Karnataka govt employees; ಪುಣ್ಯಕೋಟಿ ಯೋಜನೆಗೆ ಎಷ್ಟು ವೇತನ ಕಡಿತ?
ಬೆಂಗಳೂರು, ನವೆಂಬರ್ 17; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ನಲ್ಲಿ 'ಪುಣ್ಯಕೋಟಿ ದತ್ತು ಯೋಜನೆ' ಘೋಷಣೆ ಮಾಡಿದ್ದರು. ಈ ಯೋಜನೆಗೆ ಸರ್ಕಾರಿ ನೌಕರರ ನವೆಂಬರ್ ತಿಂಗಳ ವೇತನ ಕಡಿತಗೊಳಿಸಿ ದೇಣಿಗೆ ಪಡೆಯಲಾಗುತ್ತದೆ.
ಕರ್ನಾಟಕ ಸರ್ಕಾರದ ಹಣಕಾಸು ಸಚಿವಾಲಯ ವೇತನ ಕಡಿತಕ್ಕೆ ಮಂಜೂರಾತಿ ನೀಡಿದೆ. ಆರ್ಥಿಕ ಇಲಾಖೆ (ಸೇವೆಗಳು-2) ಸರ್ಕಾರದ ಉಪ ಕಾರ್ಯದರ್ಶಿ ಉಮಾ ಕೆ. ಬುಧವಾರ ವೇತನ ಕಡಿತದ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ವೇತನ ಕಡಿತಗೊಳಿಸಲು ಒಪ್ಪಿಗೆಯನ್ನು ನೀಡಿತ್ತು.
7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು
'ಪುಣ್ಯಕೋಟಿ ದತ್ತು ಯೋಜನೆ'ಯ ಸುಗಮ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನದಿಂದ ವಂತಿಗೆಯನ್ನು ಕಡಿತ ಮಾಡಿ ನಿಗದಿತ ಯೋಜನೆಗೆ ಬಳಸುವ ಕುರಿತು ಎಂದು ಆದೇಶದ ವಿಷಯವು ಒಳಗೊಂಡಿದೆ. ನವೆಂಬರ್ ತಿಂಗಳ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತವಾಗಲಿದೆ. ಮುಖ್ಯಮಂತ್ರಿಗಳು ಸಹ ಸರ್ಕಾರಿ ನೌಕರರು ವೇತನದಲ್ಲಿ ದೇಣಿಗೆ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದ್ದರು.
ಸರ್ಕಾರಿ ನೌಕರರ ರಜೆ; ಗಳಿಕೆ, ಅಸಾಧಾರಣ, ಸಾಂದರ್ಭಿಕ ರಜೆ ನಿಯಮಗಳು
ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಮತ್ತು ಸರ್ಕಾರದ ಅವಿಭಾಜ್ಯ ಅಂಗವಾದ ನಿಗಮ/ ಮಂಡಳಿ/ ಪ್ರಾಧಿಕಾರ/ವಿಶ್ವವಿದ್ಯಾಲಯ/ ಸ್ವಾಯತ್ತ ಸಂಸ್ಥೆಗಳ ನೌಕರರುಗಳು ಸಹಕರಿಸುವಂತೆ ಕರೆ ನೀಡಿದ್ದರು. ಈಗ ಯಾವ ನೌಕರರಿಗೆ ಎಷ್ಟು ವೇತನ ಕಡಿತವಾಗಲಿದೆ? ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ನೌಕರರಿಗೆ ಸಿಹಿಸುದ್ದಿ; 7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕ
ನವೆಂಬರ್ನ ವೇತನದಲ್ಲಿ ಕಡಿತ
ಮುಖ್ಯಮಂತ್ರಿಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ವೇತನ ಕಡಿತಗೊಳಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಭಾರತೀಯ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳು ದೇಶದ ಸಂಸ್ಕೃತಿ ಹಾಗೂ ಸಂಪತ್ತಿನ ಪ್ರತೀಕವಾಗಿದ್ದು, ಗೋ ಸಂತತಿಯನ್ನು ರಕ್ಷಿಸುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ 'ಪುಣ್ಯಕೋಟಿ ದತ್ತು ಯೋಜನೆ' ಘೋಷಣೆ ಮಾಡಿದೆ.
ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಿ ನೌಕರರು ಹಾಗು ನಿಗಮ/ ಮಂಡಳಿ/ ಪ್ರಾಧಿಕಾರ/ ವಿಶ್ವವಿದ್ಯಾಲಯ/ ಸ್ವಾಯತ್ತ ಸಂಸ್ಥೆಗಳ ನೌಕರರ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆಯನ್ನು ಕಟಾವು ಮಾಡಿ ನಿಗದಿತ ಯೋಜನೆಗೆ ಬಳಸಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದುದ್ದೇಶವನ್ನು ಸರ್ಕಾರವು ಶ್ಲಾಘಿಸಿದೆ.
