ರಾಜ್ಯದಲ್ಲಿ ಶಾಲೆ ಪ್ರಾರಂಭ ದಿನಾಂಕ ಮುಂದೂಡಿಕೆಗೆ ಹುನ್ನಾರ
ಬೆಂಗಳೂರು, ಮೇ. 06: ಕೋವಿಡ್ನಿಂದ ಎರಡು ವರ್ಷ ಮಕ್ಕಳಿಗೆ ಸೂಕ್ತ ಪಾಠವಿಲ್ಲದೇ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮೇ. 16 ರಂದೇ ರಾಜ್ಯದಲ್ಲಿ ಶಾಲೆಗಳ ಅರಂಭಕ್ಕೆ ಸೂಚನೆ ನೀಡಿದ್ದರು.
ಬೇಸಿಗೆ ಹಾಗೂ ಕೋವಿಡ್ 4ನೇ ಅಲೆ ನೆಪದಲ್ಲಿ ಶಾಲೆ ಪ್ರಾರಂಭ ದಿನಾಂಕವನ್ನು ಮುಂದೂಡಿಸುವ ಹುನ್ನಾರ ನಡೆದಿದ್ದು, ಯಾವುದೇ ಕಾರಣಕ್ಕೂ ಶಾಲೆಗಳ ಪ್ರಾರಂಭ ದಿನಾಂಕವನ್ನು ಮುಂದೂಡಬಾರದು ಎಂದು ಕ್ಯಾಮ್ಸ್ ಸಂಘಟನೆ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ. ಮನವಿ ಮಾಡಿದ್ದಾರೆ. "ಕೋವಿಡ್ನಿಂದಾಗಿ ಎರಡು ವರ್ಷದಿಂದ ಆನ್ಲೈನ್ ಕಲಿಕೆಗೆ ಅವಕಾಶ ನೀಡಿದ್ದರಿಂದ ಮಕ್ಕಳ ಕಲಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಎರಡು ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಕಲಿಕೆ ಕನಿಷ್ಠವಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ ಕಲಿಕೆಯಿಂದ ಹಿಂದುಳಿದು ಅನ್ಯಾಯಕ್ಕೆ ಒಳಗಾಗಿದ್ದಾರೆ" ಎಂದರು.

ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಮೇ. 16 ರಿಂದ ಶಾಲೆಗಳನ್ನು ಆರಂಭ ಮಾಡಿ ಅಧಿಸೂಚನೆ ಹೊರಡಿಸಿತ್ತು. ಆದರೆ ಕೆಲವು ರಾಜಕಾರಣಿಗಳು ನಾನಾ ಕಾರಣ ನೀಡಿ ಶಾಲೆಗಳ ಅರಂಭ ದಿನಾಂಕವನ್ನು ಮುಂದೂಡುವ ಪ್ರಯತ್ನ ಮಾಡಲು ಸರ್ಕಾರದ ಮೇಲೆ ಪ್ರಭಾವ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಹಾಲಿ ನಿರ್ಧಾರದಿಂದ ಹಿಂದೆ ಸರಿಯದೇ ನಿಗದಿಯಂತೆ ಶಾಲೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕ್ಯಾಮ್ಸ್ ಮನವಿ ಮಾಡಿದೆ.

ವೈಜ್ಞಾನಿಕ ಅಭಿಪ್ರಾಯ ಪರಿಗಣಿಸಿ: ರಾಜ್ಯದಲ್ಲಿ ಕೊರೊನಾದಿಂದ ಮಕ್ಕಳ ಕಲಿಕೆ ಮೇಲೆ ಆಗಿರುವ ಪರಿಣಾಮದ ಬಗ್ಗೆ ಅನೇಕ ಅಧ್ಯಯನ ವರದಿಗಳು ಬೆಳಕು ಚೆಲ್ಲಿವೆ. ಇದನ್ನು ಪರಿಗಣಿಸಿ ವೈಜ್ಞಾನಿಕವಾಗಿಯೇ ತಜ್ಞರು ಆಲೋಚಿಸಿ ಮೇ. 16 ರಿಂದ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಈಗಾಗಲೇ ರಾಜ್ಯದಲ್ಲಿ ಉತ್ತಮವಾದ ಬೇಸಿಗೆ ಮಳೆಯಾಗಿದ್ದು, ಶಾಲೆಗಳಲ್ಲಿ ಮಕ್ಕಳು ಕಲಿಯುವುದರಿಂದ ಬೇಸಿಗೆ ಸಮಸ್ಯೆ ಉದ್ಭವಿಸುವುದಿಲ್ಲ. ಈ ಎಲ್ಲಾ ವಿಚಾರ ಗಮನದಲ್ಲಿ ಇಟ್ಟುಕೊಂಡೇ ಶಾಲೆಗಳ ಪ್ರಾರಂಭಕ್ಕೆ ಮೇ. 16 ನಿಗದಿ ಮಾಡಿರುವುದು ವೈಜ್ಞಾನಿಕವಾಗಿದೆ. ಆದರೆ, ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಶಾಲೆಗಳ ಪ್ರಾರಂಭ ದಿನಾಂಕ ಮುಂದೂಡಬಾರದು.

ಇದರಿಂದ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರಲಿದೆ. ಹೆಚ್ಚುವರಿ ದಿನಗಳು ಸಿಗುವ ಕಾರಣದಿಂದ ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ತಯಾರಿಗೊಳಿಸಲು ಸಮಯ ಸಿಕ್ಕಂತಾಗುತ್ತದೆ. ಈ ವೈಜ್ಞಾನಿಕ ಸತ್ಯ ಅರಿತು ಶಾಲೆಗಳನ್ನು ನಿಗದಿಯಂತೆ ಮೇ. 16 ರಿಂದ ಪ್ರಾರಂಭ ಮಾಡಲು ಅನುವು ಮಾಡಿಕೊಡಬೇಕು ಎಂದು ಕ್ಯಾಮ್ಸ್ ಸಂಘಟನೆ ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದೆ.












Click it and Unblock the Notifications