ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಸಂತನ ಮುಗಿಸಲು ಕಿಡಿಗೇಡಿಗಳ ಸಂಚು
ಬೆಂಗಳೂರು, ಫೆ 5: ಹಿಂದೂ ಸಮಾಜದ ಸಂತರೆಲ್ಲಾ ಒಂದೇ, ಅವರಲ್ಲಿ ಇರುವುದು ಸಮಾಜಸೇವೆ, ಹಿಂದೂ ಸಂಸ್ಕೃತಿಯನ್ನು ರಕ್ಷಿಸುವುದು, ಬೆಳೆಸುವುದು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ (ಫೆ 5) ಏರ್ಪಡಿಸಲಾಗಿದ್ದ ಸಹಸ್ರ ಸಂತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಘವೇಶ್ವರ ಶ್ರೀಗಳು, ಹಿಂದೂ ಸಂತರ ಮೇಲೆ ವ್ಯವಸ್ಥಿತ ಆಕ್ರಮಣ ನಡೆಯುತ್ತಿದೆ. ಇದನ್ನು ನಾವು ಎದುರಿಸಬೇಕಾಗಿದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ. (ಯತಿಗಳು ಒಂದಾದರೆ ಸಮಾಜಕ್ಕೆ ಒಳ್ಳೆ ಸಂದೇಶ)
ನಾವು ಸನ್ಯಾಸಿಗಳು ಸ್ವಯಂ ಶ್ರಾದ್ದ ಮಾಡಿಕೊಂಡು ಪೀಠಕ್ಕೇರಿರುತ್ತೇವೆ. ನಮಗೆ ಹಣ, ಆಸ್ತಿಪಾಸ್ತಿಯ ಮೇಲೆ ವ್ಯಾಮೋಹವಿರುವುದಿಲ್ಲ. ನಮ್ಮ ಮೇಲೆ ಆಕ್ರಮಣ ನಡೆದರೆ ನಮ್ಮ ನೋವನ್ನು ಯಾರ ಬಳಿ ತೋಡಿಕೊಳ್ಳುವುದು ಎಂದು ರಾಘವೇಶ್ವರ ಭಾರತಿ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.
ನಾವೇನು ಸರಕಾರದ ಹಿಂದೆ ಬಿದ್ದು, ಗೋಕರ್ಣ ಮಠವನ್ನು ನಮಗೆ ಹಸ್ತಾಂತರಿಸಿ ಎಂದು ಕೇಳಿಕೊಳ್ಳಲಿಲ್ಲ. ಗೋಕರ್ಣ ಮಠದಲ್ಲಿ ಭಾರೀ ಹಣಕಾಸಿನ ಅವ್ಯವಹಾರ ನಡೆಯುತ್ತಿತ್ತು. ಅದನ್ನು ತಡೆಯುವ ಸವಾಲನ್ನು ನಾನು ತೆಗೆದುಕೊಂಡೆವು ಎಂದು ರಾಘವೇಶ್ವರ ಶ್ರೀಗಳು ಹೇಳಿದ್ದಾರೆ. (ಗೋಮಾತೆಯ ಆಶೀರ್ವಾದದಿಂದ ಶ್ರೀಗಳಿಗೆ ಏನೂ ಆಗಿಲ್ಲ)
ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಸಂತನನ್ನು ಮುಗಿಸಲು ಕೆಲವು ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ. ಅದಕ್ಕೇ ನಾನೇ ಉದಾಹರಣೆ. ನಮ್ಮನ್ನು ವಿನಾಕಾರಣ ಬಲಿಪಶು ಮಾಡಲಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ನೋವು ತೋಡಿಕೊಂಡಿದ್ದಾರೆ.
ಅದ್ದೂರಿಯಾಗಿ ನಡೆದ ಸಹಸ್ರ ಸಂತ ಸಂಗಮದಲ್ಲಿ, ಯಾವ ಯಾವ ಶ್ರೀಗಳು ಭಾಗವಹಿಸಿದ್ದರು, ಮುಂದಿನ ಪುಟದಲ್ಲಿ ನೋಡಿ..
