ಗೃಹ ಜ್ಯೋತಿ: ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಬಳಕೆದಾರರಿಗೆ ಮಹತ್ವದ ಸೂಚನೆ
ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಗೃಹ ಜ್ಯೋತಿ ಯೋಜನೆಗೆ ನಿರೀಕ್ಷೆಗೂ ಮೀರಿಸ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆಯ ಫಲಾನುಭವಿಗಳಾಗಲು ಅರ್ಜಿ ನೋಂದಣಿಗೆ ಚಾಲನೆ ನೀಡಿದ ಒಂದು ವಾರದಲ್ಲೇ 51 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಜುಲೈ ತಿಂಗಳಿನಲ್ಲಿ ಬಳಸುವ ವಿದ್ಯುತ್ಗೆ ಆಗಸ್ಟ್ ತಿಂಗಳಿನಿಂದ ಬರುವ ಬಿಲ್ಗೆ ಯೋಜನೆ ಅನ್ವಯವಾಗಲಿದೆ. ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ವಿದ್ಯುತ್ ಬಳಸುವ ಗ್ರಾಹಕರು ಉಚಿತ ಸೌಲಭ್ಯದ ಲಾಭ ಪಡೆಯಬಹುದಾಗಿದೆ.

ಒಂದು ವಾರ ಕಳೆದರೂ ಗೃಹ ಜ್ಯೋತಿ ವಿಚಾರದಲ್ಲಿ ಇನ್ನೂ ಹಲವು ಗೊಂದಲಗಳು ಇರುವುದು ಸಹಜ. ಈಗಾಗಲೇ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯಡಿ ವಿದ್ಯುತ್ ಪಡೆಯುತ್ತಿರುವ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬಹುದಾ? ಅರ್ಜಿ ಸಲ್ಲಿಸಬಹುದಾ? ಎನ್ನುವ ಪ್ರಶ್ನೆಗಳು ಕಾಡುವುದು ಸಹಜ ಇದಕ್ಕೆಲ್ಲಾ ಉತ್ತರ ಈ ವರದಿಯಲ್ಲಿದೆ.
ಮತ್ತೊಮ್ಮೆ ನೋಂದಾಯಿಸಿಕೊಳ್ಳಬೇಕು
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಅಡಿಯಲ್ಲಿ ಪ್ರಯೋಜನವನ್ನು ಪಡೆಯುತ್ತಿರುವ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಬೇಕು ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.
ಇದರ ಪ್ರಕಾರ ನೀವು ಈಗಾಗಲೇ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೂ, ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಲು ನೋಂದಣಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
ನಕಲಿ ಲಿಂಕ್ಗಳ ಬಗ್ಗೆ ಎಚ್ಚರಿಕೆ
ರಾಜ್ಯಾದ್ಯಂತ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಉತ್ತಮವಾಗಿ ನಡೆಯುತ್ತಿದೆ. ಈ ನಡುವೆ ಹಲವು ಸೈಬರ್ ವಂಚಕರು ನಕಲಿ ಲಿಂಕ್ಗಳನ್ನು ಸೃಷ್ಟಿಸಿ ಹರಿಬಿಟ್ಟಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಮಾತ್ರ ನೋಂದಣಿ ಮಾಡುವಂತೆ ಮನವಿ ಮಾಡಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಉಚಿತವಾಗಿ ನೋಂದಣಿ ಮಾಡಲಾಗುತ್ತಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಯಾವುದೇ ಬಾಡಿಗೆ ಕರಾರು ಪತ್ರವನ್ನು ನೀಡುವಂತಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
"ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ಬಳಸಿಕೊಂಡು www.sevasindhugs.karnataka.gov.in ವೆಬ್ಸೈಟ್ಗೆ ಭೇಟಿ ಕೊಟ್ಟು ನೋಂದಣಿ ಮಾಡಬಹುದಾಗಿದೆ. ಬೆಸ್ಕಾಂನ ಎಲ್ಲಾ ಸೇವೆಗಳ ಕುರಿತಾದ ಮಾಹಿತಿಗಾಗಿ ಬೆಸ್ಕಾಂ ಮಿತ್ರ ಆ್ಯಪ್ ಅನ್ನು ಡೌನ್'ಲೋಡ್ ಮಾಡಿಕೊಳ್ಳಬಹುದಾಗಿದೆ.












Click it and Unblock the Notifications