ಐಎಂಎ ಹಗರಣದ ತನಿಖೆ ಎಸ್ಎಫ್ಒ ಹೆಗಲಿಗೆ?
ಬೆಂಗಳೂರು, ಆಗಸ್ಟ್ 11 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆಯನ್ನು ಎಸ್ಎಫ್ಐಒ ನಡೆಸುವ ಸಾಧ್ಯತೆ ಇದೆ. ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳು ಈ ಹಗರಣದಲ್ಲಿ ಭಾಗಿಯಾಗಿರುವ ಅನುಮಾನವಿದೆ.
ಕೇಂದ್ರ ಕಾರ್ಪೊರೇಟ್ ಸಚಿವಾಲಯದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ಎಫ್ಐಒ) ಐಎಂಎ ಹಗರಣದ ತನಿಖೆ ನಡೆಸುವ ಸಾಧ್ಯತೆ ಇದೆ. ಮನ್ಸೂರ್ ಖಾನ್ ಒಡೆತನದ ಐಎಂಎ ಸಂಸ್ಥೆಯ ಹಗರಣದ ಬಗ್ಗೆ ಎಸ್ಐಟಿ ತನಿಖೆ ಸದ್ಯ ನಡೆಯುತ್ತಿದೆ.
ರಿಜಿಸ್ಟ್ರಾರ್ ಆಫ್ ಕಂಪನೀಸ್ (ಆರ್ಒಸಿ) ಬೆಂಗಳೂರು ಕಚೇರಿ ಎಸ್ಎಫ್ಐಒ ತನಿಖೆಗೆ ಶಿಫಾರಸು ಮಾಡಿದೆ. ಹಗರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್ ಸದ್ಯ ಎಸ್ಐಟಿ ವಶದಲ್ಲಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ.

ಐಎಂಎ ಹಗರಣದ ಬಗ್ಗೆ ಎಸ್ಐಟಿ, ಇಡಿ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆದರೆ, ಎಸ್ಎಫ್ಐಒ ತನಿಖೆ ಆರಂಭವಾದರೆ ಉಳಿದ ಎಲ್ಲಾ ತನಿಖಾ ಸಂಸ್ಥೆಗಳು ತನಿಖೆಯನ್ನು ನಿಲ್ಲಿಸಬೇಕಾಗುತ್ತದೆ ಎಂಬ ನಿಯಮವಿದೆ. ಆದ್ದರಿಂದ, ಎಸ್ಐಟಿ ತನಿಖೆ ಮುಂದುವರೆಯುವ ಬಗ್ಗೆ ಪ್ರಶ್ನೆ ಎದುರಾಗಿದೆ.
ಕರ್ನಾಟಕ ಸರ್ಕಾರ ಐಎಂಎ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಜಾರಿ ನಿರ್ದೇಶನಾಲಯ ಸಹ ಪ್ರಕರಣದ ತನಿಖೆ ನಡೆಸುತ್ತಿದೆ. ಈಗ ಎಸ್ಎಫ್ಐಒ ತನಿಖೆ ಆರಂಭವಾಗುವ ನಿರೀಕ್ಷೆ ಇದೆ.
ಐಎಂಎ ಹಗರಣದ ರೂವಾರಿ ಮನ್ಸೂರ್ ಖಾನ್ ದುಬೈನಿಂದ ಜುಲೈ 19ರಂದು ಭಾರತಕ್ಕೆ ವಾಪಸ್ ಆಗಿದ್ದಾನೆ. ಇಡಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಪ್ರಸ್ತುತ ಆಗಸ್ಟ್ 14ರ ತನಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications