ಲೋಕಾಯುಕ್ತ ಕಿತ್ತೊಗೆಯಲು ಬೀದಿ ಹೋರಾಟವೊಂದೇ ಬಾಕಿ!
ಬೆಂಗಳೂರು, ಜುಲೈ 11 : ಲೋಕಾಯುಕ್ತದಲ್ಲಿನ ಭ್ರಷ್ಟಚಾರದ ತನಿಖೆಯನ್ನು ಸಿಬಿಐಗೆ ವಹಿಸದೇ ಸರ್ಕಾರ ಏಕೆ ಮೌನವಾಗಿದೆ? ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗೆಡೆ ಪ್ರಶ್ನಿಸಿದ್ದಾರೆ. ಲೋಕಾಯುಕ್ತ ವೈ.ಭಾಸ್ಕರಾವ್ ಅವರು ರಾಜೀನಾಮೆ ನೀಡುವಂತೆ ಬೀದಿಗಿಳಿದು ಹೋರಾಟ ಮಾಡುವುದು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ.
ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂತೋಷ್ ಹೆಗಡೆ ಅವರು, 'ವೈ.ಭಾಸ್ಕರರಾವ್ ಮತ್ತು ಅಶ್ವಿನ್ರಾವ್ ಅವರ ರಕ್ಷಣೆಗೆ ನಿಂತಿರುವ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೆ ನಾಟಕವಾಡುತ್ತಿದೆ' ಎಂದು ಆರೋಪಿಸಿದರು. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

'ಸರ್ಕಾರ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದೆ ಎಂದು ಸ್ಪಷ್ಟನೆ ನೀಡುತ್ತಿದೆ. ಎಸ್ಐಟಿ ಪೊಲೀಸ್ ಸಂಸ್ಥೆಯಲ್ಲ, ಎಫ್ಐಆರ್ ದಾಖಲು ಮಾಡಿ ಆರೋಪಿಗಳನ್ನು ಬಂಧಿಸುವ ಅಧಿಕಾರವಿಲ್ಲ. ಎಸ್ಐಟಿ ತನಿಖೆಯಿಂದ ನಡೆದಿರುವ ಭ್ರಷ್ಟಾಚಾರದ ಹಗರಣದ ಸತ್ಯಾಂಶ ಹೊರಬರುತ್ತದೆಯೇ?' ಎಂದು ಸಂತೋಷ್ ಹೆಗಡೆ ಪ್ರಶ್ನಿಸಿದರು. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]
'ಲೋಕಾಯುಕ್ತ ನ್ಯಾಯಮೂರ್ತಿಗಳಾದ ವೈ.ಭಾಸ್ಕರರಾವ್ ಅವರು ಹಣ ಪಡೆಯದೇ ಇರಬಹುದು. ಆದರೆ, ಅವರ ಪುತ್ರ ಅಕ್ರಮವೆಸಗಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ ವೈ.ಭಾಸ್ಕರಾವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಸಂತೋಷ್ ಹೆಗಡೆ ಅವರು ಒತ್ತಾಯಿಸಿದರು. [ಲೋಕಾಯುಕ್ತರ ಪದಚ್ಯುತಿ ಹೇಗೆ?]
'ರಾಜೀನಾಮೆ ನೀಡುವಂತೆ ಹಲವು ವಿಧದಲ್ಲಿ ವೈ.ಭಾಸ್ಕರಾವ್ ಅವರ ಮೇಲೆ ಒತ್ತಡ ಹೇರಲಾಗಿದೆ. ಇನ್ನು ಬೀದಿಗಿಳಿದು ಹೋರಾಟ ಮಾಡುವುದು ಮಾತ್ರ ಬಾಕಿ ಇದೆ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡದಿದ್ದರೆ, ಅವರು ಕಚೇರಿ ಪ್ರವೇಶಿಸದಂತೆ ಹೋರಾಟ ಮಾಡಬೇಕಾಗುತ್ತದೆ' ಎಂದು ಸಂತೋಷ್ ಹೆಗಡೆ ಅವರು ಹೇಳಿದರು.
ಲೋಕಾಯುಕ್ತದ ಪಾವಿತ್ರ್ಯತೆ ಹಾಳಾಗಿದೆ : ಪತ್ರಿಕಾಗೋಷ್ಠಿಯಲ್ಲಿದ್ದ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ, ಭ್ರಷ್ಟಾಚಾರದಂತಹ ಪ್ರಕರಣಗಳ ಬಗ್ಗೆ ದೂರು ನೀಡಲು ಇದ್ದ ಏಕೈಕ ಸಂಸ್ಥೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವುದು ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಲೋಕಾಯುಕ್ತರು ಕಚೇರಿಗೆ ಬರುವುದು ತಡೆಯೋಣ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಮಾತನಾಡಿ, 'ವ್ಯವಸ್ಥಿತವಾಗಿ ಅಶ್ವಿನ್ರಾವ್ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ರಾಜೀನಾಮೆ ನೀಡದೆ ಭಂಡತನ ತೋರಿಸುತ್ತಿರುವ ವೈ.ಭಾಸ್ಕರರಾವ್ ಅವರನ್ನು ಲೋಕಾಯುಕ್ತ ಕಚೇರಿಗೆ ಪ್ರವೇಶ ಮಾಡದಂತೆ ತಡೆಯುವ ಹೋರಾಟ ನಡೆಸಬೇಕಾಗಿದೆ ಎಂದರು.











Click it and Unblock the Notifications