ಆಗಸ್ಟ್ 23 ರಿಂದ ಹೈಸ್ಕೂಲ್ ಓಪನ್: ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ
ಬೆಂಗಳೂರು, ಆ. 16: ಕೊರೊನಾ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಾಲೆಗಳು ಒಂದೂವರೆ ವರ್ಷದ ಬಳಿಕ ಇದೀಗ ಮೊದಲ ಹಂತದಲ್ಲಿ ಭೌತಿಕ ತರಗತಿಗಳನ್ನು ಆ. 23 ರಿಂದ ಪ್ರಾರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ.
ರಾಜ್ಯದಲ್ಲಿ ಆ. 23 ರಿಂದ 9 ನೇ ತರಗತಿಯಿಂದ 12 ತರಗತಿ ವರೆಗೂ ಭೌತಿಕ ತರಗತಿ ಪ್ರಾರಂಭಿಸಬಹುದು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಗಿದೆ. ಶಾಲೆಗೆ ಬರುವ ಮಕ್ಕಳು ಏನು ಮಾಡಬೇಕು. ಶಾಲಾ ಆಡಳಿತ ಮಂಡಳಿ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
2020 ಮಾರ್ಚ್ ನಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆದಿಲ್ಲ. ವಿದ್ಯಾಗಮ ಎಂಬ ಯೋಜನೆ ಅಡಿ ಅವಕಾಶ ಕೊಟ್ಟರು ಬಹುತೇಕ ಶಾಲೆಗಳು ಆನ್ಲೈನ್ ಹಾಗೂ ವಿದ್ಯಾಗಮ ಎರಡನ್ನೂ ನಿಭಾಯಿಸಲಾಗದೇ ಆನ್ಲೈನ್ ಮೊರೆ ಹೋದವು. ಆನ್ ಲೈನ್ ಶಿಕ್ಷಣದಿಂದ ಶಾಲಾ ಶುಲ್ಕ ವಿವಾದ ಭುಗಿಲೆದ್ದಿತು. ಭೌತಿಕ ತರಗತಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದರು.
ಮಕ್ಕಳು ಶಿಕ್ಷಣ ವಂಚಿತ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಕಡ್ಡಾಯವಾಗಿದ ದಾಖಲಾತಿ ಮಾಡಿಸಬೇಕು. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ತಾಕೀತು ಮಾಡಿತು. ಇದರ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕು ನಡುವೆ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡುವಲ್ಲಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಯಶಸ್ವಿಯಾಗಿದ್ದರು. ಫಲಿತಾಂಶವನ್ನು ಇತ್ತೀಚೆಗಷ್ಟೇ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಬಿಡುಗಡೆ ಮಾಡಿದರು.

ಶಾಲೆ ಆರಂಭದ ಬಗ್ಗೆ ಗೊಂದಲ
ರಾಜ್ಯದಲ್ಲಿ ಈಗಾಗಲೇ ಮೂರನೆ ಅಲೆ ಶುರುವಾಗಿದೆ. ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಸಂಗತಿ ಪ್ರಸ್ತಾಪ ವಾಗುತ್ತಿದ್ದಂತೆ ರಾಜ್ಯದಲ್ಲಿ ಭೌತಿಕ ತರಗತಿ ಪ್ರಾರಂಭ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರ ಸಮಿತಿ ಸಭೆ ಕರೆದು ಚರ್ಚೆ ನಡೆಸಿದ್ದರು. ಆ. 23 ರಿಂದ ಹಂತ ಹಂತವಾಗಿ ಶಾಲೆಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದರು. ನೂತನ ಸಿಎಂ ಹೇಳಿಕೆಯಂತೆ ಇದೀಗ ಶಿಕ್ಷಣ ಇಲಾಖೆ ಮೊದಲ ಹಂತದಲ್ಲಿ ನಾಲ್ಕು ತರಗತಿಗಳಿಗೆ ಬೌತಿಕ ತರಗತಿ ನಡೆಸಲು ಅನುಮತಿ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಹಾಗೂ ಮಕ್ಕಳು ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಇನ್ನು ಕೊರೊನಾ ಪಾಸಿಟಿವಿಟಿ ದರ ಶೇ. 2 ಕ್ಕಿಂತಲೂ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಶಾಲಾ ಆಡಳಿತ ಮಂಡಳಿ ಏನು ಮಾಡಬೇಕು
ರಾಜ್ಯದಲ್ಲಿ ಪಿಯು ಕಾಲೇಜುಗಳು ಹಾಗೂ ಪ್ರೌಢ ಶಾಲೆಗಳು ಮೊದಲು ಶಾಲೆಗಳನ್ನು ಸ್ವಚ್ಚಗೊಳಿಸಬೇಕು. ಶಾಲೆಯ ಆವರಣವನ್ನು ಸ್ಯಾನಿಟೈಸ್ ಮಾಡಬೇಕು. ಬಿಸಿ ನೀರಿನ ಕುಡಿಯುವ ಸೌಲಭ್ಯ ಮಾಡಬೇಕು. ಶಾಲೆಯ ಶೌಚಾಲಯವನ್ನು ಶುಚಿಗೊಳಿಸಿ ಅನುಕೂಲ ಮಾಡುವ ಜತೆಗೆ ಪದೇ ಪದೇ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಬೇಕು. ಶಾಲೆಯ ಕೊಠಡಿ, ಅಡುಗೆ ದಾಸ್ತಾನು ಮತ್ತು ಎಲ್ಲಾ ಕೊಠಡಿಗಳನ್ನು ಸಾನಿಟೈಸ್ ಮಾಡಿ ಶುದ್ಧವಾಗಿಟ್ಟುಕೊಳ್ಳಬೇಕು. ಬೆಳಗಿನ ಅವಧಿಯಲ್ಲಿ ಮಾತ್ರ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ. ಪರ್ಯಾಯವಾಗಿ ಆನ್ಲೈನ್ ಶಿಕ್ಷಣಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಮಾಡಿದೆ.

