ಜಾರಕಿಹೊಳಿ ರಾಜೀನಾಮೆ : 6 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಜ.29 : ಅಬಕಾರಿ ಸಚಿವ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ನಂತರ ಉಂಟಾಗಿರುವ ಬಿಕ್ಕಟ್ಟು ಶಮನಗೊಂಡಿಲ್ಲ. ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿಗೆ ಆಗಮಿಸದೇ ಬೆಂಬಲಿಗರ ತಂಡವೊಂದನ್ನು ಸಿಎಂ ಭೇಟಿಗಾಗಿ ಕಳುಹಿಸಿದ್ದಾರೆ. ತಮ್ಮ ರಾಜೀನಾಮೆ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
'ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅವರಿಗೆ ಯಾವ ವಿಚಾರದಲ್ಲಿ ಅಸಮಾಧಾನವಿದೆ ಎಂಬುದು ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾರಕಿಹೊಳಿ ಅವರ ರಾಜೀನಾಮೆಯಿಂದ ರಾಜ್ಯ ಸರ್ಕಾರ ಅಭದ್ರವಾಗಿಲ್ಲ, ಸಚಿವ ಸಂಪುಟದಲ್ಲಿ ಯಾವುದೇ ಬಿಕ್ಕಟ್ಟಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ['ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರ ಅಭದ್ರವಾಗಿಲ್ಲ']
ಗುರುವಾರ ಸಂಜೆ ಸಚಿವ ಸಂಪುಟ ಸಭೆ ಇದ್ದ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ನಡುವಿನ ಭೇಟಿ ರದ್ದಾಗಿದೆ. ರಾಜೀನಾಮೆ ವಾಪಸ್ ಪಡೆಯಲು ಎರಡು ಷರತ್ತು ಹಾಕಿರುವ ಜಾರಕಿಹೊಳಿ ಅವರು ಬೆಂಬಲಿಗರ ತಂಡವೊಂದನ್ನು ಬೆಂಗಳೂರಿಗೆ ಕಳುಹಿಸಿ ಕೊಟ್ಟು ಬೆಳಗಾವಿಯಲ್ಲಿಯೇ ಉಳಿದಿದ್ದಾರೆ. ಗುರುವಾರದ ಪ್ರಮುಖ ಬೆಳವಣಿಗೆಗಳ ಚಿತ್ರಣ ಇಲ್ಲಿದೆ ನೋಡಿ.

ಜಾರಕಿಹೊಳಿ ಹಾಕಿದ ಎರಡು ಷರತ್ತುಗಳು
ಸತೀಶ್ ಜಾರಕಿಹೊಳಿ ಅವರು ರಾಜೀನಾಮೆ ವಾಪಸ್ ಪಡೆಯಲು ಎರಡು ಷರತ್ತುಗಳನ್ನು ಹಾಕಿದ್ದಾರೆ. ತಕ್ಷಣ ಅಬಕಾರಿ ಖಾತೆಯನ್ನು ಬದಲಾವಣೆ ಮಾಡಿ ಬೇರೆ ಖಾತೆ ನೀಡಬೇಕು. ಸಂಪುಟ ವಿಸ್ತರಣೆ ವೇಳೆ ಪ್ರಬಲ ಖಾತೆಯನ್ನು ತಮಗೆ ನೀಡಬೇಕು ಎಂಬುದು ಅವರ ಷರತ್ತಾಗಿದೆ.

ಸಿಎಂ ಸಿದ್ದರಾಮಯ್ಯ ಹೇಳುವುದೇನು?
ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅವರಿಗೆ ಯಾವ ವಿಚಾರದಲ್ಲಿ ಅಸಮಾಧಾನವಿದೆ ಎಂಬುದು ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾರಕಿಹೊಳಿ ಅವರ ರಾಜೀನಾಮೆಯಿಂದ ರಾಜ್ಯ ಸರ್ಕಾರ ಅಭದ್ರವಾಗಿಲ್ಲ, ಸಚಿವ ಸಂಪುಟದಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾರಕಿಹೊಳಿ ಷರತ್ತಿನ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.

ಬೆಂಬಲಿಗರ ತಂಡ ಬೆಂಗಳೂರಿಗೆ
ಎರಡು ಷರತ್ತುಗಳನ್ನು ಹಾಕಿರುವ ಸತೀಶ್ ಜಾರಕಿಹೊಳಿ ಅವರು ಶಾಸಕ ಫಿರೋಜ್ ಶೇಠ್, ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದ ತಂಡವನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ. ಷರತ್ತುಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದರೆ ಮಾತ್ರ ಜಾರಕಿಹೊಳಿ ಅವರು ಸಿಎಂ ಅವರನ್ನು ಭೇಟಿ ಮಾಡಲಿದ್ದಾರೆ. ಈ ತಂಡ ಇಂದು ರಾತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದೆ.

ಮದ್ಯ ಮಾರಾಟಗಾರರ ಒಕ್ಕೂಟದ ಬೆಂಬಲ
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗಡೆ ಅವರು, ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಸಿಎಂ, ಜಾರಕಿಹೊಳಿ ಭೇಟಿ ಮುಂದಕ್ಕೆ
ಸತೀಶ್ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ಗುರುವಾರ ಸಂಜೆ ಸಚಿವ ಸಂಪುಟ ಸಭೆ ಇದ್ದುದ್ದರಿಂದ ಸಿಎಂ ಭೇಟಿ ಸಾಧ್ಯವಾಗಿಲ್ಲ. ಷರತ್ತು ಹಾಕಿರುವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿಯೇ ಇದ್ದು, ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ಬೆಂಬಲಿಗರಿಗೆ ಜಾರಕಿಹೊಳಿ ಮನವಿ
ತಮ್ಮ ರಾಜೀನಾಮೆ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸತೀಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. ತಮ್ಮ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿ ಯಾವುದೇ ಹೇಳಿಕೆ ನೀಡದೆ ತಮ್ಮೊಂದಿಗೆ ಸಹಕಾರ ನೀಡಬೇಕೆಂದು ಅವರು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲಿಗರಿಗೆ ಕರೆ ನೀಡಿದ್ದಾರೆ.












Click it and Unblock the Notifications