ಕರ್ನಾಟಕದ ಎಲ್ಲ ಶಾಸಕರಿಗೆ ಸಾಮೂಹಿಕ ಕೋವಿಡ್ ಪರೀಕ್ಷೆ?
ಬೆಂಗಳೂರು, ಆ. 29: ಇದೇ ಸೆಪ್ಟೆಂಬರ್ 21ರಿಂದ ರಾಜ್ಯದ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಒಂದೆಡೆ ಇನ್ನೂ ಕೋವಿಡ್-19 ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮತ್ತೊಂದೆಡೆ ಅಧಿವೇಶನ ನಡೆಸಿ ಬಜೆಟ್ಗೆ ಅನುಮೋದನೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ ಕೊರೊನಾ ಆತಂಕದ ಮಧ್ಯೆ ವಿಧಾನ ಮಂಡಳ ಅಧಿವೇಶನ ನಡೆಯಲೇಬೇಕಾಗಿದೆ, ಮುಂಜಾಗ್ರತಾ ಕ್ರಮವಾಗಿ ಶಾಸಕರಿಗೆ ಸಾಮೂಹಿಕ ಕೋವಿಡ್ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಬಳಿಕವೇ ಶಾಸಕರು ಕಲಾಪದಲ್ಲಿ ಭಾಗವಹಿಸಬೇಕು. ಅಧಿವೇಶನದ ಆರಂಭಕ್ಕೂ ಮೊದಲು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸಾಮೂಹಿಕವಾಗಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲು ವಿಧಾನಸಭೆ ಸಚಿವಾಲಯ ಚಿಂತನೆ ನಡೆಸಿದೆ.
ಎಲ್ಲ ಶಾಸಕರಿಗೆ ಕೋವಿಡ್ ಟೆಸ್ಟ್ ಬಗ್ಗೆ ಸದ್ಯದಲ್ಲೇ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ನಿರ್ಧಾರ ತಿಳಿಸಲಿದ್ದಾರೆ. ಈ ಬಗ್ಗೆ ಮುಂದಿನ ವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಪೀಕರ್ ಕಾಗೇರಿ ಅವರು ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಪಂಜಾಬ್ ಅಧಿವೇಶನದ ಸಂದರ್ಭದಲ್ಲಿ ನಡೆದಿರುವ ಪ್ರಸಂಗದಿಂದ ರಾಜ್ಯ ಬಿಜೆಪಿ ಸರ್ಕಾರ ಆತಂಕದಲ್ಲಿದೆ. ಅಲ್ಲಿ ಅಧಿವೇಶನ ಶುರುವಾದ ಬಳಿಕ 23 ಶಾಸಕರಲ್ಲಿ ಸೋಂಕು ಪತ್ತೆಯಾಗಿತ್ತು. ಆದ್ದರಿಂದ ಪಂಜಾಬ್ನಲ್ಲೂ ಎಲ್ಲ ಶಾಸಕರಿಗೂ ಸಾಮೂಹಿಕ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅನಗತ್ಯ ಅಪಾಯ ಬೇಡ ಎಂಬ ಆಲೋಚನೆಯಲ್ಲಿ, ಸ್ಪೀಕರ್ ಕಾಗೇರಿ ಅವರಿದ್ದಾರೆ ಎನ್ನಲಾಗಿದೆ. ಎಲ್ಲ ರೀತಿಯ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಅಧಿವೇಶನ ನಡೆಸಲು ನಿರ್ಧಾರ ಮಾಡಲಾಗಿದೆ.












Click it and Unblock the Notifications