ಪರಿಹಾರದ ಹಣ ಬಿಡುಗಡೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ: ಬಿಜೆಪಿ ನಾಯಕ ಹೀಗೆ ಹೇಳಿದ್ಯಾಕೆ?
ಕೋಲಾರ, ಜನವರಿ 30: ರಾಜ್ಯದಲ್ಲಿ ಬರಗಾಲ ವ್ಯಾಪ್ತಿಸಿ ಆರೇಳು ತಿಂಗಳು ಕಳೆದರೂ ಸಹ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ಈವರೆಗೆ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಆರ್.ಅಶೋಕ್, ಅಲ್ಪಸಂಖ್ಯಾತರ ಅಭಿವೃದ್ದಿಗೆ 1000 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ 54 ಕೋಟಿ ರೂ ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್ನಲ್ಲಿ ಬರ ಘೋಷಣೆಯಾದಾಗ ಬಿಜೆಪಿ ಸರ್ಕಾರವು 3 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ರೈತರಿಗೆ 20 ರಿಂದ 30 ಸಾವಿರ ರೂ ಸೇರಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೋಲಾರ ಜಿಲ್ಲೆಗೆ ಕೇವಲ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲು ನಾಚಿಕೆಯಾಗಬೇಕು ಎಂದರು.

ರಾಜ್ಯದಲ್ಲಿನ 39 ನಿಗಮ ಮಂಡಳಿ ರಚನೆಗೆ 150 ಕೋಟಿ ರೂ ವೆಚ್ಚ ಮಾಡಲು ಹಣವಿದೆ. ಆದರೆ ರೈತರ ಪರಿಹಾರಕ್ಕೆ, ಅಭಿವೃದ್ದಿಗಳಿಗೆ ಹಣ ಇರುವುದಿಲ್ಲವೇ? ಕಾಂಗ್ರೆಸ್ ಆಡಳಿತದಲ್ಲಿ ದಿವಾಳಿ ಆಗಿದೆಯೇ? ಸರ್ಕಾರವು ಸೋಮಾರಿತನದ ಪರಮಾವಧಿಯಾಗಿದೆ. ಕಳೆದ 7 ತಿಂಗಳಿಂದ ಗ್ಯಾರಂಟಿ ಜಪದಲ್ಲಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಅಭಿವೃದ್ದಿ ಕಡೆಗಣಿಸಿದೆ, ಒಂದು ರಸ್ತೆಯಿಲ್ಲ, ಒಂದು ಡ್ಯಾಮ್ ಇಲ್ಲ ಎಂದು ದೂರಿದರು.
ಮದ್ಯದ ಬಾಟಲ್ ಕ್ವಾಟರ್ಗೆ ೪40 ರೂ ಬಿಯರ್ ಒಂದು ಬಾಟಲ್ಗೆ 30 ರೂ ಏರಿಕೆ ಮಾಡಿದೆ. ತಿಂಗಳಿಗೆ ಗಂಡನಿಗೆ 3 ಸಾವಿರ ರೂ ಹೊರೆ ಹಾಕಿ ಪತ್ನಿಗೆ 2 ಸಾವಿರ ರೂ ನೀಡುವ ಮೂಲಕ 1 ಸಾವಿರ ರೂ ಸಿದ್ದರಾಮಯ್ಯ ಜೇಬಿಗೆ ಇಳಿಸಿ ಅದನ್ನು ಸೋನಿಯ ಗಾಂಧಿಗೆ ರವಾನಿಸಲಾಗುತ್ತಿದೆ ಎಂದು ವ್ಯಂಗವಾಡಿದರು. ಬೊಮ್ಮಾಯಿ ಆಡಳಿತದಲ್ಲಿ ಸಾಲ ಮಾಡಿಲ್ಲ, ಆದರೆ ಸಿದ್ದು ಸರ್ಕಾರ ಪಾಪರ್ ಆಗಿದೆ. ಸಾಲದಲ್ಲಿ ಬಜೆಟ್ ಮಂಡಿಸಿ ಜನರ ಮೇಲೆ ಸಾಲದ ಹೊರೆ ಹಾಕುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅಧಿಕಾರವನ್ನು ಬಿಡಬೇಕು. ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೋಟಿ ಮಾಡುತ್ತಿದೆ ಎಂದು ದೂರಿದರು.

ಮೋದಿ ಸರ್ಕಾರವು 500 ವರ್ಷಗಳ ವಿವಾದ ಬಗೆಹರಿಸಿ ರಾಮಮಂದಿರ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ, ಆದರೆ ಕಾಂಗ್ರೆಸ್ ನವರು ರಾಮ ಮಂದಿರ ವಿಷಯದಲ್ಲಿ ನ್ಯಾಯಾಲಯದಲ್ಲಿ ರಾಮನ ಜನನ ಪ್ರಮಾಣ ಪತ್ರ ಕೇಳುವಂತ ಮೂರ್ಖತನ ಪ್ರಶ್ನೆ ಮಾಡಿ ಛೀಮಾರೆಗೆ ಒಳಗಾದರು. ಶ್ರೀರಾಮನ ವಿಷಯ ಮುಗಿದಿದ್ದು ಈಗ ಮಂಡ್ಯದಲ್ಲಿ ಹನುಮನ ವಿಷಯಕ್ಕೆ ಕೈಹಾಕಿ ವಿವಾದ ಸೃಷ್ಠಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ 6 ತಿಂಗಳ ಹಿಂದೆಯೇ ಸಂಬಂಧಪಟ್ಟ ಪಂಚಾಯಿತಿಯಿಂದ ಪರವನಾಗಿ ಪಡೆದ ಗ್ರಾಮಸ್ಥರು ಚಂದ ಎತ್ತಿ ಲಕ್ಷಾಂತರ ರೂ ಕ್ರೋಢೀಕರಿಸಿಕೊಂಡು ನಿರ್ಮಿಸಿರುವಂತ ಧ್ವಜ ಸ್ಥಂಬದಲ್ಲಿ ಹನುಮನ ಬಾವುಟ ಹಾರಿಸಿರುವುದನ್ನು ರಾತ್ರೋರಾತ್ರಿ ಪೊಲೀಸರಿಂದ ಬಾವುಟವನ್ನು ತೆರವು ಮಾಡಿಸಿ ರಾಷ್ಟ್ರ ಧ್ವಜವನ್ನು ಹಾರಿಸಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯದ ನಾಟಕ ಮಾಡಿ ಅಮಾಯಕ ಜನರನ್ನು ಬಲಿ ಪಶು ಮಾಡುತ್ತಿದ್ದಾರೆ ಎಂದು ದೂರಿದರು. ಮೋದಿ ಗಡಿ ಭಾಗವಾದ ಕಾಶ್ಮೀರದಲ್ಲಿ ಭಯೋತ್ಸಾಧಕತೆ ನಿಯಂತ್ರಿಸಿ ಸ್ವಾಧೀನಕ್ಕೆ ಪಡೆದು ಅಭಿವೃದ್ದಿ ಪಡಿಸುತ್ತಿದ್ದಾರೆ, ರಾಷ್ಟ್ರದಲ್ಲಿ ರೈಲ್ವೆ, ರಸ್ತೆ, ಸೇರಿದಂತೆ ಬರ ನಿರ್ವಹಣೆ, ರೈತರಿಗೆ ಪರಿಹಾರ ನೀಡಿದ್ದಾರೆ, ಈ ಹಿಂದಿನ ಮನಮೋಹನ್ ಸರ್ಕಾರದಲ್ಲಿ ಕೇವಲ 3 ಸಾವಿರ ಕೋಟಿ ರೂ. ರೈತರಿಗೆ ಪರಿಹಾರ ನೀಡಲಾಗಿತ್ತು, ಆದರೆ ಮೋದಿ ಆಡಳಿತದಲ್ಲಿ 12 ಸಾವಿರ ಕೋಟಿ ರೂ ರೈತರಿಗೆ ಪರಿಹಾರ ನೀಡಿದೆ ಎಂದರು.












Click it and Unblock the Notifications