ಕಾಂಗ್ರೆಸ್ ಮುಖಂಡರನ್ನು ಬೆಚ್ಚಿಬೀಳಿಸಿದ ಜನಾರ್ಧನ ಪೂಜಾರಿ ವಾಗ್ದಾಳಿ
ಕಾಂಗ್ರೆಸ್ಸಿನ ಹಿರಿಯ ಮುಖಂಡ, ಇಂದಿರಾ ಮತ್ತು ರಾಜೀವ್ ಗಾಂಧಿ ಅವಧಿಯಲ್ಲಿ ಹೈಕಮಾಂಡ್ ಅಂಗಣಕ್ಕೆ ಮುಕ್ತ ಪ್ರವೇಶ ಪಡೆದಿದ್ದ ಜನಾರ್ಧನ ಪೂಜಾರಿ ಮಂಗಳೂರಿನಲ್ಲಿ ಎರಡು ದಿನದ ಹಿಂದೆ ನೀಡಿದ ಹೇಳಿಕೆ, ಈ ತಲೆಮಾರಿನ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವಂತದ್ದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ನೇರಾನೇರ ರಾಜಕಾರಣಿಯಾಗಿರುವ ಪೂಜಾರಿಯವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರನ್ನು ಹೊಗಳಿದ ಉದಾಹರಣೆಗಳು ಕಮ್ಮಿ. ಅದರಲ್ಲೂ ಸಿದ್ದರಾಮಯ್ಯ ಸಿಎಂ ಆದ ಮೇಲಂತೂ, ಪೂಜಾರಿ ವಾಗ್ದಾಳಿಗೆ ಸ್ವಪಕ್ಷಿಯರೇ ಹಲವಾರು ಬಾರಿ ಮುಜುಗರ ಎದುರಿಸಬೇಕಾದಂತಹ ವಿದ್ಯಮಾನಗಳು ಆಗಿವೆ.
ಚುನಾವಣಾ ಹೊತ್ತಲ್ಲಿ ಪೂಜಾರಿ ಕಾಲಿಗೆರಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು
ಚುನಾವಣೆಯ ಈ ಸಂದರ್ಭದಲ್ಲಿ ಹಿರಿಯ ಜೀವ, ಪೂಜಾರಿಯವರ ನಾಲ್ಕು ಮಾತಿನಿಂದ ಪಕ್ಷಕ್ಕೆ ಲಾಭವಾಗಲಿ ಎಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ಮಾತು ಆಕಡೆ ಇರಲಿ, ಅವರ ಮಾತಿನಿಂದ ಪಕ್ಷಕ್ಕಾದ ಡ್ಯಾಮೇಜ್ ಕಂಟ್ರೋಲಿಗೆ ಕಾಂಗ್ರೆಸ್ ಮುಖಂಡರು ಹರಸಾಹಸ ಪಡುವಂತಾಗಿದೆ.
ಎರಡು ದಿನಗಳ ಕೆಳಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊದಮೊದಲು ಕಾಂಗ್ರೆಸ್ ಪರವಾಗಿಯೇ ಮಾತನಾಡಲು ಆರಂಭಿಸಿದ ಪೂಜಾರಿಯವರು, ಆಮೇಲೆ ಅದ್ಯಾಕೋ ರಾಂಗ್ ಆದರು. ಸಿದ್ದರಾಮಯ್ಯನವರು ಉದ್ದಟತನ ಬಿಡದೇ ಇದ್ದರೆ, ಆಗೋದು ನಷ್ಟ ಕಾಂಗ್ರೆಸ್ ಪಕ್ಷಕ್ಕೆ ಎಂದು ಜಾಲಾಡಿಸಲು ಆರಂಭಿಸಿದ ಪೂಜಾರಿಯವರ ವಾಗ್ದಾಳಿ, ಸ್ವಪಕ್ಷೀಯರ ಮೇಲೆ ಮುಂದುವರಿಯುತ್ತಲೇ ಹೋಯಿತು..
