ಶಾಸಕರು ಹೊಡೆದಾಡಿ ರಂಪಾಟ ಮಾಡಿಕೊಳ್ಳಲು ಕಾರಣಗಳೇನು?
ಬೆಂಗಳೂರು, ಜನವರಿ 21: ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಶಾಸಕರ ಹೊಡೆದಾಟದ ಘಟನೆ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಂದೇ ಭಾಗದ ಇಬ್ಬರು ಶಾಸಕರ ಜಗಳ ವೈಯಕ್ತಿಕ ಕಾರಣಗಳಿಂದಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಜಗಳ ರೆಸಾರ್ಟ್ನಲ್ಲಿ ಬೇರೆ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ನಡೆದಿದ್ದರೂ, ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಹಲವು ವರ್ಷಗಳಿಂದ ತಣ್ಣನೆ ಹೊಗೆಯಾಡುತ್ತಿದ್ದ ಹಗೆತನವೂ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಏಟು ತಿಂದು ಮಲಗಿರುವ ಶಾಸಕ ಆನಂದ್ ಸಿಂಗ್ ನೀಡಿದ್ದಾರೆ ಶಾಕಿಂಗ್ ಹೇಳಿಕೆ
ತಮಗೆ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಬಳ್ಳಾರಿ ಭಾಗದ ಶಾಸಕರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದರು. ಅವರಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಕಂಪ್ಲಿ ಶಾಸಕ ಜೆ.ಎನ್. ಆನಂದ್ ಮತ್ತು ಹಗರಿಬೊಮ್ಮನಹಳ್ಳಿ ಭೀಮಾ ನಾಯ್ಕ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಪಕ್ಷದ ಕುರಿತ ಅಸಮಾಧಾನದಿಂದ ಈ ಶಾಸಕರು ಬಿಜೆಪಿ ಸೇರ್ಪಡೆಯಾಗಲು ಉದ್ದೇಶಿಸಿದ್ದರು. ಈ ಮೂವರಲ್ಲಿ ಆನಂದ್ ಸಿಂಗ್ ಕೊನೆಯ ಹಂತದಲ್ಲಿ ಅತೃಪ್ತ ಶಾಸಕರ ತಂಡದಿಂದ ಹೊರಗೆ ಬಂದಿದ್ದರು. ಆದರೆ, ಗಣೇಶ್ ಮತ್ತು ಭೀಮಾ ನಾಯ್ಕ್ ಮುಂಬೈಗೆ ಹೋಗಿದ್ದರು.
ಶಾಸಕರ ನಡುವಿನ ಗಲಾಟೆ : ಆನಂದ್ ಸಿಂಗ್ ಫೋಟೋ ವೈರಲ್
ಅತೃಪ್ತ ಶಾಸಕರ ಈ ಎಲ್ಲ ಚಟುವಟಿಕೆಗಳ ಬಗ್ಗೆ ಆನಂದ್ ಸಿಂಗ್ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ಇದರಿಂದ ಪಕ್ಷದ ವಲಯದಲ್ಲಿ ಅವರ ಬಗ್ಗೆ ಗುಸು ಗುಸು ಹರಿದಾಡುತ್ತಿದ್ದವು. ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಹಲವು ವರ್ಷಗಳಿಂದ ಹಿಗೆಯಾಡುತ್ತಿದ್ದ ಆಕ್ರೋಶ ಹೊರಗೆ ಬರಲು ಇದು ಕಾರಣ ಎನ್ನಲಾಗಿದೆ.
ಸ್ಥಳೀಯ ಮಟ್ಟದಲ್ಲಿ ಭೀಮಾ ನಾಯ್ಕ್ ಹಾಗೂ ಗಣೇಶ್ ಅವರೊಂದಿಗೆ ಆನಂದ್ ಸಿಂಗ್ ಮನಸ್ತಾಪ ಹೊಂದಿದ್ದರು. ಬಿಎಂಎಂ ಗಣಿ ಕಂಪೆನಿಗೆ ಸಂಬಂಧಿಸಿದಂತೆ ಆನಂದ್ ಸಿಂಗ್ ಹಾಗೂ ಭೀಮಾ ನಾಯ್ಕ್ ನಡುವೆ ವೈಮನಸ್ಸು ಉಂಟಾಗಿತ್ತು. ಈ ಜಗಳ ವಿಕೋಪಕ್ಕೆ ಹೋಗಿತ್ತು. ಹಗರಿಬೊಮ್ಮನಹಳ್ಳಿಯಲ್ಲಿ ಭೀಮಾ ನಾಯ್ಕ್ ಅವರ ಮನೆ ಎದುರೇ ಕಚೇರಿ ತೆರೆದಿದ್ದರು. ಅಲ್ಲದೆ ಕ್ಷೇತ್ರದ ವಿಚಾರದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್ನಿಂದ ಅಮಾನತು
ಕಂಪ್ಲಿಯ ಗಣೇಶ್ ಅವರ ಕ್ಷೇತ್ರದ ವಿಚಾರದಲ್ಲಿಯೂ ಆನಂದ್ ಸಿಂಗ್ ಮೂಗು ತೂರಿಸುತ್ತಿದ್ದರು ಎನ್ನಲಾಗಿದೆ. ಆನಂದ್ ಸಿಂಗ್ ಅಳಿಯ ಸಂದೀಪ್ ಸಿಂಗ್ ಅವರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ತಗಾದೆ ಉಂಟಾಗಿತ್ತು. ಕಂಪ್ಲಿ ಮತ್ತು ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರಗಳು ವಿಜಯನಗರಕ್ಕೆ ಹೊಂದಿಕೊಂಡಂತಿವೆ. ಹೀಗಾಗಿ ಆನಂದ್ ಸಿಂಗ್ ಈ ಕ್ಷೇತ್ರಗಳಲ್ಲಿಯೂ ತಮ್ಮ ಪ್ರಭಾವ ಬೀರಲು ಬಯಸುತ್ತಿದ್ದಾರೆ.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಎಫ್ಐಆರ್
ಆನಂದ್ ಸಿಂಗ್ ಅವರ ವರ್ತನೆಯಿಂದ ಭೀಮಾ ನಾಯ್ಕ್ ಮತ್ತು ಗಣೇಶ್ ಸಿಟ್ಟಿಗೆದ್ದಿದ್ದರು. ರೆಸಾರ್ಟ್ನಲ್ಲಿ ಬಳ್ಳಾರಿ ಜಿಲ್ಲಾ ಗಣಿ ನಿಧಿ ಹಂಚಿಕೆ ವಿಚಾರ ಕೂಡ ಚರ್ಚೆಗೆ ಬಂದಿದ್ದರಿಂದ ಕೆರಳಿದ ಶಾಸಕರು ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.