ಯಾವ ವೃಂದದವರಿಗೆ ಎಷ್ಟು ಕಡಿತ
ಸರ್ಕಾರಿ ನೌಕರರ ನವೆಂಬರ್-2022ರ ವೇತನದಲ್ಲಿ ಕಡಿತಗೊಳಿಸಲು ಆದೇಶ ಹೊರಡಿಸಲಾಗಿದೆ. ನಿರ್ದಿಷ್ಟಪಡಿಸಿದ ಮೊತ್ತದ ವಂತಿಗೆಯನ್ನು ಕಡಿತಗೊಳಿಸಿ ನಿಗದಿತ ಯೋಜನೆಗೆ ಬಳಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
'ಎ' ವೃಂದದ ಅಧಿಕಾರಿಗಳು ರೂ. 11,000. 'ಬಿ' ವೃಂದದ ಅಧಿಕಾರಿಗಳು ರೂ. 4000. 'ಸಿ' ವೃಂದದ ನೌಕರರ ವೇತನದಿಂದ ರೂ. 400 ಕಡಿತವಾಗಲಿದೆ. 'ಡಿ' ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ.
ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ವೇತನ ಕಡಿತಗೊಳಿಸಿದ ಮೊತ್ತವನ್ನು ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರಿಗೆ ಖಜಾನೆ ಅಧಿಕಾರಿಗಳು ಸಂದಾಯ ಮಾಡಲಿದ್ದಾರೆ.
ವೇತನ ಕಡಿತಕ್ಕೆ ಸೂಚನೆಗಳು
HRMSನಲ್ಲಿ ವೇತನ ಬಿಲ್ಲುಗಳನ್ನು ಮಾಡುವಾಗ ಕಡಿತಗೊಳಿಸಲು ಆದೇಶಿಸುವ ತಿಂಗಳಿನಲ್ಲಿ ಇತರೆ ಕಡಿತಗಳನ್ನು ಮಾಡುವಂತೆ ಡಿಡಿಓರವರು ವಂತಿಗೆಗಳು' (Contributions) ಅಡಿ ಪ್ರತಿ ನೌಕರರಿಂದ ಕಡಿತಗೊಳಿಸುವ ಮೊತ್ತವನ್ನು ನಮೂದಿಸಬೇಕಾಗಿರುತ್ತದೆ. ಬಿಲ್ಲಿನಲ್ಲಿ ಸದರಿ ಮೊತ್ತ ಕಡಿತವಾಗಿ ಪ್ರತ್ಯೇಕ ಷೆಡ್ಯೂಲ್ ಮಾಡಲಾಗುತ್ತದೆ. ಈ ರೀತಿ ಕಡಿತಗೊಂಡ ಮೊತ್ತಗಳು ಲೆಕ್ಕ ಶೀರ್ಷಿಕೆ ಹಾಗೂ ಖಾತೆಯಲ್ಲಿ ಸಂಚಿತವಾಗಿ ಸ್ವಯಂ ಲೆಕ್ಕವಾಗುತ್ತದೆ. ರಾಜ್ಯ ಹುಜೂರ್ ಖಜಾನೆಯು ಲೆಕ್ಕ ಅಖೈರಾದ ನಂತರ, ಜಮೆಗಳನ್ನು ಸಮನ್ವಯ ಮಾಡಿಕೊಂಡು ಸರ್ಕಾರವು ಸೂಚಿಸುವ ಸ್ವೀಕೃತದಾರರ (Recipient) ಖಾತೆಗೆ online ಮೂಲಕ ಜಮೆ ಮಾಡುತ್ತದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳು, ಬಿಲ್ಲಿನಲ್ಲಿ ಕಡಿತಗೊಳಿಸುವ ವಂತಿಗೆಗಳು ಸಂಸ್ಥೆಯ ಮುಖ್ಯಸ್ಥರ ಖಾತೆಯಲ್ಲಿ (ಮುಖ್ಯೋಪಾಧ್ಯಾಯರು/ ಪ್ರಾಂಶುಪಾಲರು) ಜಮೆಯಾಗಲಿದ್ದು, ಸದರಿ ಮೊತ್ತವನ್ನು ಸಂಸ್ಥೆಯ ಮುಖ್ಯಸ್ಥರು ಚಲನ್ ಮೂಲಕ ಜಮೆ ಮಾಡಬೇಕಾಗುತ್ತದೆ. ಇದೇ ರೀತಿ ನಿಗಮ/ ಮಂಡಳಿಗಳು/ ಪ್ರಾಧಿಕಾರ/ ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಸ್ವಾಯತ್ತ ಸಂಸ್ಥೆಗಳು ತಮ್ಮ ನೌಕರರಿಂದ ಸಂಗ್ರಹಿಸುವ ವಂತಿಗೆಗಳನ್ನು ಠೇವಣಿ ಖಾತೆಗೆ ಜಮೆಯಾಗುವಂತೆ ಚಲನ್ ಮಾಡಿ ಬ್ಯಾಂಕ್ ಮೂಲಕ ಜಮೆ ಮಾಡಬೇಕಾಗುತ್ತದೆ. ರಾಜ್ಯ ಹುಜೂರ್ ಖಜಾನೆಯಲ್ಲಿ ಲೆಕ್ಕವಾಗಿ ಅದನ್ನು ಸಹ ರಾಜ್ಯ ಹುಜೂರ್ ಖಜಾನೆಯು ಸರ್ಕಾರವು ಸೂಚಿಸುವ ಸ್ವೀಕೃತದಾರರ ಖಾತೆಗೆ ಜಮೆ ಮಾಡುತ್ತದೆ.