ಈಗಲೂ ಹೇಳ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ: ಪೂಜಾರಿ
ಈ ಮಧ್ಯೆ, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡರಿಬ್ಬರು, ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಪಕ್ಷದ ಪರವಾಗಿ ಪ್ರಚಾರಕ್ಕೆ ಬಂದಿದ್ದಾರೆಂದು ಎದ್ದು ಹೋದಾಗ, ಪೂಜಾರಿಯವರ ಸಿಟ್ಟು ಮಂಗಳೂರಿನ ಬಿಸಿಲಿಗಿಂತಲೂ ಕಾವು ಪಡೆಯಿತು. ಪೂಜಾರಿಯವರು ಈ ಸಂದರ್ಭದಲ್ಲಿ ಚಿದಂಬರಂ ಬಗ್ಗೆ ನೀಡಿದ ಹೇಳಿಕೆ, ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿತ್ತು.. ಮುಂದೆ ಓದಿ..
ಜನಾರ್ದನ ಪೂಜಾರಿಯವರ ಮಾಧ್ಯಮ ಗೋಷ್ಠಿ
ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಜನಾರ್ದನ ಪೂಜಾರಿಯವರ ಮಾಧ್ಯಮ ಗೋಷ್ಠಿ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ರಮಾನಾಥ್ ರೈ ವಿರುದ್ದ ಪೂಜಾರಿ ಆಕ್ರೋಶ ಹೊರಹಾಕುತ್ತಿದ್ದರು. ಆ ವೇಳೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರೊಬ್ಬರು ಗೋಷ್ಠಿಯ ಮಧ್ಯೆ ಎದ್ದು ಹೋದರು. ಇದರಿಂದ ಪೂಜಾರಿ ಇನ್ನಷ್ಟು ಸಿಟ್ಟಾದರು.
ಬಿಜೆಪಿಯವರು ಚಿದಂಬರಂ ಮಾಡಿದ್ದನ್ನೆಲ್ಲಾ ಬಯಲಿಗೆಳೆಯುತ್ತಾರೆ
ಕಾಂಗ್ರೆಸ್ ಮುಖಂಡರ ವರ್ತನೆ ಖಂಡಿಸಿದ ಪೂಜಾರಿ, ಚಿದಂಬರಂ ಬರ್ತಾರೆ ಅಂತ ಮುಖಂಡರು ಎದ್ದು ಹೋದರು. ಅವರಿವರ ಹಿಂದೆ ಹೋಗುವುದೇ ಸಂಸ್ಕೃತಿಯಾಗಿ ಹೋಗಿದೆ. ಚಿದಂಬರಂ ಮಾಡಿದ್ದನ್ನು ಬಿಜೆಪಿಯವರು ಒಂದು ವೇಳೆ ಹೇಳಿದರೆ ಇಡೀ ಕಾಂಗ್ರೆಸ್ ಸರ್ವನಾಶವಾಗುತ್ತೆ. ನೋಡುತ್ತಾ ಇರಿ.. ಒಂದಲ್ಲಾ ಒಂದು ದಿನ ಬಿಜೆಪಿಯವರು ಚಿದಂಬರಂ ಮಾಡಿದ್ದನ್ನೆಲ್ಲಾ ಬಯಲಿಗೆಳೆಯುತ್ತಾರೆ. ಆ ಚಿದಂಬರಂಗೆ ನಾನು ಯಾರೆಂದು ಗೊತ್ತಿಲ್ಲವೇ, ನಾನು ಅಧಿಕಾರದಲ್ಲಿದ್ದಾಗ ನನ್ನನ್ನು ಹುಡುಕಿಕೊಂಡು ಸರ್ಕ್ಯೂಟ್ ಹೌಸಿಗೆ ಬರಲಿಲ್ಲವೇ? ನೀವ್ಯಾಕೆ ಅವರ ಹಿಂದೆ ಹೋಗಬೇಕು ಎಂದು ಪೂಜಾರಿ ವಾಗ್ದಾಳಿ ನಡೆಸುತ್ತಿದ್ದಾಗ, ಕಾಂಗ್ರೆಸ್ ಮುಖಂಡರು ಪೇಚು ಮುಖಹಾಕಿಕೊಂಡು ಕೂತಿದ್ದರು.
