ಮಕ್ಕಳಿಗೆ ನೀರು ಕುಡಿಯಲು 'ವಾಟರ್ ಬೆಲ್' ವಿರಾಮ: ಕೇರಳದ ಯೋಜನೆ ರಾಜ್ಯದ ಶಾಲೆಗಳಲ್ಲಿಯೂ ಜಾರಿ?
ಬೆಂಗಳೂರು, ನವೆಂಬರ್ 13: ಶಾಲೆಗೆ ಹೋದ ಮೇಲೆ ಮಕ್ಕಳು ಎಷ್ಟು ನೀರು ಕುಡಿಯುತ್ತಾರೆ? ಬಹುತೇಕ ಮಕ್ಕಳು ತರಗತಿ ಶುರುವಾದ ಬಳಿಕ ನೀರು ಕುಡಿಯುವುದೇ ಇಲ್ಲ. ಅನೇಕ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಅವಧಿಯ ಬಿಡುವು ನೀಡುವವರೆಗೂ ನೀರು ಕುಡಿಯಲು ಅವಕಾಶವೂ ಸಿಗುವುದಿಲ್ಲ. ಇನ್ನು ಊಟದ ಬಳಿಕ ಸಂಜೆ ತರಗತಿಗಳು ಮುಗಿದ ಬಳಿಕವೇ ಮತ್ತೆ ವಿರಾಮ. ಹೀಗಿರುವಾಗ ಮಕ್ಕಳ ದೇಹಕ್ಕೆ ಅಗತ್ಯವಿರುವಷ್ಟು ನೀರು ಸಿಗುತ್ತದೆಯೇ? ಖಂಡಿತಾ ಇಲ್ಲ. ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸದೆ ಹೋದರೆ ಮೂತ್ರದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು, ನಿರ್ಜಲೀಕರಣ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬುದೂ ಹೆಚ್ಚಿನವರಿಗೆ ಅರಿವಿಲ್ಲ.
ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೆ ಹೋದರೆ ಭವಿಷ್ಯದಲ್ಲಿಯೂ ಅವರ ದೇಹಾರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಕೇರಳದಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಮಕ್ಕಳು ತರಗತಿಯ ನಡುವೆಯೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತಹ ಯೋಜನೆಯಿದು. 'ವಾಟರ್ ಬೆಲ್' ಎಂಬ ಈ ಯೋಜನೆ ಆರಂಭವಾಗಿದ್ದು, ಕೇರಳದ ಖಾಸಗಿ ಶಾಲೆಯೊಂದರಲ್ಲಿ. ಅಲ್ಲಿಂದ ಅನೇಕ ಶಾಲೆಗಳು ಈ ಯೋಜನೆಯನ್ನು ಅಳವಡಿಸಿಕೊಂಡಿದೆ. ರಾಜ್ಯದ ಶಾಲೆಗಳಲ್ಲಿಯೂ ಇಂತಹ ಯೋಜನೆ ಜಾರಿ ಮಾಡಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಚಿಂತನೆ ನಡೆಸಿದ್ದಾರೆ.

ನೀರುಕುಡಿಯಲು ವಿಶೇಷ ಸಮಯ
ಕೇರಳದ ತಿರುವನಂತಪುರಂನ ಗ್ರೀನ್ ಡೋಮ್ ಪಬ್ಲಿಕ್ ಶಾಲೆ ಈ ವರ್ಷದ ಆರಂಭದಲ್ಲಿ 'ವಾಟರ್ ಬೆಲ್' ಎಂಬ ವಿನೂತನ ಯೋಜನೆ ಆರಂಭಿಸಿತ್ತು. ಪ್ರತಿದಿನವೂ ಮಕ್ಕಳು ನೀರು ಕುಡಿಯಲು ನಿರ್ದಿಷ್ಟ ಅವಧಿಯಲ್ಲಿ ವಿಶೇಷ ವಿರಾಮದ ಸಮಯ ನೀಡುವುದು ಈ ಯೋಜನೆ ಉದ್ದೇಶ. ದಿನದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಈ ವಿರಾಮ ನೀಡಲಾಗುತ್ತಿತ್ತು.

ಮೂರು ಬಾರಿ ನೀರು ಕಡ್ಡಾಯ
ಈ ಯೋಜನೆ ಯಶಸ್ವಿಯಾದಂತೆ ಕೇರಳದ ಅನೇಕ ಶಾಲೆಗಳಲ್ಲಿ ಜಾರಿಗೆ ಬಂದಿದೆ. ಹಂತ ಹಂತವಾಗಿ ಶಾಲೆಗಳು 'ವಾಟರ್ ಬೆಲ್' ಯೋಜನೆಯನ್ನು ಜಾರಿಗೊಳಿಸುತ್ತಿವೆ. ಇನ್ನು ಅನೇಕ ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ 'ವಾಟರ್ ಬೆಲ್' ಹೊಡೆಯಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು ಕಡ್ಡಾಯವಾಗಿ ನೀರು ಕುಡಿಯುವಂತೆ ಸೂಚಿಸಲಾಗುತ್ತದೆ. ಕೇರಳದಲ್ಲಿ ವ್ಯಾಪಕವಾಗಿರುವ ಈ ಯೋಜನೆ ಕುರಿತು ವಾಟ್ಸಾಪ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ.

ಮಂಗಳೂರಿನಲ್ಲಿ ಶಾಲೆಯಲ್ಲಿಯೂ ವಾಟರ್ ಬೆಲ್
ಮಂಗಳೂರಿನ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಶಾಲೆಯಲ್ಲಿ ಕೂಡ ದಿನಕ್ಕೆ ಮೂರು ಬಾರಿ ನೀರು ಕುಡಿಯುವಂತೆ 'ವಾಟರ್ ಬೆಲ್' ರಿಂಗಣಿಸಲಾಗುತ್ತದೆ. ಈ ಶಾಲೆಯಲ್ಲಿ ಬೆಳಿಗ್ಗೆ 10.35, 12 ಮತ್ತು ಮಧ್ಯಾಹ್ನ 2 ಗಂಟೆಗೆ ಐದು ನಿಮಿಷದ 'ವಾಟರ್ ಬೆಲ್' ವಿರಾಮ ನೀಡಲಾಗುತ್ತದೆ. ಎಷ್ಟು ನೀರು ಕುಡಿಯಬೇಕು ಎಂದು ಶಾಲೆಯ ಅಧ್ಯಾಪಕರು ಸೂಚನೆ ನೀಡದಿದ್ದರೂ ಪ್ರತಿಯೊಬ್ಬರೂ ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.

ಸುರೇಶ್ ಕುಮಾರ್ ಆಸಕ್ತಿ
ಕೇರಳದ ಯೋಜನೆಯ ಕುರಿತಾದ ಮಾಹಿತಿಯನ್ನು ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಜ್ಯದಲ್ಲಿ ಎಲ್ಲೆಡೆ ಈ ಯೋಜನೆ ಜಾರಿಗೆ ತರಲು ಆಸಕ್ತಿ ತೋರಿಸಿದ್ದಾರೆ. 'ಇದು ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ ಹೆಜ್ಜೆ. ನಮ್ಮ ರಾಜ್ಯದ ಶಾಲೆಗಳಲ್ಲಿಯೂ ಇದನ್ನು ಅನುಷ್ಠಾನಗೊಳಿಸುವ ಕುರಿತು ಯೋಚಿಸಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಶಿಕ್ಷಣ ಆಯುಕ್ತರಿಗೆ ಸೂಚನೆ ನೀಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಯಡಿಯೂರಪ್ಪ ಬೆಂಬಲ
ಸುರೇಶ್ ಕುಮಾರ್ ಅವರ ಟ್ವೀಟ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಬೆಂಬಲ ಸೂಚಿಸಿದ್ದಾರೆ. 'ಮಕ್ಕಳ ಆರೋಗ್ಯ ಸಮತೋಲನದ ದೃಷ್ಟಿಯಿಂದ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಉತ್ತಮ ಹೆಜ್ಜೆ ಇಟ್ಟಿದೆ. ಸುರೇಶ್ ಕುಮಾರ್ ಅವರಿಗೆ ಅಭಿನಂದನೆಗಳು' ಎಂದು ಯಡಿಯೂರಪ್ಪ ಟ್ವೀಟಗ್ ಮಾಡಿದ್ದಾರೆ.












Click it and Unblock the Notifications