ಮುಸ್ಲಿಂ ವ್ಯಾಪಾರಿ ಕಟ್ಟಿಸಿದ ದೇವಾಲಯದ ಜಾತ್ರೆಗೆ ಮುಸ್ಲಿಮರಿಗೇ ನಿರ್ಬಂಧ!
ಮಂಗಳೂರು/ಉಡುಪಿ, ಮಾರ್ಚ್ 22: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಧಾರ್ಮಿಕ ಜಾತ್ರೆಗಳ ಸಂಭ್ರಮ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬ್ರಹ್ಮಕಲಶ, ವಾರ್ಷಿಕ ಜಾತ್ರೆ, ಕೋಲ, ನೇಮ, ನಾಗಮಂಡಲ ಮುಂತಾದವು ಸೀಮಿತ ಭಕ್ತರ ಮಧ್ಯೆ ನಡೆಯುತ್ತಿತ್ತು.
ಈಗ ಕೊರೊನಾ ನಿರ್ಬಂಧ ಸಡಿಲಗೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಅದರಂತೇ ಸುಗ್ಗಿ (ಶಿಶಿರ ಖುತು) ಮಾಸದಲ್ಲಿ ಹಲವು ಪುರಾಣ ಪ್ರಸಿದ್ದ ದೇವಾಲಯಗಳ ವಾರ್ಷಿಕ ಜಾತ್ರೆ/ರಥವೂ ನಡೆಯುತ್ತದೆ.
Recommended Video

ಮಂಗಳೂರು - ಉಡುಪಿ ಹೆದ್ದಾರಿಯಲ್ಲಿರುವ ಮೂಲ್ಕಿಯಲ್ಲಿರುವ ಐತಿಹಾಸಿಕ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲೂ ವಾರ್ಷಿಕ ಜಾತ್ರೆ ಕಳೆಗಟ್ಟಲು ಆರಂಭವಾಗಿದೆ. ಮಾರ್ಚ್ 24ರಂದು ಇಲ್ಲಿ ಉತ್ಸವ ನಡೆಯಲಿದ್ದು, ಅದರ ಪೂರ್ವಭಾವಿ ಕಾರ್ಯಕ್ರಮಗಳು ಮಾರ್ಚ್ 23ರಿಂದ ಆರಂಭವಾಗಲಿದೆ.
ಈ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ವ್ಯಾಪಾರ ನಡೆಸುವ ವಿಚಾರದಲ್ಲಿ ಹಿಂದೂ ಸಂಘಟನೆಗಳು ನಿರ್ಬಂಧವನ್ನು ವಿಧಿಸಿದೆ. ಕರಾವಳಿ ಭಾಗದಲ್ಲಿ ತೀರಾ ಅಪರೂಪ ಎನ್ನುವಂತೆ ಈ ಬಾರಿ ಅನ್ಯ ಧರ್ಮೀಯ ವ್ಯಾಪಾರಸ್ಥರಿಗೆ ದೇವಾಲಯದ ಉತ್ಸವದಲ್ಲಿ ವ್ಯಾಪಾರ ನಡೆಸುವುದಕ್ಕೆ ನಿರ್ಬಂಧ ಹೇರುತ್ತಿರುವುದು ಈ ದೇವಾಲಯದಲ್ಲಿ ಮಾತ್ರವಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಬಪ್ಪನಾಡು ದೇವಾಲಯದ ಶತಮಾನಗಳ ಇತಿಹಾಸದ ಪ್ರಕಾರ ಈ ದೇವಾಲಯವನ್ನು ನಿರ್ಮಿಸಿದ್ದೇ ಮುಸ್ಲಿಂ ವ್ಯಾಪಾರಿಯೊಬ್ಬರು.

ಲಿಂಗರೂಪದಲ್ಲಿ ದುರ್ಗಾಪರಮೇಶ್ವರಿಯನ್ನು ಬಪ್ಪನಾಡು ಕ್ಷೇತ್ರದಲ್ಲಿ ಆರಾಧಿಸಲಾಗುತ್ತದೆ
ಲಿಂಗರೂಪದಲ್ಲಿ ದುರ್ಗಾಪರಮೇಶ್ವರಿಯನ್ನು ಬಪ್ಪನಾಡು ಕ್ಷೇತ್ರದಲ್ಲಿ ಆರಾಧಿಸಲಾಗುತ್ತದೆ. ಇಸವಿ 1141 ರಲ್ಲಿ ಲಭ್ಯವಾದ ಶಾಸನದ ಪ್ರಕಾರ, ಆ ಕಾಲದಲ್ಲಿಯೇ ಈ ದೇವಸ್ಥಾನ ಸರ್ವಧರ್ಮದವರಿಂದ ಪೂಜಿಸಲಾಗುತ್ತಿತ್ತು. ತುಳುನಾಡಿನಲ್ಲಿ ಉಳ್ಳಾಲ್ತಿ ( ಯಜಮಾನಿ) ಎಂದು ಕರೆಯಲ್ಪಡುವ ಈ ದೇವಾಲಯದಲ್ಲಿ ಮುಸ್ಲಿಂ ಬಾಂಧವರೂ ಪ್ರಸಾದ ಸ್ವೀಕರಿಸಿದ್ದು ಉಲ್ಲೇಖವಾಗಿದೆ. ಧಾರ್ಮಿಕ ಸದ್ಭಾವನೆಯ ಕೇಂದ್ರದಂತಿದ್ದ ಈ ದೇವಾಲಯದಲ್ಲಿ ಈ ಬಾರಿಯ ಉತ್ಸವಕ್ಕೆ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ನಿರ್ಬಂಧ ವಿಧಿಸಲಾಗಿದೆ. ಕ್ಷೇತ್ರದ ಇತಿಹಾಸದ ಪ್ರಕಾರ ಈ ದೇವಾಲಯವನ್ನು ನಿರ್ಮಿಸಿದ್ದು ಕೇರಳದ ಮುಸ್ಲಿಂ ವ್ಯಾಪಾರಿ.

ಬಪ್ಪಬ್ಯಾರಿಯ ದೋಣಿ ಮೂಲ್ಕಿಯಲ್ಲಿ ನದಿ ಮಧ್ಯೆ ನಿಲ್ಲುತ್ತದೆ
ಶಾಂಭವಿ ನದಿಯ ದಡದಲ್ಲಿರುವ ಈ ದೇವಾಲಯವನ್ನು ಕೇರಳದ ಬಪ್ಪಬ್ಯಾರಿ ಎನ್ನುವ ವ್ಯಾಪಾರಿ ನಿರ್ಮಿಸಿದ ಎನ್ನುವುದು ದೇವಾಲಯದಲ್ಲೇ ಹೇಳಲಾಗುವ ಇತಿಹಾಸ. ವ್ಯಾಪಾರದ ಕಾರಣಕ್ಕಾಗಿ ಶಾಂಭವಿ ನದಿಯ ಮೂಲಕ ನೌಕಾಯಾನ ಮಾಡುತ್ತಿದ್ದ ಬಪ್ಪಬ್ಯಾರಿಯ ದೋಣಿ ಮೂಲ್ಕಿಯಲ್ಲಿ ನದಿ ಮಧ್ಯೆ ನಿಲ್ಲುತ್ತದೆ. ನದಿಯ ಪ್ರವಾಹದಿಂದ ಕುಸಿದಿದ್ದ ದೇವಾಲಯದ ಐದು ಲಿಂಗಗಳಿಂದ ದೋಣಿ ಮುಂದಕ್ಕೆ ಹೋಗುತ್ತಿರಲಿಲ್ಲ. ಆ ವೇಳೆ, ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದಾಗ, ಗಾಭರಿಗೊಳ್ಳುವ ಬಪ್ಪಬ್ಯಾರಿ ನಮಾಜ್ ಮಾಡಿ ದೋಣಿಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಮುಂದಿನ ಸ್ಲೈಡ್ ನೋಡಿ..

ಬಪ್ಪನಾಡು ದೇವಾಲಯದ ಜಾತ್ರೆಯಲ್ಲಿ ಹಿಜಾಬ್ ಅಪಸ್ವರ ಎದ್ದಿದೆ
ಬಪ್ಪಬ್ಯಾರಿ ದೋಣಿಯಲ್ಲಿ ಮಲಗಿರುವಾಗ ಕನಸಿನಲ್ಲಿ ಬರುವ ದೇವತೆ ತನಗೆ ಗುಡಿ ಕಟ್ಟಿಸಿಕೊಡುವಂತೆ ಆದೇಶಿಸುತ್ತಾಳೆ. ಸ್ಥಳೀಯ ಜೈನ ಆಡಳಿತಗಾರರ ಸಹಕಾರದೊಂದಿಗೆ ಬಪ್ಪಬ್ಯಾರಿ ತನ್ನ ಆಸ್ತಿಯನ್ನೆಲ್ಲ ದೇವಾಲಯದ ನಿರ್ಮಾಣಕ್ಕೆ ನೀಡುತ್ತಾನೆ. ಬಪ್ಪಬ್ಯಾರಿಯ ಈ ಕೆಲಸದ ಗೌರವಾರ್ಥ ಈ ಕ್ಷೇತ್ರವನ್ನು ಬಪ್ಪನಾಡು ಎಂದು ಕರೆಯಲಾಗುತ್ತದೆ ಎನ್ನುವುದು ದೇವಾಲಯದ ಇತಿಹಾಸ. ವಾರ್ಷಿಕ ಉತ್ಸವದ ಮೊದಲ ಪ್ರಸಾದವನ್ನು ಬಪ್ಪಬ್ಯಾರಿಯ ಕುಟುಂಬಕ್ಕೆ ನೀಡುವುದೂ ಕ್ಷೇತ್ರದ ಪದ್ದತಿ. ಶಾಂತಿ ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದ್ದ ಈ ದೇವಾಲಯದ ಈ ಬಾರಿಯ ಜಾತ್ರೆಯಲ್ಲಿ ಹಿಜಾಬ್ ಅಪಸ್ವರ ಎದ್ದಿದೆ.

ಕಾಪು ಮಾರಿಗುಡಿಯಲ್ಲಿ ಆರಂಭವಾದ ನಿರ್ಬಂಧ
ಹಿಜಾಬ್ ವಿಚಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದಿಗೆ ಕರೆನೀಡಿದ್ದವು. ಆ ಸಂದರ್ಭದಲ್ಲಿ ಹಲವು ಮುಸ್ಲಿಂ ವ್ಯಾಪಾರಸ್ಥರು ಇದಕ್ಕೆ ಬೆಂಬಲ ನೀಡಿದ್ದರು. ಈ ಕಾರಣಕ್ಕಾಗಿ, ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯಲ್ಲಿ ಆರಂಭವಾದ ನಿರ್ಬಂಧದ ಪರ್ವ ಕರಾವಳಿಯ ಹಲವು ದೇವಾಲಗಳಿಗೂ ಹರಡಿದೆ. "ಹಲವು ವರ್ಷಗಳಿಂದ ಜಾತ್ರೆಯಲ್ಲಿ ನಾವು ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದೆವು, ಈ ಬಾರಿ ಹಲವು ದೇವಾಲಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ನಾವು ಬೀದಿ ವ್ಯಾಪಾರಿಗಳು, ನಿರ್ಬಂಧವನ್ನು ತೆಗೆದು ಹಾಕಬೇಕು"ಎಂದು ಉಡುಪಿ ಜಿಲ್ಲಾ ಬೀದಿ ವ್ಯಾಪಾರಿಗಳ ಮುಸ್ಲಿಂ ಸಂಘಟನೆ ಮನವಿ ಮಾಡಿಕೊಂಡಿದೆ.












Click it and Unblock the Notifications