ಶಾಲೆ ತೆರೆಯುವ ಅವಧಿ
ರಾಜ್ಯದಲ್ಲಿ ಮೊದಲ ಹಂತದಲ್ಲಿ ಪ್ರೌಢ ಶಾಲೆಗಳನ್ನು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆಗೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೂ ಈ ಅವಧಿಯಲ್ಲಿ ತರಗತಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಶನಿವಾರ 10 ಗಂಟೆಯಿಂದ 12 ಗಂಟೆ ವರೆಗೂ ಭೌತಿಕ ತರಗತಿ ಮಾಡಲು ಸೂಚಿಸಲಾಗಿದೆ. ಒಂದು ಕೊಠಡಿಯಲ್ಲಿ 20 ಕ್ಕಿಂತಲೂ ಹೆಚ್ಚು ಮಕ್ಕಳನ್ನು ಕೂರಿಸುವಂತಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊರತು ಪಡಿಸಿ ಶಾಲಾ ಆವರಣಕ್ಕೆ ಇತರೆ ಪೋಷಕರ ಪ್ರವೇಶ ನಿರ್ಬಂಧೀಸಬೇಕು.

ಶಾಲಾ ಮಕ್ಕಳು ಏನು ಮಾಡಬೇಕು?
ಇನ್ನು ಶಾಲೆಗೆ ಬರುವ 8 ಮತ್ತು 9 ನೇ ತರಗತಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಪದೇ ಪದೇ ಸೋಪಿನಿಂದ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಕ್ಕ ಪಕ್ಕದಲ್ಲಿ ಕೂತು ಊಟ ಸೇವಿಸಬಾರದು. ಶಾಲೆಯಲ್ಲಿ ಹಾಗೂ ಓಡಾಡುವಾಗಲೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಮನೆಯಿಂದಲೇ ಆಹಾರ ಮತ್ತು ನೀರನ್ನು ವಿದ್ಯಾರ್ಥಿಗಳೇ ತರಬೇಕು. ನೀರನ್ನು ಬೇರೆಯ ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳಬಾರದು. ವಿದ್ಯಾರ್ಥಿಗಳು ಕೊರೊನಾ ನೆಗಟೀವ್ ವರದಿ ತರಬೇಕು. ಹೊರಗಿನಿಂದ ಬರುವ ಮಕ್ಕಳ ಜತೆ ಬೆರೆಯಬಾರದು. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಉಗುಳಬಾರದು. ಯೋಗ, ವ್ಯಾಯಾಮ, ಹಾಗೂ ಕ್ರೀಡಾ ಚಟುವಟಿಕೆ ನಿರಂತರವಾಗಿ ಮಾಡಬೇಕು. ವಿದ್ಯಾರ್ಥಿಗಳ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಮಾಡಿಕೊಡಬೇಕು.
Recommended Video

ಶಿಕ್ಷಕರು ಏನು ಮಾಡಬೇಕು?
ಭೌತಿಕ ತರಗತಿ ಆರಂಭ ಹಿನ್ನೆಲೆಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಒಂದು ಡೋಸ್ ಲಸಿಕೆ ಪಡೆದುಕೊಂಡಿರಬೇಕು. ವಿದ್ಯಾರ್ಥಿಗಳು ಆವರಣದಲ್ಲಿ ಬೆರೆಯದಂತೆ ನೋಡಿಕೊಳ್ಳಬೇಕು. ಶಾಲಾ ಕೊಠಡಿಗಳನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಪೆನ್ ಪುಸ್ತಕ, ಊಟ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಾಪಾಡಬೇಕು.












Click it and Unblock the Notifications