ಡಿಸೆಂಬರ್ 31ರೊಳಗೆ ಪೂರೈಕೆ
ನವೆಂಬರ್ 2022ರಲ್ಲಿ ಸ್ವೀಕರಿಸಲಾದ ವೇತನ ಬಿಲ್ಲುಗಳ ನಿರ್ವಹಣೆಯನ್ನು 2022ರ ಡಿಸೆಂಬರ್ 31ನೇ ದಿನಾಂಕದೊಳಗೆ ಪೂರೈಸಬೇಕು ಎಂದು ಸೂಚನೆ ನೀಡಲಾಗಿದೆ. ಡಿಸೆಂಬರ್ ತಿಂಗಳು ಅಂತ್ಯಗೊಂಡ ನಂತರ ಪಾವತಿ ಮಾಡಿದ ಬಿಲ್ಲುಗಳ ಪ್ರಕರಣಗಳಲ್ಲಿ ಅವುಗಳನ್ನು ಪಾವತಿ ಮಾಡಿದ ಒಂದು ವಾರದೊಳಗೆ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ತೆರೆಯಲಾಗುವ ಖಾತೆಗೆ ಜಮೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕಿದೆ. ಮಹಾಲೇಖಪಾಲರು ನೀಡಿದ ಅಧಿಕಾರ ಪತ್ರದ ಮೇಲೆ ತಮ್ಮ ವೇತನವನ್ನು ಖಜಾನೆಯಿಂದ ಪಡೆಯುವ ಅಧಿಕಾರಿಗಳೂ ಸಹ ಈ ಕ್ರಮಗಳನ್ನು ಪಾಲಿಸುವುದು.
ವೇತನ ಕಡಿತಕ್ಕೆ ಅಸಮಾಧಾನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಹಿಂದೆ ಪ್ರವಾಹ, ಕೋವಿಡ್, ಭೂಕಂಪದಂತಹ ಸಂದರ್ಭದಲ್ಲಿಯೂ ದೇಣಿಗೆ ನೀಡುವ ಮೂಲಕ ಸರ್ಕಾರದ ನೆರವಿಗೆ ನಿಂತಿತ್ತು. ಆದರೆ ಈಗ ವೇತನ ಕಡಿತಕ್ಕೆ ಅಸಮಾಧಾನಗಳು ಸಹ ಕೇಳಿ ಬಂದಿವೆ. ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿ ಇನ್ನೂ ಆದೇಶ ಹೊರಡಿಸಿಲ್ಲ. ವೇತನ ಕಡಿತಕ್ಕೆ ತರಾತುರಿ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಯ್ಯ, "ವೇತನ ಕಡಿತದ ಬಗ್ಗೆ ನಮ್ಮ ಸಂಘದ ಜೊತೆ ಸರ್ಕಾರಿ ನೌಕರರ ಸಂಘವಾಗಲಿ, ಸರ್ಕಾರವಾಗಲಿ ಮಾತುಕತೆ ನಡೆಸಿಲ್ಲ. ವೇತನ ಕಡಿತಕ್ಕೆ ನಮ್ಮ ಸಮ್ಮತಿ ಇಲ್ಲ" ಎಂದು ಹೇಳಿದ್ದಾರೆ.