ಜೈಲು ಲಂಚ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಶಶಿಕಲಾ ನಟರಾಜನ್ ಮತ್ತು ಇಳವರಸಿ ಹಾಜರು
ಬೆಂಗಳೂರು, ಮಾ. 11 : ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆಯಲು ಜೈಲು ಅಧಿಕಾರಿಗಳಿಗೆ ಎರಡು ಕೋಟಿ ರೂ. ಲಂಚ ನೀಡಿದ ಆರೋಪ ಸಂಬಂಧ ಎಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತಮಿಳುನಾಡಿನ ಎಐಎಡಿಂಕೆ ನಾಯಕಿ ಶಶಿಕಲಾ ನಟರಾಜನ್ ಮತ್ತು ಆಪ್ತೆ ಇಳವರಸಿಗೆ ಎಸಿಬಿ ವಿಶೇಷ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.
ಮೂರು ಲಕ್ಷ ರೂ. ಹಣದ ಶ್ಯೂರಿಟಿ ಷರತ್ತು ವಿಧಿಸಿ ನ್ಯಾಯಾಲಯ ಐದನೇ ಆರೋಪಿಯಾಗಿರುವ ಶಶಿಕಲಾ ನಟರಾಜನ್ ಮತ್ತು ಆರನೇ ಆರೋಪಿ ಇಳವರಸಿಗೆ ಜಾಮೀನು ಮಂಜೂರು ಮಾಡಿತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆ ಪೂರೈಸಿದ್ದ ಶಶಿಕಲಾ ನಟರಾಜನ್ ಕಳೆದ ವರ್ಷ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಚಿನ್ನಮ್ಮ ಬಿಡುಗಡೆ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಹುಟ್ಟು ಹಾಕಿತ್ತು.
ಜೈಲಿನಲ್ಲಿ ರಾಜಾತಿಥ್ಯ: ಶಶಿಕಲಾ, ಜೈಲು ಅಧಿಕಾರಿಗಳ ವಿರುದ್ಧ ಎಸಿಬಿ ಆರೋಪಪಟ್ಟಿ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಕೂಡ ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷಾ ಅವಧಿ ಪೂರೈಸಲು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಜೈಲು ಸೇರಿದ್ದ ಚಿನ್ನಮ್ಮ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆಯಲು ಎರಡು ಕೋಟಿ ರೂಪಾಯಿ ಲಂಚವನ್ನು ಜೈಲಿನ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದು ರಾಜ್ಯದಲ್ಲಿ ದೊಡ್ಡ ಸಂಚಲನವೇ ಹುಟ್ಟು ಹಾಕಿತ್ತು. ಐಪಿಎಸ್ ಅಧಿಕಾರಿಗಳ ನಡುವಿನ ಗುದ್ದಾಟಕ್ಕೂ ನಾಂದಿ ಹಾಡಿತ್ತು.
ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ನ ಅಂದಿನ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ ಎಸಿಬಿಗೆ ನಿರ್ದೇಶನ ನೀಡಿತ್ತು.
ಈ ಕುರಿತು ತನಿಖೆ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿತ್ತು. ಈ ವರದಿಯನ್ನು ಹೈಕೋರ್ಟ್ ಅಂಗೀಕರಿಸಿತ್ತು. ಆ ಬಳಿಕ ಈ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ಆರು ಮಂದಿ ಅರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್, ಸೂಪರಿಡೆಂಟ್ ಅನಿತಾ, ಜೈಲಿನ ಸೂಪರಿಡೆಂಟ್ ಸುರೇಶ್, ಭದ್ರತೆ ಪೇದೆ ಗಜರನ್ ಮಕ್ಕನೂರು, ಜಯಲಲಿತಾ ಆಪ್ತೆ ಶಶಿಕಲಾ, ಮತ್ತು ಇಳವರಸಿ ವಿರುದ್ಧ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ವಿಶೇಷ ನ್ಯಾಯಾಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮೊದಲ ಎರಡು ಆರೋಪಿಗಳಾದ ಕೃಷ್ಣಕುಮಾರ್ ಮತ್ತು ಜೈಲು ಅಧಿಕಾರಿ ಅನಿತಾ ಅವರು ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರ ಅರ್ಜಿ ಮಾನ್ಯ ಮಾಡಿ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು.
ಉಳಿದ ಇಬ್ಬರು ಆರೋಪಿಗಳು ನ್ಯಾಯಾಲಯದಿಂದ ಶುಕ್ರವಾರ ಜಾಮೀನು ಪಡೆದರು. ಐದು ಮತ್ತು ಆರನೇ ಆರೋಪಿ ಇಳವರಸಿಗೂ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಜಾಮೀನು ದೊರೆತ ಹಿನ್ನೆಲೆಯಲ್ಲಿ ಚಿನ್ನಮ್ಮ ಮತ್ತು ಇಳವರಸಿ ಎಂದಿನಂತೆ ತವರಿಗೆ ತೆರಳಿದರು.
ಅಕ್ರಮ ಆಸ್ತಿ ಗಳಿಕೆ ಮಾಡಿದ ಆರೋಪದಡಿ ಶಶಿಕಲಾ ನಟರಾಜನ್ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಜನ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017 ಫೆ. 15 ರಂದು ಪೊಲೀಸರಿಗೆ ಶರಣಾಗಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಶಿಕ್ಷೆ ಅನುಭವಿಸಿದ್ದರು. 2021 ಜನವರಿಯಲ್ಲಿಯೇ ಶಿಕ್ಷೆ ಅವಧಿ ಮುಗಿದಿತ್ತು. ಕೋವಿಡ್ ಕಾರಣದಿಂದ ಶಶಿಕಲಾ ನಟರಾಜ್ ಜೈಲಿನಿಂದ 2021 ಫೆಬ್ರವರಿ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿನಲ್ಲಿ ಚಿನ್ನಮ್ಮ ಕನ್ನಡ ಭಾಷೆ ಓದು- ಬರಹ ಕಲಿತ ಸಂಗತಿ ಹೊರ ಬಂದಿತ್ತು.
Recommended Video