕಾರ ಭರಿಸಲಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಘೋಷಣೆ ಮಾಡಲಾದ ಮೊದಲ ಯೋಜನೆ ಇದಾಗಿದೆ. ಕಾಂಗ್ರೆಸ್ ಸರ್ಕಾರವು ಐದು ಉಚಿತ ಯೋಜನೆಗಳನ್ನು ನೀಡುವುದಾಗಿ ಚುನಾವಣೆಗೂ ಮುನ್ನ ಘೋಷಿಸಿದೆ.
ಮೈಸೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಬಿ.ಶ್ರೀನಿವಾಸ್ 'ದಿ ಹಿಂದೂ' ಪತ್ರಿಕೆಗೆ ಮಾತನಾಡಿದ್ದಾರೆ. ಶಕ್ತಿ ಯೋಜನೆ ಘೋಷಣೆಯಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ದೈನಂದಿನ ಪ್ರಯಾಣಿಕರ ಹೊರೆ ಸುಮಾರು 4 ಲಕ್ಷವನ್ನು ಮುಟ್ಟಿದೆ. ಈ ಸಂಖ್ಯೆಯು ಹಬ್ಬದ ಋತುವಿನಲ್ಲಿ ಹೆಚ್ಚಾಗಬಹುದು. ಕೆಎಸ್ಆರ್ಟಿಸಿ ಹೆಚ್ಚುವರಿ ಟ್ರಿಪ್ಗಳನ್ನು ನಿರ್ವಹಿಸಲು ಗುತ್ತಿಗೆಯ ಮೇಲೆ ಚಾಲಕರನ್ನು ನೇಮಿಸಿಕೊಳ್ಳುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಸಜ್ಜಾಗಿದೆ' ಎಂದು ತಿಳಿಸಿದ್ದಾರೆ.
'105 ಹೊರಗುತ್ತಿಗೆ ಚಾಲಕರು ತರಬೇತಿಯಲ್ಲಿದ್ದಾರೆ. ಅವರು ಮುಂದಿನ ದಿನಗಳಲ್ಲಿ ವಿಭಾಗಕ್ಕೆ ಸೇರಿಕೊಳ್ಳಲಿದ್ದಾರೆ' ಎಂದು ಅವರು ಹೇಳಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ನಾವು ಗಮನಿಸಿದ ಹಾಗೇ ಮಹಿಳೆಯರು ದೇವಾಲಯಗಳಿಗ ಭೇಟಿ ನೀಡುವುದು ಹೆಚ್ಚಾಗಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಆಷಾಢದ ಪ್ರಯುಕ್ತ ದೇವಸ್ಥಾನಗಳಿಗೆ ಪ್ರಯಾಣಿಕರು ಭೇಟಿ ನೀಡುವುದರಿಂದ ಪ್ರಯಾಣಿಕರ ಹೊರೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
'ಶ್ರಾವಣ ಋತುವಿನಲ್ಲಿ, ಹೊರೆ ಇನ್ನಷ್ಟು ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಕಳೆದ ತಿಂಗಳು ಶಕ್ತಿ ಘೋಷಣೆಯಾದಾಗ, ದೈನಂದಿನ ಹೊರೆ 1.5 ಲಕ್ಷದಿಂದ 2 ಲಕ್ಷದಷ್ಟಿತ್ತು. ಆ ನಂತರ 2 ಲಕ್ಷದಿಂದ 2.5 ಲಕ್ಷಕ್ಕೆ ತಲುಪಿತು. ಆ ನಂತರ 3 ರಿಂದ 3.75 ಲಕ್ಷಕ್ಕೆ ಏರಿತು' ಎಂದು ಮಾಹಿತಿ ನೀಡಿದ್ದಾರೆ.
ಸುಗಮ ಕಾರ್ಯಾಚರಣೆಗಾಗಿ ಕೆಎಸ್ಆರ್ಟಿಸಿ ಸಿಬ್ಬಂದಿಯನ್ನು ವಿಭಾಗದಾದ್ಯಂತ ನಿಯೋಜಿಸಲಾಗಿದೆ. ಬಸ್ಗಳು ತುಂಬಿದ ಸಂದರ್ಭದಲ್ಲಿ ಯಾವುದೇ ಪ್ರಯಾಣಿಕರಿಗೆ ಸೇವೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications