ಜುಲೈ 5ರಿಂದ ಮಾಲ್ಗಳು ಓಪನ್; ಷರತ್ತುಗಳು ಅನ್ವಯ
ಬೆಂಗಳೂರು, ಜೂನ್ 29; ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾಲ್ಗಳನ್ನು ತೆರೆಯಲು ಅನುಮತಿಯನ್ನು ನೀಡಿಲ್ಲ.
ಮಂಗಳವಾರ ಮಾಲ್ ಅಸೋಸಿಯೇಷನ್ನ ಸದಸ್ಯರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದರು. ಮಾಲ್ಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಚರ್ಚೆ ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿ ಯಡಿಯೂರಪ್ಪ, "ಯಾವ ರೀತಿಯಲ್ಲಿ ಮಾಲ್ಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಚರ್ಚಿಸಲಾಗಿದೆ. ಆದರೆ ಅಂತಿಮ ತೀರ್ಮಾನ ಕೈಗೊಂಡಿಲ್ಲ" ಎಂದು ಹೇಳಿದರು.

"ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ. ಇನ್ನಷ್ಟು ವಿನಾಯಿತಿಗಳನ್ನು ನೀಡುವ ಬಗ್ಗೆ ನಾವು ತೀರ್ಮಾನ ಕೈಗೊಳ್ಳಲಿದ್ದೇವೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಗರುಡಾ ಮಾಲ್ನ ಜನರಲ್ ಮ್ಯಾನೇಜರ್ ನಂದೀಶ್, "9 ರಿಂದ 6 ಗಂಟೆಯ ತನಕ ಮಾಲ್ಗಳನ್ನು ತೆರೆಯುವುದು ಸಾಧ್ಯವಿಲ್ಲ. 9 ರಿಂದ 9 ಗಂಟೆಯ ತನಕ ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತದೆ" ಎಂದು ಹೇಳಿದ್ದರು.
ಕರ್ನಾಟಕ ಸರ್ಕಾರ ಜೂನ್ 21ರಿಂದಲೇ ಲಾಕ್ಡೌನ್ ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಿದೆ. ಆದರೆ, ಹವಾನಿಯಂತ್ರಿತ ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಜುಲೈ 5ರ ಬಳಿಕ ಹೊಸ ಮಾರ್ಗಸೂಚಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.












Click it and Unblock the Notifications