ಈ ಮಗು ಶಾಸಕರಿಗೆ ಹುಟ್ಟಿಲ್ಲ ಎಂದು ವೀರಭದ್ರ ಸ್ವಾಮಿ ಮೇಲೆ ಆಣೆ ಮಾಡಲಿ: ಸಂತಸ್ತ ಮಹಿಳೆ ಸವಾಲ್!
ಬೆಂಗಳೂರು, ಫೆ. 07: ಸೇಡಂ ಶಾಸಕ ರಾಜಕುಮಾರ್ ಪಟೀಲ್ ತೇಲ್ಕೂರ್ ಬ್ಲಾಕ್ ಮೇಲ್ ಪ್ರಕರಣ ರೋಚಕ ತಿರುವು ಪಡೆದಿದೆ. ರಾಜ್ ಕುಮಾರ್ ಪಾಟೀಲ್ ನನಗೆ ಬಾಲ್ಯದಿಂದಲೂ ಸ್ನೇಹಿತರು. ಹೀಗಾಗಿ ಅವರ ಜತೆ ಸಂಪರ್ಕ ಇಟ್ಟುಕೊಂಡಿದ್ದರಿಂದಲೇ ನನಗೆ ಮಗು ಅಗಿದೆ. ಈ ಮಗು ಅವರದ್ದಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸಂತ್ರಸ್ತ ಮಹಿಳೆ ಸೇಡಂ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕರ್ ಗೆ ಸವಾಲು ಹಾಕಿದ್ದಾರೆ.
ಅಖಾಡಕ್ಕೆ ಇಳಿದ ಮಹಿಳೆ ಸುದ್ದಿಗೋಷ್ಠಿ:
ನನಗೆ ಮಹಿಳೆಯೊಬ್ಬಳು ಎರಡು ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ರಾಜ್ಕುಮಾರ್ ತೇಲ್ಕರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಬಳಿಕ ಸಂತ್ರಸ್ತ ಮಹಿಳೆಯನ್ನು ವಿಚಾರಣೆ ನಡೆಸಿ ವಿಧಾನಸೌಧ ಪೊಲೀಸರು ಬಿಟ್ಟು ಕಳಿಸಿದ್ದರು. ಇದೀಗ ಸಂತ್ರಸ್ತ ಮಹಿಳೆ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ತನಗೆ ಅನ್ಯಾಯವಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ಸಲ್ಲಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತ ಮಹಿಳೆ, ನನ್ನ ಜೊತೆ ಹಲವು ವರ್ಷಗಳಿಂದ ಅವರು ಒಡನಾಟ ಇಟ್ಟುಕೊಂಡಿದ್ದರು. ಅದರ ಪರಿಣಾಮವೇ ನನಗೆ ಮಗು ಜನಿಸಿದೆ. ಈಗ ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಮನೆ ದೇವರಾದ ವೀರಭದ್ರಸ್ವಾಮಿಯ ಮೇಲೆ ಆಣೆ ಮಾಡಿ ಹೇಳಲಿ ಎಂದು ಒತ್ತಾಯಿಸಿದರು.

ನನಗೆ ಮಹಿಳೆ ಗೊತ್ತೇ ಇಲ್ಲ ಎಂದು ಹೇಳುವ ಶಾಸಕರು ಬೆಂಗಳೂರಿನ ಶಾಂಗ್ರೀಲಾ ಹೋಟೆಲ್ಗೆ ತಮ್ಮ ಪತ್ನಿಯನ್ನು ಕರೆದುಕೊಂಡು ಮಾತುಕತೆಗೆ ಬಂದಿದ್ದಾದರೂ ಏಕೆ? ಪರಿಚಯವಿಲ್ಲ ಎಂದ ಮೇಲೆ ಬರುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ನಾನು ಶಾಸಕರಿಗೆ ಯಾವುದೇ ರೀತಿಯಲ್ಲೂ ಬ್ಲಾಕ್ಮೇಲ್ ಮಾಡುತ್ತಿಲ್ಲ. ಪ್ರಸ್ತುತ ನಾನು ಬ್ಯೂಟಿಪಾರ್ಲರ್ ನಡೆಸುತ್ತಿದ್ದೇನೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಕಡೇ ಪಕ್ಷ ಅದರ ಪೋಷಣೆಗಾದರೂ ಜೀವನಾಂಶ ಕೊಡಿ ಎಂದು ನೊಂದ ಮಹಿಳೆ ಸೇಡಂ ಶಾಸಕರೂ ಆಗಿರುವ ರಾಜ್ಕುಮಾರ್ ತೇಲ್ಕರ್ ಅವರಿಗೆ ಅವರಿಗೆ ಒತ್ತಾಯಿಸಿದ್ದಾರೆ.