ಬೇಲಿ ಮಠದ ಶ್ರೀ
ಸಹಸ್ರ ಸಂತ ಸಂಗಮ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬೇಲಿಮಠದ ಶಿವರುದ್ರ ಸ್ವಾಮೀಜಿಯವರು, ಧಾರ್ಮಿಕ ರಕ್ಷಣೆ ನಮ್ಮ ಕೆಲಸ, ಆ ಕೆಲಸಕ್ಕೆ ನಾವು ಕಟಿಬದ್ದರಾಗಿದ್ದೇವೆ. ನಮ್ಮ ಮೇಲೆ ನಡೆಯುತ್ತಿರುವ ಆಕ್ರಮಣ ನೋಡಿಯೂ ಸರಕಾರ ಸುಮ್ಮನಿದೆ - ಬೇಲಿಮಠದ ಶ್ರೀ.
ಮೌನವಾಗಿರಲು ಸಾಧ್ಯವಿಲ್ಲ
ಸಂತರ ಮೇಲೆ ನಡೆಯುತ್ತಿರುವ ಆಕ್ರಮಣ ನೋಡಿ, ಎಷ್ಟು ದಿನ ಸುಮ್ಮನಿರಲು ಸಾಧ್ಯ? ಇನ್ನು ಮುಂದೆ ಮೌನವಾಗಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂತರು ಮಾಡುತ್ತಿದ್ದಾರೆಂದು ಬೇಲಿಮಠದ ಶ್ರೀಗಳು ಹೇಳಿದ್ದಾರೆ.
ಸಂತೋಷ ಭಾರತಿ ಸ್ವಾಮೀಜಿ
ಎಲ್ಲರದ್ದೂ ಒಂದೇ ಜಾತಿ, ಹಿಂದೂ ಧರ್ಮ. ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನ ಬೇಡ. ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕಾಗಿದೆ, ಅದಕ್ಕಾಗಿ ಈ ಸಮಾವೇಶ ಆಯೋಜಿಸಲಾಗಿದೆ. ಇದರ ಅವಶ್ಯಕತೆ ಕೂಡಾ ಇದೆ ಎಂದು ವಿಶ್ವ ಸಂತೋಷ ಭಾರತಿ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಗೋಕರ್ಣ ಮಠ
ಗೋಕರ್ಣ ಮಠದಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಸರಿದಾರಿಗೆ ತರುವ ಸವಾಲನ್ನು ನಾವು ಸ್ವೀಕರಿಸಿದೆವು. ಅದಕ್ಕೆ ನಮಗೆ ಸಿಕ್ಕ ಪ್ರತಿಫಲ ನಮ್ಮ ಮೇಲೆ ಇಲ್ಲಸಲ್ಲದ ಆರೋಪ, ಕ್ರಿಮಿನಲ್ ಕೇಸುಗಳು, ಲೈಂಗಿಕ ದೌರ್ಜನ್ಯದ ಆರೋಪ ಎಂದು ರಾಘವೇಶ್ವರ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖ ಸಂತರು
ಸಂತ ಸೇವಕ ಸಮಿತಿ ಆಯೋಜಿಸಿದ್ದ ಈ ಬೃಹತ್ ಸಂತ ಸಮಾವೇಶದಲ್ಲಿ ಉಡುಪಿ ವಿದ್ಯಾವಲ್ಲಭ ಶ್ರೀಗಳು, ಚಿತ್ರದುರ್ಗದ ಮಾಚಿದೇವ ಮಠದ ಶ್ರೀಗಳು, ಹುಕ್ಕೇರಿ ಮಠ, ಬೇಲಿಮಠದ ಶ್ರೀಗಳು, ಸಂತೋಷ ಭಾರತಿ ಶ್ರೀಗಳು, ಸುಬ್ರಹ್ಮಣ್ಯ ಮಠದ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶ್ರೀಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ವಿಶ್ವ ಸಂತೋಷ ಭಾರತಿ ಸ್ವಾಮೀಜಿ
ಪ್ರತೀ ಮಠದಲ್ಲಿ ಲೀಗಲ್ ಶೆಲ್ ರಚಿಸಿ ವಕೀಲರೊಬ್ಬರನ್ನು ನೇಮಿಸಲಾಗುವುದು. ಯಾವುದೇ ಶ್ರೀಗಳಿಗೆ ತೊಂದರೆ, ಕಿರುಕುಳ ಎದುರಾದರೆ ಕಾನೂನು ಹೋರಾಟ ನಡೆಸುವ ನಿರ್ಧಾರಕ್ಕೆ ಈ ಸಂತ ಸಮಾವೇಶದಲ್ಲಿ ಬರಲಾಗಿದೆ ಎಂದು ವಿಶ್ವ ಸಂತೋಷ ಭಾರತಿ ಸ್ವಾಮೀಜಿಗಳುಹೇಳಿದ್ದಾರೆ.