ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ 'ಸಿಡಿ' ತನಿಖೆ ನಡೆಯಬೇಕು: ಸಿದ್ದರಾಮಯ್ಯ ಆಗ್ರಹ!
ಬೆಂಗಳೂರು, ಮಾ. 22: ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಹಾಗೂ ಆರು ಜನ ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರವನ್ನು ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ನಿಯಮ 69 ರಡಿ ಅವರು ಪ್ರಸ್ತಾಪಿಸಿದ್ದಾರೆ.
ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಅವರೇ ಸಿಡಿ ಮಾಡುವ ಗ್ಯಾಂಗ್ ಇದೆ ಎಂದಿದ್ದಾರೆ. ಹೀಗಾಗಿ ಇಡೀ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತನಿಖೆ ನಡೆಸಬೇಕು. ಹೀಗಾಗಿ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನಿಗಾದಡಿ ತನಿಖೆ ನಡೆಯಬೇಕು. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯ. ಸಿಡಿ ಪ್ರಕರಣ ಕುರಿತು ಗುಣಮಟ್ಟದ ತನಿಖೆ ನಡೆದು ಸತ್ಯಾಂಶ ಹೊರ ಬರದೇ ಇದ್ದರೆ, ಸದನದ ಮರ್ಯಾದೆ ಉಳಿಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆರು ಸಚಿವರು ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಗ್ರಹ!
ಈಗ ಎಸ್ಐಟಿ ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದೆ. ಆ ಹೆಣ್ಣು ಮಗಳಿಗೆ ಅನ್ಯಾಯ ಆಗಿರುವ ಬಗ್ಗೆ ತನಿಖೆ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ದೂರು ದಾಖಲು ಮಾಡಿ, ರಮೇಶ್ ಜಾರಕಿಹೊಳಿ ವಿರುದ್ಧ ತನಿಖೆ ನಡೆಸಬೇಕು. ಅತ್ಯಾಚಾರ ಪ್ರಕರಣ ದಾಖಲು ಮಾಡದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜೊತೆಗೆ ಈ 'ಸಿಡಿ' ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 376ರಡಿ ಎಫ್ಐಆರ್ನ್ನು ಯಾಕೆ ದಾಖಲು ಮಾಡಿಲ್ಲ? ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ? ಸಂತ್ರಸ್ತೆಗೆ ಒಂದು ನ್ಯಾಯ ಅಂತ ಇದೆಯಾ? ಪೊಲೀಸರೇ ದೂರು ದಾಖಲಿಸಿಕೊಳ್ಳುತ್ತಾರೆ ಎನ್ನುತ್ತೀರಿ. ಹಾಗಾದ್ರೆ ಎಸ್ಐಟಿ ರಚನೆ ಮಾಡಿದ್ದು ಯಾಕೆ? ಈ ಪ್ರಕರಣದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯೇ ವಿಫಲವಾಗಿದೆ. ಸಂತ್ರಸ್ತೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪು ಏನು? ಅದನ್ನು ಪಾಲಿಸಬೇಕಾಗಿತ್ತು. ಸಂತ್ರಸ್ತೆಯ ಪರವಾಗಿ ಮೊದಲು ಪ್ರಕರಣ ದಾಖಲಾಗಬೇಕಿತ್ತು. ಆದರೆ ದೂರು ದಾಖಲಿಸದೆ ಇರುವುದರಿಂದ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಸಿಡಿದ 'ಸಿಡಿ': ದಿನೇಶ್ ಕಲ್ಲಹಳ್ಳಿ ದೂರು ಯಾಕೆ ದಾಖಲಾಗಲಿಲ್ಲ? ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ!
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ವಶಕ್ಕೆ ಪಡೆದಿದ್ದಾರೆ. ಶ್ರವಣ್ ಎಂಬುವರ ಸಹೋದರ ಚೇತನ್, ಚೇತನ್ ಎಂಬುವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೇತನ್ಗೆ ಸೂರ್ಯ ಮುಕುಂದ್ ರಾಜ್ ಎಂಬುವನ ಸಹಕಾರವಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಲಾಯರ್ ಜೊತೆ ಕ್ಲೈಂಟ್ ಮಾತನಾಡುವುದು ತಪ್ಪೇ? ಎಸ್ಐಟಿ ತನಿಖೆ ಷಡ್ಯಂತ್ರದ ತನಿಖೆ ಮಾಡುತ್ತಿದೆ ಅಷ್ಟೇ. ಆದರೆ ಅನ್ಯಾಯವಾದ ಸಂತ್ರಸ್ತೆ ಬಗ್ಗೆ ಯಾವ ತನಿಖೆ ಆಗುತ್ತಿಲ್ಲ? ಆ ಹೆಣ್ಣುಮಗಳಿಗೆ ರಕ್ಷಣೆ ಕೊಟ್ಟಿಲ್ಲ? ಪೊಲೀಸರು ತಾರತಮ್ಯ ಮಾಡುತ್ತಿಲ್ಲವಾ? ತಕ್ಷಣ ಐಪಿಸಿ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಬೇಕು. ಆ ನಿಟ್ಟಿನಲ್ಲೇ ತನಿಖೆ ಮುಂದುವರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Recommended Video
ಪ್ರಕರಣದ ಹಿನ್ನೆಲೆ: ಕಳೆದ ಮಾರ್ಚ್ 2 ರಂದು ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎಂಬ ದೃಶ್ಯಗಳಿರುವ ಸಿಡಿ ಬಿಡುಗಡೆಯಾಗಿತ್ತು. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ 'ಸಿಡಿ'ಯೊಂದಿಗೆ ದೂರು ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ 'ಸಿಡಿ'ಯಲ್ಲಿನ ದೃಶ್ಯಾವಳಿಗಳೂ ಬಿಡುಗಡೆ ಆಗಿದ್ದವು. ಅದಾದ ಬಳಿಕ ಮಾರ್ಚ್ 3 ರಂದು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ನಂತರ ರಮೇಶ್ ಜಾರಕಿಹೊಳಿ ಅವರ ಮನವಿಯಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಮಾರ್ಚ್ 12ರಂದು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಮರುದಿನ ಅಂದರೆ ಮಾರ್ಚ್ 13ರಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದರು. ದೂರು ಆಧರಿಸಿ ಎಫ್ಐಆರ್ ಹಾಕಿದ್ದ ಬೆಂಗಳೂರಿನ ಸದಾಶಿವನಗರ ಪೊಲೀಸರು ನಂತರ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿದ್ದರು.