Elephant Attack: ಆನೆ ದಾಳಿಯಿಂದ ಮೃತ ಅರಣ್ಯ ಸಿಬ್ಬಂದಿ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ, ನೌಕರಿ: ಈಶ್ವರ ಖಂಡ್ರೆ
ಬೆಂಗಳೂರು, ಜುಲೈ 12: ಬನ್ನೇರುಘಟ್ಟ ವನ್ಯಜೀವಿ ವಲಯದ ಕಲ್ಕೆರೆ ಗಸ್ತಿನಲ್ಲಿ ಕಾವಲು ಕಾಯುವಾಗ ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಸಿಬ್ಬಂದಿ ಮಾದಣ್ಣ ನಿಧನಕ್ಕೆ ಸಂತಾಪ ಸೂಚಿಸಿರುವ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಮೃತರ ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಬಳಿ ಮೃತ ಮಾದಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದ ಈಶ್ವರ ಖಂಡ್ರೆ, ಆನೆಗಳ ಇರುವಿಕೆಯನ್ನು ತಿಳಿಯುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನದಿಂದ ಇಲಾಖೆ ಒಬ್ಬ ಪ್ರಾಮಾಣಿಕ ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದರು.

ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗ ದೊರಕಿಸುವ ಪ್ರಯತ್ನ ಮಾಡುವ ಭರವಸೆಯನ್ನೂ ಸಚಿವರು ನೀಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್ ಮತ್ತಿತರರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ನಿನ್ನೆ ಮಧ್ಯರಾತ್ರಿ 12:30ರ ಸುಮಾರಿನಲ್ಲಿ ಕಲ್ಕೆರೆ ಗಸ್ತಿನ ದೊಡ್ಡ ಬಂಡೆ ಅರಣ್ಯ ಪ್ರದೇಶದ ಬಳಿ ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಕಾಡಾನೆಯ ದಾಳಿಯಿಂದ ಮಾದಣ್ಮ ಮೃತಪಟ್ಟಿದ್ದರು.
ಸಂತಾಪ ಸೂಚನೆ
ಬನ್ನೇರುಘಟ್ಟ ವನ್ಯಜೀವಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ (PCP) ಸಿಬ್ಬಂದಿ ಮಾದಣ್ಣ ಕಲ್ಕೆರೆ ಗಸ್ತಿನ ದೊಡ್ಡ ಬಂಡೆ ಅರಣ್ಯ ಪ್ರದೇಶದ ಬಳಿ ರಾತ್ರಿ 12:30ರ ಸುಮಾರಿನಲ್ಲಿ ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಕಾಡಾನೆಯ ದಾಳಿಯಿಂದ ಮೃತಪಟ್ಟಿರುವ ವಿಷಯ ತಿಳಿದು ತೀವ್ರ ನೋವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದರು.
ಆನೆಗಳ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಕಾಡಾನೆಯನ್ನು ತಕ್ಷಣ ಕಾಡಿಗೆ ಮರಳಿಸಲು ಕ್ರಮವಹಿಸುವಂತೆ ಮತ್ತು ಮೃತರ ಕುಟುಂಬಕ್ಕೆ ನಿಯಮಾನುಸಾರ ತತ್ ಕ್ಷಣವೇ ಪರಿಹಾರ ವಿತರಿಸುವಂತೆ ಸೂಚಿಸಿದ್ದೇನೆ.
ಅರಣ್ಯ ಇಲಾಖೆ ಹೆಚ್ಚುವರಿ ಬೇಡಿಕೆ: ಹಣಕಾಸು ಇಲಾಖೆಯೊಂದಿಗೆ ಸಭೆ
ಅರಣ್ಯೀಕರಣ, ವನ್ಯಜೀವಿ ಆವಾಸಸ್ಥಾನ ನಿರ್ವಹಣೆ, ಮಾನವ- ವನ್ಯಜೀವಿ ಸಂಘರ್ಷ ನಿಯಂತ್ರಣ, ಅರಣ್ಯ ಗಡಿ ಗುರುತಿಸುವಿಕೆ ಮತ್ತು ರಕ್ಷಣೆ ಸೇರಿದಂತೆ ಅರಣ್ಯ ಇಲಾಖೆಯ ಹೆಚ್ಚುವರಿ ಬೇಡಿಕೆ ಕುರಿತಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅರಣ್ಯೇತರ ಪ್ರದೇಶಗಳಲ್ಲಿ ಅರಣ್ಯೀಕರಣದ ಪ್ರಧಾನ ಕಾಮಗಾರಿ, ಮಾನವ-ವನ್ಯಜೀವಿ ಸಂಘರ್ಷ ತಡೆ ಸಂಬಂಧಿಸಿದಂತೆ ಹಲವು ವಿಸ್ತೃತ ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಲಾಗಿದ್ದು, ಇಲಾಖೆಗೆ ಹೆಚ್ಚಿನ ಹಣ ಒದಗಿಸುವ ಅಗತ್ಯ ಪ್ರತಿಪಾದಿಸಿದರು.
ರಾಜ್ಯದಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಳವಾಗುತ್ತಿದೆ. ನಾಗರಹೊಳೆ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ, ಬಂಡೀಪುರ, ಕಾವೇರಿ ವನ್ಯಜೀವಿ ಧಾಮ ಸೇರಿದಂತೆ ಹಲವು ಕಾನನಗಳಲ್ಲಿ ಸನ್ನಾ, ಲಾಂಟನಾದಂತಹ ಕಳೆ ವ್ಯಾಪಕವಾಗಿ ಪಸರಿಸುತ್ತಿದ್ದು, ಇವುಗಳನ್ನು ತೆರವು ಮಾಡಿ, ವನ್ಯಜೀವಿ ಆವಾಸಸ್ಥಾನಗಳನ್ನು ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.
ಆನೆಗಳು ಸೇರಿದಂತೆ ವನ್ಯಜೀವಿಗಳು ನಾಡಿಗೆ ಬರುತ್ತಿದ್ದು, ರೈಲ್ವೆ ಬ್ಯಾರಿಕೇಡ್, ಕಂದಕ, ಸೌರಬೇಲಿ, ತೂಗಾಡುವ ಸೌರ ಬೇಲಿ ಹಾಕುವ ಮೂಲಕ ನಿಯಂತ್ರಿಸಬಹುದಾಗಿದೆ. ಇದಕ್ಕೂ ಹೆಚ್ಚಿನ ಹಣದ ಅಗತ್ಯವಿದೆ ಎಂದರು.
ಸಭೆಯಲ್ಲಿ ಹಣಕಾಸು ಇಲಾಖೆಯ ವೆಚ್ಚ ವಿಭಾಗದ ಕಾರ್ಯದರ್ಶಿ ಡಾ.ರೇಜು ಎಂ.ಟಿ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications