Mineral Tax: ಕರ್ನಾಟಕದ ಪಾಲಿನ 'ಖನಿಜ ತೆರಿಗೆ' ವಾಪಾಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ
ಬೆಂಗಳೂರು, ಆಗಸ್ಟ್ 20: ಖನಿಜಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಷ್ಟು ವರ್ಷ ಸಂಗ್ರಹಿಸಿದ್ದ ತೆರಿಗೆ ಹಣ ಮರಳಿ ನೀಡಬೇಕು ಎಂದು ಕೆಲವು ರಾಜ್ಯಗಳು ಕೇಳಿದ್ದನ್ನು ನ್ಯಾಯಾಲಯ ಪುರಸ್ಕರಿಸಿದೆ. ಹೀಗಾಗಿ ಇದುವರೆಗೆ ಸಂಗ್ರಹಿಸಿರುವ ಖನಿಜಗಳ ಮೇಲಿನ ತೆರಿಗೆಯನ್ನು ಮರಳಿ ರಾಜ್ಯಕ್ಕೆ ನೀಡುವಂತೆ ಆದೇಶಿಸಿದೆ. ಇದರ ಬೆನ್ನಲ್ಲೆ ಕರ್ನಾಟಕದ ಪಾಲು ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಹೌದು, ಜಾರ್ಖಂಡ್ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಖನಿಜ ಸಮೃದ್ಧ ಭೂಮಿ ಮೇಲಿನ ರಾಯಧನದ ಹಿಂದಿನ ಬಾಕಿ ಪಡೆಯುವಂತೆ ಸಿಎಂ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಪತ್ರ ಬರೆದಿದ್ದಾರೆ.

2005 ಏಪ್ರಿಲ್ 1ರ ನಂತರ ಕೇಂದ್ರ ಸರ್ಕಾರ ಮತ್ತು ಗಣಿ ಕಂಪನಿಗಳಿಂದ ಖನಿಜ ಸಮೃದ್ಧ ಭೂಮಿ ಮೇಲಿನ ರಾಯಧನದ ವಸೂಲಿ ಮಾಡಿಕೊಂಡಿದೆ. ಆ ಹಣವನ್ನು ಮರಳಿ ಪಡೆಯಬಹುದೆಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅನುಮತಿ ನೀಡಿದೆ. ಇದು ಕರ್ನಾಟಕದ ಪಾಲಿಗೆ ವರದಾನವಾಗಿದೆ.
ಪಾವತಿಗೆ 12 ವರ್ಷಗಳ ಗಡುವು
ಕೇಂದ್ರ ಮತ್ತು ಗಣಿ ಕಂಪನಿಗಳು ಮುಂದಿನ 12 ವರ್ಷಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಖನಿಜ ಸಮೃದ್ಧ ರಾಜ್ಯಗಳಿಗೆ ಬಾಕಿ ಪಾವತಿಸಬಹುದು ಎಂದು ನ್ಯಾಯಾಲಯ ಹೇಳಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪಾವತಿಸಿದ ತೆರಿಗೆ ಮರಳಿ ಪಡೆಯುವುದರಿಂದ ರಾಜ್ಯಕ್ಕೆ ಭಾರಿ ಮೊತ್ತದ ಬಾಕಿ ರಾಯಧನ ಸಿಗಲಿದೆ. ಈ ಬಾಕಿ ಹಣವನ್ನು ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಪ್ರವೃತ್ತರಾಗಬೇಕು. ರಾಜ್ಯದ ಅಭಿವೃದ್ಧಿಗೆ, ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ.

ಜಾರ್ಖಂಡ್ಗೆ ರೂ.1.36 ಲಕ್ಷ ಕೋಟಿ ಸಿಗಲಿದೆ
ಉಚ್ಛ ನ್ಯಾಯಾಲಯದ ಮಹತ್ವದ ತೀರ್ಪಿನ ನಂತರ ಜಾರ್ಖಂಡ್ಗೆ 1.36 ಲಕ್ಷ ಕೋಟಿ ರೂಪಾಯಿ ಬಾಕಿ ಬರಲಿದೆ. ಈ ಹಣದಲ್ಲಿ ಜಾರ್ಖಂಡ್ ಅಭಿವೃದ್ಧಿ ಹಾಗೂ ರಾಜ್ಯದ ಕಲ್ಯಾಣಕ್ಕೆ ವಿನಿಯೋಗಿಸುವುದಗಿ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.
ಇದೇ ಮಾದರಿಯಲ್ಲಿ ಕರ್ನಾಟಕದ ಪಾಲಿಗೆ ಬರಬೇಕಿರುವ ಮೊತ್ತವನ್ನು ಕೇಂದ್ರದಿಂದ ಪಡೆಯಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಬೇಕು ಎಂದು ಪತ್ರದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೇಂದ್ರಕ್ಕೆ 70,000 ಕೋಟಿ ಹಣ ನಷ್ಟ?
ಸದ್ಯ ರಾಜ್ಯಗಳು ಕೇಂದ್ರಕ್ಕೆ ತಾವು ಪಾವತಿಸಿದ ಹಣ ಮರಳಿ ಪಡೆಯಲು ಕೇಳಿದರೂ ಸಹಿತ ಅದು ಸಿಗುವುದು 2026 ಏಪ್ರಿಲ್ 1ರಿಂದ ಹಣ ಮರಳಿಸಲು ಕೇಂದ್ರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಸುಮಾರು 12 ವರ್ಷಗಳ ಅವಧಿಯಲ್ಲಿ ಕೇಂದ್ರ ಆಯಾ ರಾಜ್ಯಗಳಿಗೆ ಹಣ ಹಿಂತಿರುಗಿಸಬೇಕು. ಈ ಮೂಲಕ ಕೇಂದ್ರ ಸರ್ಕಾರ ಸುಮಾರು ರೂ. 70000 ಕೋಟಿ ಹಣ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಕರ್ನಾಟಕಕ್ಕೆ ಈ ಹಣ ಮರಳಿ ಬಂದರೂ ಅಭಿವೃದ್ಧಿ ಕಾರ್ಯಕಗಳಿಗೆ ಮೀಸಲಾಗುತ್ತದೆಯೋ ಇಲ್ಲ ಗ್ಯಾರೆಂಟಿ ಯೋಜನೆಗಳ ಬಳಕೆಗೆ ಸಿಮೀತವಾಗಲಿದೆಯೋ ಎಂದು ಕಾದು ನೋಡಬೇಕಿದೆ.












Click it and Unblock the Notifications