ನನ್ನ ಜೊತೆ ಸಂಬಂಧ ಇಟ್ಟುಕೊಂಡಿರುವುದು ಅವರ ಪತ್ನಿಗೆ ಗೊತ್ತಾಗಿ ವಿಷಯ ರಂಪಾಟವಾಗಬಾರದು ಎಂದು ಖಾಸಗಿ ಹೋಟೆಲ್ನಲ್ಲಿ ಮಾತುಕತೆಗೆ ಬಂದಿದ್ದರು. ಬೇಕಿದ್ದರೆ ಇಲ್ಲಿನ ಸಿಸಿ ಕ್ಯಾಮೆರಾಗಳ ವಿಶ್ಯುಯಲ್ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ನನಗೆ ಅವರ ಜೊತೆ ಮಾತುಕತೆ ಇಲ್ಲವೇ ಸಂಧಾನ ಬೇಕಿಲ್ಲ. ನಾನು ಬ್ಲಾಕ್ಮೇಲ್ ಮಾಡುವ ಅಗತ್ಯವೂ ನನಗಿಲ್ಲ. ನನಗೆ ಅನ್ಯಾಯವಾಗಿದ್ದು, ಶಾಸಕರಿಂದ ನ್ಯಾಯಬೇಕು. ಈಗ ನಾನು ಒಬ್ಬಂಟಿಯಾಗಿದ್ದು ಜೀವನ ಹೇಗೆ ನಿರ್ವಹಿಸಲಿ ಎಂದು ಪ್ರಶ್ನಿಸಿದ್ದಾರೆ.
ಖಂಡಿತವಾಗಿಯೂ ನಾನು ಮಾಧ್ಯಮದವರ ಮುಂದೆ ಬರಬೇಕೆಂದುಕೊಂಡಿರಲಿಲ್ಲ. ನನ್ನ ಮೇಲೆ ಶಾಸಕರು, ಅವರ ಕುಟುಂಬದವರು ಹಾಗೂ ಬೆಂಬಲಿಗರು ದಬ್ಬಾಳಿಕೆ ಮಾಡುತ್ತಿರುವುದರಿಂದ ಮಾಧ್ಯಮದ ಮುಂದೆ ಬರಬೇಕಾಯಿತು ಎಂದು ಇದೇ ವೇಳೆ ಸಂತ್ರಸ್ತ ಮಹಿಳೆ ಹೇಳಿಕೊಂಡರು.
ವಿಧಾನಸೌಧ ಠಾಣೆಯಲ್ಲಿ ನನಗೆ ತುಂಬ ಹಿಂಸೆ ಕೊಟ್ಟಿದ್ದಾರೆ. ಠಾಣೆಯಲ್ಲಿ ವಿಜಯ್ ಎಂಬುವರ ಮುಂದೆ ಕಾಲಿಗೆ ಬೀಳಲು ಮುಂದಾದೆ. ಆದರೂ ಕೇಳಲಿಲ್ಲ. ನಾವು ನಿಮಗೆ ಎಲ್ಲ ಸಹಾಯ ಮಾಡುತ್ತೇವೆ. ನೀವು ನಾವು ಹೇಳಿದ ಹಾಗೆ ನಡೆದುಕೊಳ್ಳಬೇಕು. ಇದಕ್ಕೆಲ್ಲ ಕಾಂಗ್ರೆಸ್ ವರ ಕುಮ್ಮಕ್ಕಿದೆ ಎಂದು ನಾವು ಬರೆದುಕೊಟ್ಟ ಪತ್ರಕ್ಕೆ ಸಹಿ ಹಾಕಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪದಿದ್ದಾಗ ನನಗೆ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಯಾವ ಮಹಿಳೆ ಕೂಡ ತನ್ನ ಮಗುವನ್ನು ಜನನದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇಬ್ಬರಲ್ಲಿ ಒಬ್ಬ ಮಗ ಶಾಸಕರಿಗೆ ಹುಟ್ಟಿದ್ದು, ಇದನ್ನು ಹೇಳಲು ನನಗೆ ಯಾವುದೇ ಮುಜಗರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳೆಯಿಂದ ಫೇಸ್ಬುಕ್ನಲ್ಲಿ ಲೈವ್:
ನನಗೆ ಶಾಸಕರಿಂದ ವಂಚನೆಯಾಗಿದೆ. ನನಗೆ ನ್ಯಾಯ ಬೇಕು, ಪೊಲೀಸರು ನನ್ನನ್ನು ಕಾನೂನು ಬಾಹಿರವಾಗಿ ಒತ್ತೆಯಲ್ಲಿಟ್ಟಿದ್ದಾರೆ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಸೇಡಂನ ಬಿಜೆಪಿ ಶಾಸಕರಾಗಿರುವ ರಾಜಕುಮಾರ ಪಾಟೀಲ್ ತೆಲ್ಕೂರ್ ಈ ಪ್ರಕರಣದ ಕೇಂದ್ರಬಿಂದುವಾಗಿದ್ದು, ಮಹಿಳೆಗೆ ವಂಚನೆ ಮಾಡಿದ ಆರೋಪಕ್ಕೆ ಸಿಲುಕಿದ್ದಾರೆ. ಶಾಸಕ ತೆಲ್ಕೂರ್ ವಿರುದ್ಧ ಮಹಿಳೆಯೊಬ್ಬರು ದೌರ್ಜನ್ಯ ಆರೋಪ ಮಾಡಿದ್ದಾರೆ. ಕಳೆದ 14 ವರ್ಷದಿಂದ ತನ್ನ ಮೇಲೆ ಶಾಸಕನ ದೌರ್ಜನ್ಯ ನಡೆದಿದ್ದು, ತನಿಗೆ ಹಾಗೂ ತನ್ನ ಮಗನಿಗೆ ನ್ಯಾಯಬೇಕು ಅಂತ ಮಹಿಳೆ ಹೇಳಿಕೊಂಡಿದ್ದಾರೆ.
