ಎರಡು ಬಾರಿ ಸಚಿವರಾದವರಿಗೆ ಇಲ್ಲವೇ ಸಂಪುಟದಲ್ಲಿ ಸ್ಥಾನ?
ಬೆಂಗಳೂರು, ಜೂನ್ 2: ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದವರಿಗೆ ಮತ್ತೆ ಸಂಪುಟದಲ್ಲಿ ಸ್ಥಾನ ಸಿಗದೆ ಇರುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಆರಕ್ಕಿಂತ ಹೆಚ್ಚು ಬಾರಿ ಗೆದ್ದವರಿಗೂ ಸಚಿವ ಸ್ಥಾನ ನೀಡದೆ ಇರಲು ಉದ್ದೇಶಿಸಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ಹೊಸ ಮುಖಗಳಿಗೆ ಮಣೆ ಹಾಕುವ ಉದ್ದೇಶದಿಂದ ಕಾಂಗ್ರೆಸ್ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಸಣ್ಣ ಪಕ್ಷದ ಮಾತು ಕೇಳಬೇಕಿರುವುದು ನೋವು ತಂದಿದೆ: ಪರಮೇಶ್ವರ್
ಈ ತೀರ್ಮಾನ ಪ್ರಭಾವಿ ಹುದ್ದೆಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಉತ್ಸಾಹದಲ್ಲಿರುವ ಪಕ್ಷದ ಅನೇಕ ಹಿರಿಯ ನಾಯಕರಿಗೆ ಬೇಸರ ಮೂಡಿಸಿದೆ.
ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದವರಿಗೆ ಈ ಬಾರಿ ಸಚಿವ ಸ್ಥಾನ ನೀಡಬಾರದು ಎಂಬ ಸಲಹೆಗಳು ಶಾಸಕರ ಸಭೆಯಲ್ಲಿ ವ್ಯಕ್ತವಾಗಿದೆ. ಈ ಸಲಹೆಗಳನ್ನು ಹೈಕಮಾಂಡ್ ಮುಂದೆ ಇರಿಸಲಾಗಿದೆ. ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಂಸತ್ ಚುನಾವಣೆಗೆ ಸೀಟು ಹಂಚಿಕೆ ಫೈನಲ್ ಆಗಿಲ್ಲ: ಪರಂ ಸ್ಪಷ್ಟನೆ
ಖಾತೆ ಹಂಚಿಕೆ ಕುರಿತಂತೆ ಈಗಾಗಲೇ ಪಕ್ಷದಲ್ಲಿ ಅಸಮಾಧಾನ ಮೂಡಿದೆ. ಅದನ್ನು ಶಮನಪಡಿಸುವ ಹರಸಾಹಸದಲ್ಲಿರುವ 'ಕೈ' ನಾಯಕರು, ಯಾರಿಗೆ ಯಾವ ಖಾತೆ ನೀಡಬಹುದು ಎಂಬ ಗೊಂದಲ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಆದ್ಯತೆ ನೀಡುವ ವಿಚಾರದಲ್ಲಿಯೂ ಅಸಮಾಧಾನ ಮೂಡಿವೆ.
ಬುಧವಾರ ಸಚಿವ ಸಂಪುಟದ ರಚನೆಗೆ ಮುಹೂರ್ತ ಸಿದ್ಧಪಡಿಸಲಾಗಿದೆ. ಅಷ್ಟರೊಳಗೆ ಈ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸಿಲುಕಿದೆ.
ಒಂದು ವೇಳೆ ಹಿರಿಯರಿಗೆ 'ವಿಶ್ರಾಂತಿ' ನೀಡಿ ಕಿರಿಯರಿಗೆ ಸಚಿವ ಸ್ಥಾನ ನೀಡುವ ಉದ್ದೇಶಕ್ಕೆ ಬದ್ಧವಾದರೆ, ಕಾಂಗ್ರೆಸ್ನ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ಶಾಮನೂರು ಶಿವಶಂಕರಪ್ಪ, ರೋಷನ್ ಬೇಗ್, ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್ ಮುಂತಾದವರಿಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.