ಕಲ್ಲಡ್ಕ ಶಾಲೆಗೆ ಊಟದ ಅನುದಾನ ರದ್ದು ಪಡಿಸಿದ ರೈ
ಈ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದ ಪೂಜಾರಿ, ಕಲ್ಲಡ್ಕ ಶಾಲೆಗೆ ಮಕ್ಕಳ ಊಟದ ಅನುದಾನ ರದ್ದು ಪಡಿಸಿದ ರಮಾನಾಥ್ ರೈ ವಿರುದ್ದ ವಾಗ್ದಾಳಿ ನಡೆಸಿದರು. ಚಿದಂಬರಂ ಆಗಮಿಸುತ್ತಿದ್ದಂತೆ ನಮ್ಮವರು ಇದ್ದ ಕೆಲಸ ಬಿಟ್ಟು ತೆರಳುತ್ತಾರೆ, ನಮ್ಮ ಮುಖಂಡರಿಗೆಲ್ಲಾ ಇನ್ನೊಬ್ಬರನ್ನು ಮೆಚ್ಚಿಸುವುದೇ ಕೆಲಸ. ನಾನೇನೂ ಕೆಲಸವಿಲ್ಲದೆ ಇಲ್ಲಿ ಕುಳಿತಿದ್ದೇನಾ ಎಂದು ಪೂಜಾರಿ ಗರಂ ಆದರು.
ಐಎನ್ಎಕ್ಸ್ ಮಿಡಿಯಾ ಹಗರಣ, ಶಾರದಾ ಚಿಟ್ ಫಂಡ್
ಚಿದಂಬರಂ ಪುತ್ರನ ಐಎನ್ಎಕ್ಸ್ ಮಿಡಿಯಾ ಹಗರಣ, ಶಾರದಾ ಚಿಟ್ ಫಂಡ್, ಏರ್ಸೆಲ್ ಮ್ಯಾಕ್ಸಿಸ್ ಮುಂತಾದ ಹಗರಣಗಳು ಜೀವಂತವಾಗಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರ, ' ಚಿದಂಬರಂ' ಬಗೆಗಿನ ಹೇಳಿಕೆ ಪಕ್ಷದ ಮುಖಂಡರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.
ಸಿಎಂ ಅಹಂಕಾರ ಬಿಟ್ಟರೆ ಉಳಿತಾರೆ, ಇಲ್ಲಾಂದ್ರೆ ಸೋಲುತ್ತಾರೆ
ಮೊದಲು ಕಾಂಗ್ರೆಸ್ ಪರವಾಗಿಯೇ ಮಾತನಾಡಿದ ಜನಾರ್ದನ ಪೂಜಾರಿ ನಂತರ ಆಗಿದ್ದು ಮಾತ್ರ ರೆಬೆಲ್. ಒಟ್ಟಿನಲ್ಲಿ ಜನಾರ್ದನ ಪೂಜಾರಿಯಿಂದ ಹೊಗಳಿಸಿಕೊಂಡು ಮತಗಳಿಸುವ ಯೋಚನೆಯಲ್ಲಿದ್ದ ಕಾಂಗ್ರೆಸ್ ಪ್ಲಾನ್ ಉಲ್ಟಾ ಆಗಿದೆ. ಸಿಎಂ ಅಹಂಕಾರ ಬಿಟ್ಟರೆ ಉಳಿತಾರೆ, ಇಲ್ಲಾಂದ್ರೆ ಸೋಲುತ್ತಾರೆ ಅನ್ನುವುದನ್ನು ಮತ್ತೆಮತ್ತೆ ಜನಾರ್ಧನ ಪೂಜಾರಿ ಹೇಳಿದ್ದಾರೆ.