ಕೇರಳದಿಂದ ಕರೆತಂದ್ರು:
ಕೇರಳದಲ್ಲಿದ್ದ ನನ್ನನ್ನು ಬೆಂಗಳೂರಿನಿಂದ ಬಂದ ಪೊಲೀಸರು ಯಾವುದೇ ಸೂಚನೆ ನೀಡದೆ ಬಂಧಿಸಿ ಇಲ್ಲಿಗೆ ಕರೆತಂದಿದ್ದಾರೆ. ಬೆಂಗಳೂರು ವಿಧಾನಸೌಧ ಪೊಲೀಸರು ಬೆಳಗ್ಗೆ ಮನೆಯಿಂದ ಕರೆತಂದು ರಾತ್ರಿ 9 ಗಂಟೆವರೆಗೆ ಸ್ಟೇಷನ್ ನಲ್ಲಿ ಕೂಡಿ ಹಾಕಿದ್ದಾರೆ.ಕಾಂಗ್ರೆಸ್ ಪ್ರಚೋದಿಸಿದ್ದು ಕಾಂಗ್ರೆಸ್ ನವರು ಹೇಳಿದಂತೆ ಆರೋಪ ಮಾಡಿದ್ದೇನೆ ಎಂದು ಬರೆದುಕೊಡು ಎಂದು ಸಿಬ್ಬಂದಿ ಒತ್ತಡ ಹಾಕಿದ್ದಾರೆಂದು ಮಹಿಳೆ ಹೇಳಿಕೊಂಡಿದ್ದಾರೆ.
ಸ್ಟೇಷನ್ ನಿಂದ ಹೊರಬಂದ ಮೇಲೆ ವಕೀಲ ಜಗದೀಶ್ ಅವರಿಗೆ ವಿಡಿಯೋ ಕಾಲ್ ಮಾಡಿದ ಮಹಿಳೆ, ತನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದು, ವಕೀಲ ಜಗದೀಶ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಈ ಪ್ರಕರಣವನ್ನು ಜನರ ಮುಂದೆ ಇಟ್ಟಿದ್ದಾರೆ.
ನಾನು ತಪ್ಪು ಮಡಿಲ್ಲ ಎಂದು ರಾಜ್ಕುಮಾರ್:
ಮಹಿಳೆಯ ಆರೋಪಕೆ ಪ್ರತಿಕ್ರಿಯಿಸಿರುವ ಶಾಸಕ ತೆಲ್ಕೂರ್, ನಾನು ಯಾವುದೇ ತಪ್ಪು ಮಾಡಿಲ್ಲ, ಎಂತಹ ತನಿಖೆಗೂ ಸಿದ್ಧನಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸರಕಾರ ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಸಬಹುದು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ, ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ, ಪಕ್ಷಕ್ಕೆ ಹಾಗೂ ಮತದಾರರಿಗೆ ಮುಜುಗರ ತರುವ ಕೆಲಸ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದು ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. ಮಹಿಳೆಯಿಂದ ನನಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ನಡಿಯುತ್ತಿದೆ. ಹೀಗಾಗಿ ಪೋಲೀಸ್ ದೂರು ನೀಡಿದ್ದೇನೆ. ಹೀಗಾಗಿ ವಿಧಾನಸೌಧ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಇದನ್ನು ಎದರಿಸಲು ಸಿದ್ದನಿದ್ದೇನೆ ಎಂದು ತೇಲ್ಕೂರ್ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಮಹಿಳೆ ಪರವಾಗಿ ಕಾನೂನು ಹೋರಾಟ ಮಾಡಿದ್ದ ವಕೀಲ ಜಗದೀಶ್ ಮಧ್ಯಮಪ್ರವೇಶಿಸಿದ್ದು, ಮಹಿಳೆಗೆ ನ್ಯಾಯ ಕೊಡಿಸಲು ಕಾನೂನು ಸಮರ ಸಾರುವುದಾಗಿ ಹೇಳಿಕೊಂಡಿದ್ದಾರೆ.












Click it and Unblock the Notifications